ಶಾಸಕರು ಅವ್ರ ಮನೇಲೂ ಇಲ್ಲ, ಈ ಮನೇಲೂ ಇಲ್ಲ, ಇನ್ಯಾರ ಮನೆಯಲ್ಲಿದ್ದಾರೋ, ಹುಡುಕಿಸಿ ಕೊಡಿ
ಬೆಂಗಳೂರು, ಫೆ 4: ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾಜಿ ಸ್ಪೀಕರ್ ಮತ್ತು ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್, ತಾವು ಸ್ಪೀಕರ್ ಆಗಿದ್ದ ಅವಧಿಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದೆ ಎನ್ನುವುದರ ಬಗ್ಗೆ ಸ್ವಾರಸ್ಯಕರವಾಗಿ ವಿವರಣೆ ನೀಡಿದರು.
ಸದನ ನಡೆಯುತ್ತಿದ್ದಾಗ ಶಾಸಕರು, ಸಚಿವರು, ಹಣಕಾಸು ಮತ್ತು ಇತರ ಇಲಾಖೆಯ ಅಧಿಕಾರಿಗಳು ಗೈರಾಗಿರುವುದಕ್ಕೆ ನಿನ್ನೆಯೂ ಕೆಂಡಾಮಂಡಲವಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದೂ ಸಿಟ್ಟಾದರು. 'ಏನು ಮಕ್ಕಳಾಟ ಆಡುತ್ತಿದ್ದೀರಾ'ಎಂದು ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಗದರಿಸಿದರು.
ಆಗ ಎದ್ದು ನಿಂತ ರಮೇಶ್ ಕುಮಾರ್, "ನಾನು ಈ ಹಿಂದೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದರಿಂದ ಈ ಹಿತವಚನವನ್ನು ಹೇಳುತ್ತಿದ್ದೇನೆ. ಚೀಫ್ ವಿಪ್ ಯಾರಿರುತ್ತಾರೋ ಅವರು ಸದನ ಆರಂಭವಾಗುವ ಮುನ್ನ ನಿಮ್ಮನ್ನು (ಸ್ಪೀಕರ್) ಬಂದು ಕಾಣಬೇಕು. ಇದು ಪದ್ದತಿ, ಎಷ್ಟು ಜನ ಮಂತ್ರಿಗಳು, ಶಾಸಕರು ಇಂದು ಸಭೆಯಲ್ಲಿ ಇರುತ್ತಾರೆ ಎಂದು ನಿಮಗೆ ತಿಳಿಸಬೇಕು".
"ನಮ್ಮ ಪಕ್ಷದ ಸದಸ್ಯರೂ ಸೇರಿ ಸುಮಾರು ಶಾಸಕರು ಹಾಜರಾತಿ ಪುಸ್ತಕಕ್ಕೆ ಸಹಿಹಾಕಿ ಸದನದ ಹೊರಗೆ ಹೋಗುತ್ತಾರೆ. ನಾನು ನಿಮ್ಮ ಜಾಗದಲ್ಲಿ ಕೂತಿದ್ದಾಗ ಅಟೆಂಡೆನ್ಸ್ ಪುಸ್ತಕಕ್ಕೆ ತರಿಸಿಕೊಳ್ಳುತ್ತಿದೆ. ಯಾವ ಸದಸ್ಯರು ಹಾಜರಾಗಿರುವುದಿಲ್ಲವೋ ಅವರ ಮನೆಗೆ ಫೋನ್ ಮಾಡಿಸುತ್ತಿದ್ದೆ. ಕೆಲವು ಶಾಸಕರು ಮನೆಯಲ್ಲೂ ಇರಲ್ಲ, ಇಲ್ಲೂ ಇರಲ್ಲ, ಬೇರೆ ಯಾರ ಮನೇಲಿ ಇದ್ದಾರೋ ಸ್ವಲ್ಪ ಹುಡುಕಿಸಿ ಕೊಡಿ ಎಂದು ಹೇಳುತ್ತಿದ್ದೆ" ಎಂದು ರಮೇಶ್ ಕುಮಾರ್ ಹೇಳಿದರು.

ವಿರೋಧ ಪಕ್ಷದ ನಾಯಕ ಸುಮಾರು 45 ನಿಮಿಷ ಮಾತನಾಡಿದರು
"ಬರೀ ಅಧಿಕಾರಿಗಳಿಗೆ ಮಾತ್ರ ಜವಾಬ್ದಾರಿಯಲ್ಲ, ನಮಗೂ ಬೇಕು. ವಿರೋಧ ಪಕ್ಷದ ನಾಯಕ ಸುಮಾರು 45 ನಿಮಿಷ ಮಾತನಾಡಿದರು. ಅಸೆಂಬ್ಲಿಗೆ ಬರುವುದಕ್ಕೆ ಶಾಸಕರಿಗೆ ಆಸಕ್ತಿ ಇಲ್ಲ ಎಂದ ಮೇಲೆ, ಅವರು ಯಾಕೆ ಶಾಸಕರಾಗಿ ಇರಬೇಕು"ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತ ಪಡಿಸಿದರು.

ರಮೇಶ್ ಕುಮಾರ್ ಹಾಸ್ಯ ಚಟಾಕಿ
"ನಮ್ಮಲ್ಲಿ ಎಲ್ಲರೂ ಕ್ಯಾಬಿನೆಟ್ ಮಿನಿಸ್ಟರೇ, ಅವರಿಗೆ ಅನುಭವ ಇರುವುದಿಲ್ಲ, ಪದ್ದತಿಗ ಬಗ್ಗೆಯೂ ಗೊತ್ತಿರುವುದಿಲ್ಲ. ಪರಿಸ್ಥಿತಿ ಈ ರೀತಿ ಇರುವಾಗ ಎಲ್ಲಾ ಜವಾಬ್ದಾರಿ ನಿಮ್ಮ ಮೇಲೆ ಬೀಳುತ್ತೆ. ಆರಂಭದಲ್ಲಿ ನೀವು (ಸ್ಪೀಕರ್ ಕಾಗೇರಿ) ಪೂರ್ಣಚಂದ್ರ ರೀತಿಯಲ್ಲಿ ಇದ್ರಿ, ಈಗ ಅಮವಾಸ್ಯೆ ರೀತಿ ಆಗ್ಬಿಟ್ಟಿದ್ದೀರಾ"ಎಂದು ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದರು.

ಸದನದ ಗೌರವ ಹೆಚ್ಚಾಗಬೇಕು
"ನನ್ನ 43 ವಯಸ್ಸಿನಲ್ಲೇ ನಾನು ಸ್ಪೀಕರ್ ಆಗಿದ್ದೆ. ಚೀಫ್ ವಿಪ್ ಅನ್ನು ಈ ಕೂಡಲೇ ಕರೆಯಿರಿ. ಸದನದ ಗೌರವ ಹೆಚ್ಚಾಗಬೇಕು. ಅಧಿಕಾರಿಗಳು ಇರುವ ಹಾಗೇ ನಾವು ಮಾಡಬೇಕು. ಶಾಸಕರಿಗೆ ಸದನಕ್ಕೆ ಬರಲು ಆಗದೇ ಇದ್ದರೆ, ಅವರ ರಾಜೀನಾಮೆಯನ್ನು ತೆಗೆದುಕೊಳ್ಳಿ"ಎನ್ನುವ ಸಲಹೆಯನ್ನು ರಮೇಶ್ ಕುಮಾರ್ ನೀಡಿದರು.

ಸ್ಪೀಕರ್ ಕಾಗೇರಿ ಪ್ರತಿಕ್ರಿಯೆ
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, "ನಾನು ಎಷ್ಟೇ ಕಾನೂನನ್ನು ಮಾಡಿದರೂ, ನಮಗೆ ನಾವೇ ಜವಾಬ್ದಾರಿ ತೆಗೆದುಕೊಳ್ಳದೇ ಇದ್ದಲ್ಲಿ ಇಂತಹ ಸ್ಥಿತಿ ಮುಂದುವರಿಯುತ್ತಲೇ ಇರುತ್ತದೆ. ಎಲ್ಲವನ್ನೂ ಜನ ನೋಡುತ್ತಿರುತ್ತಾರೆ, ನಮ್ಮ ಮರ್ಯಾದೆ ಹಾಳಾಗುತ್ತಿದೆ. ನಿಮ್ಮ ಸಲಹೆಯನ್ನು ಪಡೆದುಕೊಂಡಿದ್ದೇನೆ, ವ್ಯವಸ್ಥೆಗೆ ಶಕ್ತಿ ನೀಡುವ ಕೆಲಸವನ್ನು ಮಾಡುತ್ತೇನೆ"ಎಂದು ಕಾಗೇರಿಯವರು ಹೇಳಿದರು.












Click it and Unblock the Notifications