Tirupati Laddu: ಕೈಯಲ್ಲಿ ತಿರುಪತಿ ಲಡ್ಡು ಹಿಡಿದು ಶ್ರೀರಾಮುಲು ವಿಶೇಷ ಮನವಿ
ಬಳ್ಳಾರಿ, ಸೆಪ್ಟೆಂಬರ್ 22: ತಿರುಪತಿ ತಿರುಮಲ ದೇವಾಲಯಕ್ಕೆ ಕೋಟ್ಯಾಂತರ ಭಕ್ತರು ಇದ್ದಾರೆ. ಕರ್ನಾಟಕದಲ್ಲಿಯೂ ಲಕ್ಷಾಂತರ ಭಕ್ತರಿದ್ದು, ರಾಜ್ಯದ ರಾಜಕಾರಣಿಗಳು ಸಹ ಆಗಾಗ ತಿರುಪತಿಗೆ ಭೇಟಿ ನೀಡುತ್ತಾರೆ. ಈಗ ತಿರುಪತಿಯ ಪ್ರಸಾದವಾದ ತಿರುಪತಿ ಲಡ್ಡು ಭಾರೀ ಚರ್ಚೆಗೆ ಕಾರಣವಾಗಿದೆ. ದೇಶಾದ್ಯಂತ ಈ ಕುರಿತು ಚರ್ಚೆ ನಡೆಯುತ್ತಿದ್ದು, ಲಡ್ಡು ಪ್ರಸಾದ ಸೇವಿಸುವ ಕುರಿತು ಭಕ್ತರಲ್ಲಿಯೇ ಗೊಂದಲ ಮೂಡಿದೆ.
'ತಿರುಪತಿ ಲಡ್ಡು' ಕುರಿತು ಬಿಸಿ-ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಮಾಜಿ ಸಚಿವ, ಬಿಜೆಪಿ ನಾಯಕ ಬಿ. ಶ್ರೀರಾಮುಲು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದ ಆವರಣದಲ್ಲಿಯೇ ಅವರು ಕೈಯಲ್ಲಿ ಪವಿತ್ರವಾದ ತಿರುಪತಿ ಲಡ್ಡು ಹಿಡಿದು ವಿಶೇಷವಾದ ಮನವಿಯನ್ನು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್: ಭಾನುವಾರ ಬಿ. ಶ್ರೀರಾಮುಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಾಕಿದ್ದಾರೆ. 'ಶ್ರೀ ತಿರುಪತಿಯ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು' ಎಂದು ಅವರು ಹೇಳಿದ್ದಾರೆ.
'ತಿರುಪತಿ ತಿಮ್ಮಪ್ಪ ದೇಗುಲ ಮತ್ತು ಅಲ್ಲಿಯ ಪ್ರಸಾದಕ್ಕೆ ತನ್ನದೇ ಆದ ವೈಶಿಷ್ಟತೆ ಇದೆ. ಯಾರೂ ಏನೋ ಮಾಡಿದ್ದಾರೆ ಎಂದಾಕ್ಷಣ ಅದರ ಘನತೆಗೆ ದಕ್ಕೆ ಬರುವುದಿಲ್ಲ' ಎಂದು ಬಿ. ಶ್ರೀರಾಮುಲು ಕೈಯಲ್ಲಿ ತಿರುಪತಿ ಲಡ್ಡು ಹಿಡಿದು ತಿಳಿಸಿದ್ದಾರೆ.
'ಇಷ್ಟು ದಿನವೂ ಪ್ರಸಾದವನ್ನು ಭಕ್ತಿ ಭಾವದಿಂದ ಸ್ವೀಕಾರ ಮಾಡಿದ್ದೇನೆ. ಮುಂದೆಯೂ ಸ್ವೀಕಾರ ಮಾಡುತ್ತೇನೆ, ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಯಾರು ಕೂಡ ನಡೆದುಕೊಳ್ಳಬೇಡಿ' ಎಂದು ಮಾಜಿ ಸಚಿವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬಿನ ಅಂಶ ಪತ್ತೆಯಾಗಿದೆ ಎಂಬುದು ಈಗ ಚರ್ಚೆಯ ವಿಷಯ. ಆಂಧ್ರ ಪ್ರದೇಶದ ರಾಜಕೀಯದಲ್ಲಿ ಇದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಅಲ್ಲದೇ ಈ ಪ್ರಕರಣ ಈಗ ಸುಪ್ರೀಂಕೋರ್ಟ್ ತನಕ ಹೋಗಿದೆ. 'ತಿರುಪತಿ ಲಡ್ಡು' ತಯಾರಿಕೆ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ) ಮೂಲಕ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ರೈತ ಮತ್ತು ಹಿಂದೂ ಸೇನೆಯ ಅಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಈ ಕುರಿತು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಅಂಶಗಳು ಪತ್ತೆಯಾಗಿದೆ ಎಂಬ ವರದಿಗಳಿವೆ. ಆದ್ದರಿಂದ ಕ್ಷಮೆ ಕೋರಿ 11 ದಿನದ ಪ್ರಾಯಶ್ಚಿತ ದೀಕ್ಷೆಯನ್ನು ಕೈಗೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಪವನ್ ಕಲ್ಯಾಣ್, ಲಡ್ಡುವನ್ನು ಅಮೃತಕ್ಕೆ ಸಮನಾಗಿ ನೋಡಲಾಗುತ್ತದೆ. ಲಡ್ಡು ಪ್ರಸಾದ ಅಶುದ್ಧವಾಗಿದೆ. ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದೂ ಜನಾಂಗಕ್ಕೆ ಕಳಂಕ ಎಂದು ಹೇಳಿದ್ದಾರೆ. ಭಾನುವಾರದಿಂದಲೇ ಅವರ ಪ್ರಾಯಶ್ಚಿತ ದೀಕ್ಷೆ ಆರಂಭವಾಗಿದೆ.
ಲಡ್ಡು ಪ್ರಸಾದದ ಕುರಿತು ಸಾಕಷ್ಟು ಗೊಂದಲ ಉಂಟಾಗಿದೆ. ಈ ಹಿನ್ನಲೆಯಲ್ಲಿ ಎಲ್ಲವೂ ಸ್ಪಷ್ಟವಾಗುವ ತನಕ ಲಡ್ಡು ಪ್ರಸಾದ ಬಳಸದಂತೆ ಕರ್ನಾಟಕ ಅರ್ಚಕರು ನಿರ್ಧರಿಸಿದ್ದಾರೆ. ಅಖಿಲ ಕರ್ನಾಟಕ ಅರ್ಚಕರ ಸಂಘ ರಾಜ್ಯದ 'ಎ' ಹಾಗೂ 'ಬಿ' ವರ್ಗದ ದೇವಾಲಯಗಳಲ್ಲಿ ನಡೆಯುವ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಲಡ್ಡು ಬಳಕೆ ಮಾಡದಿರಲು ತೀರ್ಮಾನಿಸಿದ್ದಾರೆ.












Click it and Unblock the Notifications