ಕಳಸಾ-ಬಂಡೂರಿ ಹೋರಾಟಕ್ಕೆ ಸಿರಿಮನೆ ನಾಗರಾಜು ಬೆಂಬಲ
ಹುಬ್ಬಳ್ಳಿ, ಅಕ್ಟೊಬರ್, 15 : ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸಲು ನ್ಯಾಯಸಮ್ಮತವಾಗಿ ಹೋರಾಟ ಮಾಡುತ್ತಿರುವ ರೈತ ಸಮುದಾಯಕ್ಕೆ ಮಾಜಿ ನಕ್ಸಲ್ ನಾಯಕ ಹಾಗೂ ಜನಾಂದೋಲನ ಸಮಿತಿಯ ಸಿರಿಮನೆ ನಾಗರಾಜು ಬೆಂಬಲ ನೀಡುವುದಾಗಿ ಅಕ್ಟೋಬರ್ 14ರ ಬುಧವಾರದಂದು ಹೇಳಿದರು.
ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿರಿಮನೆ ನಾಗರಾಜು ಅವರು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮೂರು ರಾಜ್ಯಗಳ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕರನ್ನು ಒಪ್ಪಿಸಬೇಕು. ಜಲಸಂಪನ್ಮೂಲ ಸಂರಕ್ಷಣೆಗೆ ಹೊಸ ಯೋಜನೆಗಳನ್ನು ಸರಕಾರ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.[ಚಿಕ್ಕಮಗಳೂರಿನಲ್ಲಿ ಇಬ್ಬರು ನಕ್ಸಲರ ಶರಣಾಗತಿ]
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ದೇವನೂರು ಮಹಾದೇವ ಅವರ ಅಣತಿಯ ಮೇರೆಗೆ ಜನಾಂದೋಲನ ಸಮಿತಿ ರಚಿಸಿ ಕಳಸಾ ಯೋಜನೆ ಉದ್ದೇಶಿತ ಸ್ಥಳ ಪರಿಶೀಲಿಸಲಾಗಿದೆ. ಈಗಾಗಲೇ ನಾವು ನಕ್ಸಲ್ ಜನಾಂದೋಲನದಿಂದ ಹೊರಬಂದಿದ್ದು, ರೈತ ಸಮುದಾಯದ ಬೆನ್ನಿಗೆ ನಿಂತಿದ್ದೇನೆ ಎಂದು ತಿಳಿಸಿದರು.[ಏನಿದು ಕಳಸಾ-ಬಂಡೂರಿ ಯೋಜನೆ?]
ಪ್ರಧಾನಿ ಭೇಟಿ :
ಕಳಸಾ ಯೋಜನೆಯ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಯೋಜನೆ ಜಾರಿಗೆ ನಮ್ಮ ಸರ್ಕಾರ ಮತ್ತೊಮ್ಮೆ ಪ್ರಧಾನಿ ಬಳಿ ತೆರಳಿ ಚರ್ಚೆ ನಡೆಸಲಿದೆ. ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸರ್ವಪಕ್ಷ ಸಭೆ : ಸರ್ವಪಕ್ಷದವರೊಡನೆ ಚರ್ಚಿಸಿ ಕಳಸಾ-ಬಂಡೂರಿ ಯೋಜನೆಗೆ ಸಂಬಂಧಪಟ್ಟ ಯಾವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ತೀರ್ಮಾನಿಸಲಾಗುತ್ತಿದೆ ಎಂದು ಸಿ.ಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.