ಟೋಪಿವಾಲಾ ಸರ್ಕಾರ: 1250 ಕೋಟಿ ಲಾಕ್ಡೌನ್ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಟೀಕಾಪ್ರಹಾರ!
ಬೆಂಗಳೂರು, ಮೇ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಾಗೂ ಆರ್ಥಿಕ ಸಂಕಷ್ಟದ ನಡುವೆಯೂ 1250 ಕೋಟಿ ರೂಪಾಯಿ ಲಾಕ್ಡೌನ್ ಪ್ಯಾಕೇಜ್ ಘೋಷಿಸಿರುವುದು ಸರ್ಕಾರದ ನಾಟಕೀಯ ನಿಲುವು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
Recommended Video
ಕಳೆದ ಬಾರಿ ಕರ್ನಾಟಕ ಸರ್ಕಾರ ಮೊದಲ ಕಂತಿನಲ್ಲಿ 1200 ಕೋಟಿ ಮೌಲ್ಯದ ಆರ್ಥಿಕ ಪ್ಯಾಕೇಜ್ ಘೋಷಿಸಿತ್ತು. ಅಂದು ಹೂವು ಬೆಳೆಗಾರರಿಗೆ ಒಂದು ಹೆಕ್ಟರ್ ಪ್ರದೇಶಕ್ಕೆ 25000 ರೂಪಾಯಿ ಪರಿಹಾರ ನೀಡಿದ ಸರ್ಕಾರ ಇಂದು ಅದನ್ನು 10,000 ರೂಪಾಯಿಗೆ ಕಡಿತಗೊಳಿಸಿದೆ. ಇದರಿಂದ ಒಂದು ಎಕರೆಗೆ ಕೇವಲ 3500 ರೂಪಾಯಿ ಸಿಗಲಿದೆ. ರೈತರಿಗೆ ಇದರಿಂದ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ
ರಾಜ್ಯದಲ್ಲಿ ಗೊಬ್ಬರ, ಬೀಜ, ಕೂಲಿ ಬೆಲೆ ಏರಿಕೆಯಾಗಿದ್ದು, ಇಂಥ ಸ್ಥಿತಿಯಲ್ಲಿ ರೈತರಿಗೆ ನೀವು ನೀಡಿರುವ ಪರಿಹಾರ ಅರೆಕಾಸಿನ ಮಜ್ಜಿಗೆಯಂತೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ ಹಣ್ಣು, ತರಕಾರಿ ಬೆಳೆಗಾರರಿಗೂ ಒಂದು ಎಕರೆಗೆ 3500 ರೂಪಾಯಿ ಪರಿಹಾರ ಸಿಗುತ್ತದೆ. ಇದರಿಂದ ರೈತರು ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಆಟೋ, ಕ್ಯಾಬ್, ಟ್ಯಾಕ್ಸಿ ಚಾಲಕರ ಬಗ್ಗೆ ಹೆಚ್ ಡಿಕೆ ಉಲ್ಲೇಖ
ಕಳೆದ ಬಾರಿ ರಾಜ್ಯದಲ್ಲಿ 7.50 ಲಕ್ಷ ಆಟೋ ಚಾಲಕರಿಗೆ 5000 ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಿದ್ದರು. ಆದರೆ ಇವತ್ತು 2.10 ಲಕ್ಷಕ್ಕೆ ಈ ಸಂಖ್ಯೆಯನ್ನು ಇಳಿಸಲಾಗಿದೆ. ಕಳೆದ ಬಾರಿ 5000 ರೂಪಾಯಿ, ಈ ಬಾರಿ 3000ರೂಪಾಯಿ ನೀಡುವುದಾಗಿ ಹೇಳಿದ್ದೀರಿ. ಈ ಅಂಕಿ-ಸಂಖ್ಯೆಯನ್ನು ಯಾವ ಆಧಾರದ ಮೇಲೆ ಪರಿಗಣಿಸಲಾಗಿದೆ. ಕಳೆದ ಬಾರಿ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಪರಿಹಾರ ನೀಡುವುದಾಗಿ ಟೋಪಿ ಹಾಕಲಾಗಿದೆ. ಈ ಬಾರಿಯಾದರೂ ಪರಿಹಾರ ಫಲಾನುಭವಿಗಳಿಗೆ ತಲುಪುತ್ತದೆಯೇ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಾರ್ಮಿಕ ಕಲ್ಯಾಣ ನಿಧಿಯಿಂದ 494 ಕೋಟಿ ಹಣ
ರಾಜ್ಯದಲ್ಲಿ ಕಾರ್ಮಿಕ ವರ್ಗಕ್ಕೆ ನೀಡಿರುವ ಪರಿಹಾರ ಧನವೇನು ಸರ್ಕಾರದಿಂದ ನೀಡುತ್ತಿರುವುದಲ್ಲ. ಕಾರ್ಮಿಕ ಕಲ್ಯಾಣ ನಿಧಿಯಿಂದ 494 ಕೋಟಿ ರೂಪಾಯಿ ಹಣವನ್ನು ಘೋಷಿಸಲಾಗಿದೆ. ಅದೇ ರೀತಿ ಸವಿತಾ ಸಮಾಜ, ಅಕ್ಕಸಾಲಿಗ, ಕಮ್ಮಾರರು, ಚಮ್ಮಾರರಿಗೆ 2000 ರೂಪಾಯಿ ಕೊಡುವುದಾಗಿ ಘೋಷಿಸಲಾಗಿದೆ. ಈ 2 ಸಾವಿರ ರೂಪಾಯಿಯಿಂದ ಈ ವರ್ಗದ ಜನರು ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಅಕ್ಕಿ ಘೋಷಿಸಿರುವುದರ ಹಿಂದಿನ ಅಸಲಿ ನಾಟಕ
ಕರ್ನಾಟಕದಲ್ಲಿ ಅಕ್ಕಿ ವಿತರಣೆಯಲ್ಲೂ ಸರ್ಕಾರ ನಾಟಕೀಯವಾಗಿ ವರ್ತಿಸುತ್ತಿದೆ. ಏಕೆಂದರೆ ಈಗಾಗಲೇ ಕಳೆದ 7 ವರ್ಷಗಳಿಂದ ಪ್ರತಿ ತಿಂಗಳ 7 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು, ಅದನ್ನು 5 ಕೆಜಿಗೆ ಇಳಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರ ಮುಂದಿನ 2 ತಿಂಗಳವರೆಗೂ 5 ಕೆಜಿ ವಿತರಿಸಲಾಗುವುದು ಎಂದು ಈಗಾಗಲೇ ಘೋಷಿಸಿದ್ದು, ಅದರ ಜೊತೆಗೆ ಐದು ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ಜನರಿಗೆ ದ್ರೋಹವನ್ನು ಎಸಗುತ್ತಿದೆ. ಮೊದಲೇ ಕೊಡುತ್ತಿರುವ ಅಕ್ಕಿಯನ್ನು ಇದೀಗ ಮತ್ತೆ ಕೊಡುವುದಾಗಿ ಘೋಷಿಸಿದ್ದು, ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
"ತೆರಿಗೆ ಹಣ ಲೂಟಿ ಮಾಡುತ್ತಿರುವ ಸರ್ಕಾರ"
ರಾಜ್ಯದ ಜನರು ಪಾವತಿಸುವ ತೆರಿಗೆ ಹಣವನ್ನು ಲೂಟಿ ಮಾಡುವುದನ್ನು ಮೊದಲು ನಿಲ್ಲಿಸಿ. ನಿಮ್ಮ ಪಕ್ಷದ ಕಾರ್ಯಕರ್ತರನ್ನು ವಿವಿಧ ಮಂಡಳಿಗಳಿಗೆ ಚೇರ್ ಮೆನ್ ಗಳನ್ನಾಗಿ ಮಾಡಿ ಅವರಿಗೆ ಕಾರು, ಮನೆಗಳನ್ನು ನೀಡುವುದಕ್ಕೆ ಮೊದಲು ಕಡಿವಾಣ ಹಾಕಿರಿ. ಅದೇ ಜನರ ಹಣವನ್ನು ಪರಿಸ್ಥಿತಿ ನಿರ್ವಹಣೆಗಾಗಿ ಸದ್ಬಳಕೆ ಮಾಡಿಕೊಳ್ಳಿ. 55 ಲಕ್ಷಕ್ಕಿಂತ ಅಧಿಕ ಜನರು ಶ್ರಮಿಕ ವರ್ಗದಲ್ಲಿ ಗುರುತಿಸಿಕೊಂಡಿದ್ದು, ಪ್ರತಿಯೊಬ್ಬರಿಗೂ ಕನಿಷ್ಠ 10,000 ರೂಪಾಯಿ ಪರಿಹಾರ ಹಣವನ್ನು ನೀಡಲೇಬೇಕು. ನೀವೇನು ನಿಮ್ಮ ಮನೆಯಿಂದ ಹಣವನ್ನು ತಂದು ಕೊಡುವುದಿಲ್ಲ. ರಾಜ್ಯದ ಆರೂವರೆ ಕೋಟಿ ಜನರ ಹಣವಿದು. ರಾಜ್ಯ ಸರ್ಕಾರವೇನು ಧರ್ಮಕ್ಕಾಗಿ ಹಣ ನೀಡುತ್ತಿಲ್ಲ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಜನರನ್ನು ಸಂಕಷ್ಟಕ್ಕೆ ದೂಡುವ ಕಾರ್ಯವನ್ನು ಮಾಡಬೇಡಿ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.