ಫಟಾಫಟ್ ವ್ಯಾಜ್ಯ ಇತ್ಯರ್ಥ; ಡಿ.9ಕ್ಕೆ ರಾಜ್ಯಾದ್ಯಂತ ಲೋಕ ಅದಾಲತ್
ಬೆಂಗಳೂರು, ಡಿಸೆಂಬರ್ 08: ರಾಜ್ಯದ ಕೋರ್ಟ್ಗಳಲ್ಲಿ ಬಾಕಿ ಇರುವ ಲಕ್ಷಾಂತರ ಪ್ರಕರಣಗಳ ಹೊರೆಯನ್ನು ಇಳಿಸಲು ಡಿಸೆಂಬರ್ 9ರ ಶನಿವಾರ ರಾಜ್ಯಾದ್ಯಂತ ಮೆಗಾ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವ್ಯಾಜ್ಯ ಮುಕ್ತ ಸಮಾಜದ ಮೂಲಕ ಸೌಹಾರ್ದಯುತ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಅದಾಲತ್ ಆಯೋಜನೆ ಮಾಡಿದ್ದು, ಇದು ಈ ವರ್ಷದ 4ನೇ ಲೋಕ ಅದಾಲತ್ ಆಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಪ್ರಾಧಿಕಾರದ ನೂತನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಅವರು, "ಸರ್ವರಿಗೂ ನ್ಯಾಯ ದೊರಕಿಸುವ ಧ್ಯೇಯದೊಂದಿಗೆ ಈ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ" ಎಂದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮತ್ತಿತರರು ಇದ್ದರು.

ಪರಸ್ಪರ ರಾಜಿ-ಸಂಧಾನದ ಮೂಲಕ ಉಭಯ ಪಕ್ಷಕಾರರು ಒಪ್ಪಿ ತಮ್ಮ ವ್ಯಾಜ್ಯಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು. ವಾಜ್ಯ ಪೂರ್ವ ಮತ್ತು ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗುತ್ತದೆ.
ಇದರಿಂದ ನ್ಯಾಯಾಲಯಗಳ ಮೇಲಿನ ಕಾರ್ಯಾಭಾರ ಕಡಿಮೆ ಮಾಡಬಹುದು. ನ್ಯಾಯಾಲಯದ ಅಮೂಲ್ಯ ಸಮಯ ಉಳಿತಾಯ ಮಾಡಬಹುದು. ಸರ್ಕಾರ ಮತ್ತು ಕಕ್ಷಿದಾರರ ಇಬ್ಬರ ಆರ್ಥಿಕ ಉಳಿತಾಯವೂ ಆಗಲಿದೆ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ತಿಳಿಸಿದರು.
ಯಾವೆಲ್ಲ ಪ್ರಕರಣಗಳ ಇತ್ಯರ್ಥ?; ಲೋಕ ಅದಾಲತ್ನಲ್ಲಿ ಪ್ರಮುಖವಾಗಿ ಚೆಕ್ ಅಮಾನ್ಯಗೊಂಡ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ಉದ್ಯೋಗ ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣಗಳು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಆಸ್ತಿ ಭಾಗ, ವೈವಾಹಿಕ ಪ್ರಕರಣಗಳು ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡುವ ಮೊದಲೇ ಪರಸ್ಪರ ರಾಜಿ-ಸಂಧಾನದ ಮೂಲಕ ಅದಾಲತ್ನಲ್ಲಿ ಬಗೆಹರಿಸಿಕೊಳ್ಳಬಹುದು. ಇದರಿಂದ ಹಣ, ಸಮಯ, ಶ್ರಮ ಎಲ್ಲವೂ ಉಳಿತಾಯವಾಗುತ್ತದೆ.
ಇದಲ್ಲದೇ, ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಅಪರಾಧಿಕ ಮತ್ತು ಸಿವಿಲ್ ಪ್ರಕರಣಗಳು, ಅಪಘಾತ ಪ್ರಕರಣಗಳು, ವಿಮೆ, ಪರಿಹಾರ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೇತನ, ಭತ್ಯೆ, ಪಿಂಚಣಿ, ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳು, ಬಾಡಿಗೆ ಅನುಭೋಗದ ಹಕ್ಕುಗಳಂತಹ ಸಿವಿಲ್ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು.
ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 19.93 ಲಕ್ಷ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದ್ದು, ಈ ಸಂಖ್ಯೆ ಇನ್ನೂ ಏರಿಕೆಯಾಗಬಹುದು.
ಡಿಸೆಂಬರ್ 9ರ ಶನಿವಾರ ಹೈಕೋರ್ಟ್ನ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಏಕ ಕಾಲಕ್ಕೆ ಸಾವಿರಕ್ಕೂ ಅಧಿಕ ವಿಚಾರಣಾ ಪೀಠಗಳಲ್ಲಿ ಲೋಕ ಅದಾಲತ್ ಕಲಾಪಗಳು ನಡೆಯಲಿವೆ.












Click it and Unblock the Notifications