ಗೌರಿಗೆ ಗುಂಡಿಕ್ಕಿದ್ದು ವಾಘ್ಮೋರೆಯೇ: ಎಫ್ಎಸ್ಎಲ್ ವರದಿಯಿಂದ ದೃಢ
ಬೆಂಗಳೂರು, ಸೆಪ್ಟೆಂಬರ್ 04: ಗೌರಿ ಲಂಕೇಶ್ ಅವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದು ಪರಶುರಾಮ್ ವಾಘ್ಮೋರೆಯೇ ಎಂಬುದನ್ನು ಎಫ್ಎಸ್ಎಲ್ ವರದಿ ದೃಢ ಪಡಿಸಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಕೆಲವು ದೃಶ್ಯಗಳು, ಮತ್ತು ಅದೇ ಘಟನೆಯ ಮರುಸೃಷ್ಠಿಯ ವಿಡಿಯೋಗಳನ್ನು ಎಸ್ಐಟಿ ಪೊಲೀಸರು ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದರು. ಎಲ್ಲವನ್ನೂ ಪರಿಶೀಲಿಸಿರುವ ಎಫ್ಎಸ್ಎಲ್ (ಫೊರಾನ್ಸಿಕ್ ಸೈನ್ಸ್ ಲ್ಯಾಬೊರೆಟರಿ) ತಜ್ಞರು ವಾಘ್ಮೋರೆಯೇ ಗೌರಿಗೆ ಗುಂಡಿಕ್ಕಿರುವುದು ಎಂದು ದೃಢಪಡಿಸಿದ್ದಾರೆ.
ಎಂ.ಎಂ.ಕಲಬುರ್ಗಿ ಕೊಂದವರೇ ಗೌರಿ ಲಂಕೇಶ್ ಹತ್ಯೆ ಮಾಡಿದ್ದು!
ಸಿಂಧಗಿಯ ಪರಶುರಾಮ್ ವಾಘ್ಮೋರೆ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರಿಗೆ ಮವರ ನಿವಾಸದ ಬಳಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದ. ಇದನ್ನು ಎಸ್ಐಟಿ ವಿಚಾರಣೆ ವೇಳೆ ಆತನೂ ಒಪ್ಪಿಕೊಂಡಿದ್ದ. ಆದರೆ ಎಸ್ಐಟಿಯು ವಸ್ತು ಸಾಕ್ಷಿಗಾಗಿ ಎಫ್ಎಸ್ಎಲ್ ವರದಿ ಮೊರೆ ಹೋಗಿದ್ದರು.
12 ಜನರ ಬಂಧನ
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 12 ಮಂದಿಯನ್ನು ಬಂಧಿಸಲಾಗಿದ್ದು. ಅಂದು ಹತ್ಯೆಗೆ ಬಳಸಿದ್ದ ಎರಡು ಬೈಕ್, ಒಂದು ಮಾರುತಿ ವ್ಯಾನ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಗೌರಿ ಹತ್ಯೆಗೆ ಬಳಸಿದ್ದ ಬಂದೂಕು ಸಹ ಮಹರಾಷ್ಟ್ರದಲ್ಲಿ ದೊರೆತಿದೆ.
ಸಹಚರನ ಜತೆ ಬೈಕಿನಲ್ಲಿ ಬಂದು ಕೃತ್ಯ
ಸೆಪ್ಟೆಂಬರ್ 5ರಂದು ಪರಶುರಾಮ್ ವಾಘ್ಮೋರೆ ಆತನ ಸಹಚರನ ಬೈಕಿನಲ್ಲಿ ಬಂದು ಆಗತಾನೆ ಮನೆಗೆ ಬಂದಿದ್ದ ಗೌರಿ ಲಂಕೇಶ್ ಅವರಿಗೆ ಅವರ ಮನೆಯ ಬಳಿಯೇ ಗುಂಡು ಹೊಡೆದಿದ್ದ. ಆಗ ಬೈಕ್ ಚಲಾಯಿಸುತ್ತಿದ್ದವ ಹುಬ್ಬಳ್ಳಿಯ ಗಣೇಶ್ ವಿಸ್ಕಿನ್ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಆತನೂ ಈಗ ಎಸ್ಐಟಿ ಪೊಲೀಸರ ವಶದಲ್ಲಿದ್ದಾನೆ.
ಪೊಲೀಸ್ ಮನೆಯಲ್ಲಿ ಕೂತೇ ಗೌರಿ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು!
ಜೂನ್ 7ರಂದು ಪರಶುರಾಮ ವಾಘ್ಮೋರೆ ಬಂಧನ
ವಿಜಯಪುರದ ಸಿಂಧಗಿಯವನಾದ ಪರಶುರಾಮ್ ವಾಘ್ಮೋರೆಯನ್ನು ಎಸ್ಐಟಿ ಪೊಲೀಸರು ಜೂನ್ 7ರಂದು ಬಂಧಿಸಿದರು. ಗೌರಿ ಹಂತಕರ ಜಾಲದ ಒಬ್ಬಾತನಿಂದ ಈತನಿಗೆ ಶಸ್ತ್ರಾಸ್ತ್ರ ಚಲಾಯಿಸುವ ತರಬೇತಿ ಕೊಡಿಸಲಾಗಿತ್ತು. ರಾಜೇಶ ಬಂಗೇರನೇ ಆತನಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದವ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ತಪ್ಪೊಪ್ಪಿಕೊಂಡಿರುವ ವಾಘ್ಮೋರೆ
ಗೌರಿ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಹಾಗೂ ದಾದಾ ಅವರುಗಳ ಸೂಚನೆಯಂತೆ ನಡೆದುಕೊಂಡಿದ್ದ ಪರಶುರಾಮ್ ವಾಘ್ಮೋರೆಯ ಬಂಧನವಾದ ನಂತರವೇ ಸಂಚಿನ ಬಹುತೇಕ ಅಂಶಗಳು ಹೊರಗೆ ಬಂದವು. ಪರಶುರಾಮ್ ವಾಘ್ಮೋರೆ ಎಸ್ಐಟಿ ಪೊಲೀಸರಿಗೆ ಎಲ್ಲ ವಿಷಯವನ್ನು ಚಾಚೂ ತಪ್ಪದೆ ಹೇಳಿದ್ದಾನೆ ಎನ್ನಲಾಗಿದೆ.
ಗೌರಿ ಹತ್ಯೆ ಮಾಡಲು ಗುಂಡು ಕೊಟ್ಟಿದ್ದು ಸರ್ಕಾರಿ ನೌಕರ!
ಬಂಧಿತ ಆರೋಪಿಗಳ ಹೆಸರುಗಳು
ಈ ವರೆಗೆ 12 ಜನರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಅವರ ಹೆಸರುಗಳು ಇಂತಿವೆ. ನವೀನ್ ಕುಮಾರ್ ಕೆ.ಟಿ., ಪ್ರವೀಣ್ ಅಲಿಯಾಸ್ ಸುಜಿತ್, ಅಮೋಲ್ ಕಾಳೆ, ಮನೋಹರ ಯಡವೆ, ಪರಶುರಾಮ್ ವಾಘ್ಮೋರೆ, ಗಣೇಶ್ ವಿಸ್ಕಿನ್, ಅಮಿತ್ ಬದ್ದಿ, ರಾಜೇಶ್ ಬಂಗೇರಾ, ಅಮಿತ್ ದಗ್ವೇಕರ್, ಮೋಹನ್ ನಾಯಕ್, ಎಚ್.ಎಸ್.ಸುರೇಶ್, ಬೆಳಗಾವಿಯ ಭರತ್. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.