ಮತದಾರರ ಮಾಹಿತಿ ಕಳವು; ರಾಮನಗರ,ಮಂಡ್ಯ, ಕಲಬುರಗಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ನವೆಂಬರ್ 30: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ರಾಮನಗರ, ಮಂಡ್ಯ, ಕಲಬುರಗಿಯಲ್ಲಿ ಅಕ್ರಮ ನಡೆದಿದೆ. ನಮ್ಮ ಕ್ಷೇತ್ರದಲ್ಲೇ 16,000 ಮತಗಳನ್ನು ಡಿಲೀಟ್ ಆಗಿವೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾರ್ಮ್ 7 ಇಲ್ಲದೆ ಇದು ನಡೆದಿದೆ. ಮ್ಯಾಪ್ ಗಳಲ್ಲಿ ಎಲ್ಲವೂ ಮಾಹಿತಿ ಇದೆ. ಇದು ಖಾಸಗಿ ಸಂಸ್ಥೆಗೆ ಮಾಹಿತಿ ಹೇಗೆ ಸಿಗುತ್ತದೆ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿ ಕ್ರಿಮಿನಲ್ ಅಪರಾಧಗಳನ್ನು ತೊಳೆಯುವ ವಾಷಿಂಗ್ ಮಷಿನ್-ಪ್ರಿಯಾಂಕ್ ಖರ್ಗೆ
ಬ್ಲಾಕ್ ಅಧ್ಯಕ್ಷರ ಹೆಸರೇ ಇಲ್ಲವಾಗಿದೆ. ಫಾರ್ಮ್ 7 ಅನ್ನು ನೀಡುತ್ತಿಲ್ಲ.ಇವರು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ನೀವು ಬಿಬಿಎಂಪಿ ನಕ್ಷೆ ನೋಡಿ. ಖಾಸಗಿ ಸಂಸ್ಥೆಯು ಸರ್ಕಾರದ ಸಹಕಾರ ಇಲ್ಲದೇ ಇಷ್ಟು ಆಳ ಸಮೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಇದು ಮತದಾರರ ಪಟ್ಟಿಗೆ ಸೀಮಿತಗೊಳಿಸಿಲ್ಲ. ಈ ಸರ್ಕಾರ ನಾಗರೀಕರ ಮೇಲೆ ಕಣ್ಣಿಡುವ ಪ್ರಯತ್ನ ಮಾಡುತ್ತಿದೆ. ನಮ್ಮ ನಾಗರೀಕರ ಸಾಮಾಜಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತದಾರರ ಗುರುತಿನ ಚೀಟಿಯನ್ನು ಆಧಾರ್ ಜತೆ ಜೋಡಿಸಿದರು. ಮೊಬೈಲ್ ಸಂಖ್ಯೆಯೂ ಇದರಲ್ಲಿದೆ. ಇದರಲ್ಲಿ ಸಾಮಾಜಿಕ ಜಾಲತಾಣ ಇರುತ್ತದೆ.
ನಿಮ್ಮ ಸಂಖ್ಯೆ ಮೂಲಕ ನಿಮ್ಮ ರಾಜಕೀಯ ಆಸಕ್ತಿ ಯಾರ ಕಡೆ ಇದೆ ಎಂದು ಪರಿಶೀಲನೆ ಮಾಡುತ್ತಾರೆ. ನೀವು ಕಾಂಗ್ರೆಸ್ ನಾಯಕರ ಬಗ್ಗೆ ಆಸಕ್ತಿ ತೋರಿದರೆ ನಿಮ್ಮ ಹೆಸರು ಬಿಡುತ್ತಾರೆ. ಮೋದಿ ಹಾಗೂ ಬಿಜೆಪಿ ಬಗ್ಗೆ ಆಸಕ್ತಿ ತೋರಿದರೆ ನಿಮ್ಮನ್ನು ಉಳಿಸಿಕೊಳ್ಳುತ್ತಾರೆ. ಇದು ಮತದಾರರ ಪಟ್ಟಿಗೆ ಹೊರತಾಗಿ ವಿಸ್ತರಿಸಿದ್ದಾರೆ. ಖಾಸಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಈ ಸರ್ಕಾರ ಹಿಂಪಡೆದಿದ್ದು ಯಾಕೆ? ಇದು ನಾಗರೀಕರ ಮೇಲೆ ಕಣ್ಣು ಇಡುವ ಅಗತ್ಯ ಏನಿದೆ? ನಿಮ್ಮ ಮೇಲೆ 24/7 ಕಣ್ಣಿಡುತ್ತಿದ್ದಾರೆ ಎಂದರು.
ಬಿಜೆಪಿ ನಾಯಕರ ಜತೆ ರೌಡಿ ಶೀಟರ್ ವೇದಿಕೆ ಹಂಚಿಕೊಂಡ ವಿಚಾರವಾಗಿ ಮಾತನಾಡಿ, ಇದು ರಾಜ್ಯದಲ್ಲಿ ಮಾತ್ರವಲ್ಲ. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಕಳ್ಳರಿಂದ ಚಿಕ್ಕ ಕಳ್ಳರು ಎಲ್ಲರೂ ಬಿಜೆಪಿ ಸೇರುತ್ತಿದ್ದಾರೆ. ದೊಡ್ಡವರಿಗೆ ಸಿಬಿಐ, ಐಟಿ, ಇಡಿ ನೊಟೀಸ್ ಕೊಟ್ಟು ಸೇರಿಸಿಕೊಂಡರೆ, ಇಲ್ಲಿ ವಾಂಟೆಡ್ ಪಟ್ಟಿಯಲ್ಲಿ ಸೇರಿಸಿ ಸೆಳೆಯುತ್ತಿದ್ದಾರೆ. ಇಲ್ಲಿ ಮ್ಯಾಜಿಕ್ ಏನೆಂದರೆ ನೀವು ನಿಮ್ಮ ಪಾಪ ತೊಳೆದುಕೊಳ್ಳಲು ಕಾಶಿ ಯಾತ್ರೆ ಮಾಡಬೇಕಿಲ್ಲ, ಬಿಜೆಪಿ ಶಾಲು ಹಾಕಿಕೊಂಡರೆ ಇಲ್ಲೇ ಎಲ್ಲವೂ ಪರಿಹಾರ ಆಗುತ್ತದೆ.
ನೀವು ಏನೇ ಕಾನೂನು ಬಾಹಿರ, ಸಂವಿಧಾನ ಉಲ್ಲಂಘನೆ ಮಾಡಿದರೂ ಬಿಜೆಪಿ ಶಾಲು ಹಾಕಿಕೊಂಡರೆ ನಿಮ್ಮಷ್ಟು ಪರಿಶುದ್ಧ ಬೇರೊಬ್ಬರಿಲ್ಲ. ಸಿಸಿಬಿ ಅಧಿಕಾರಿಗಳ ಕೈಗೆ ಸಿಗದ ರೌಡಿ ಶೀಟರ್ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪಕ್ಕ ಕೂತಿರುತ್ತಾರೆ. ತೇಜಸ್ವಿ ಹಾಗೂ ಬಿಜೆಪಿ ಅವರಿಗೆ ಕೇಳಿದರೆ ಫೈಟರ್, ಸೈಲೆಂಟ್, ವೈಲೆಂಡ್, ಸೈಕಲ್, ಬ್ಲೇಡ್ ಎಲ್ಲಿದ್ದಾರೆ ಎಂದು ಹೇಳುತ್ತಾರೆ. ಸಂಸದರು ಶಾಸಕರು ಒಂದು ಕಾರ್ಯಕ್ರಮಕ್ಕೆ ಹೋಗಬೇಕಾದರೆ ಆಹ್ವಾನ ಇಲ್ಲದೆ ಹೋಗುವುದಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಅತಿಥಿಗಳ ಹೆಸರು ಹಾಕಿರುತ್ತಾರೆ. ಕುದ್ದಾಗಿ ಬಂದು ಕರೆದಿರುತ್ತಾರೆ. ಆ ಕಾರ್ಯಕ್ರಮಕ್ಕೆ ಹೋದ ನಂತರ ಪರಸ್ಪರ ಸನ್ಮಾನ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದರು.