ಬಿಎಸ್ವೈ ಒನ್ ಮ್ಯಾನ್ ಶೋ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ: ದಿನೇಶ್ ಗುಂಡೂರಾವ್
ಬೆಂಗಳೂರು, ಆ 6: 'ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಅತಿವೃಷ್ಟಿ ಉಂಟಾಗಿದ್ದು, ಯಡಿಯೂರಪ್ಪನವರ ಜೊತೆಗೆ ಯಾರೂ ಸಚಿವರಾಗದೇ ಇರುವುದು, ರಾಜ್ಯದ ದುರ್ದೈವ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಿದ್ದ ದಿನೇಶ್, 'ಮಳೆ, ಪ್ರವಾಹದಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ, ಅಧಿಕಾರಿಗಳನ್ನು ನಂಬಿ ಕೂತರೆ ಕೆಲಸ ನಡೆಯುತ್ತದೆಯೇ, ಆದಷ್ಟು ಬೇಗ ಸಂಪುಟ ರಚನೆ ನಡೆಯಲಿ' ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದರು.
370 ವಿಧಿ ರದ್ದು: ಮೋದಿ ವಿರುದ್ದ ಸಿದ್ದರಾಮಯ್ಯ ಒಂದರ ಮೇಲೊಂದು ಟ್ವೀಟ್ ಪ್ರಹಾರ
'ಬೆಂಗಳೂರು ನಗರ ಅಭಿವೃದ್ಧಿ ಕಾರ್ಯಗಳ ವಿಚಾರವಾಗಿ ಬಿಬಿಎಂಪಿ ಅನುಮೋದನೆ ನೀಡಿರುವ ಆಯವ್ಯಯ ತಡೆಹಿಡಿಯುವುದು ಸರಿಯಲ್ಲ. ಹಿಂದಿನ ಮೈತ್ರಿ ಸರ್ಕಾರದ ವೇಳೆಯಲ್ಲಿಯ ಕೆಲಸಗಳ ಗುಣಮಟ್ಟದ ಕೊರತೆ ಇದ್ದರೆ ಪರಿಶೀಲನೆ ಮಾಡಲಿ. ಆದರೆ, ಅಭಿವೃದ್ಧಿಗೆ ತಡೆ ನೀಡುವುದು ಸರಿಯಲ್ಲ' ಕೆಪಿಸಿಸಿ ಅಧ್ಯಕ್ಷರು ಅಭಿಪ್ರಾಯ ಪಟ್ಟರು.
'ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಧಾರವಾಡ ಜಿಲ್ಲೆಗಳಲ್ಲಿ ಜಾನುವಾರು, ಬೆಳೆ, ಆಸ್ತಿಪಾಸ್ತಿ ನಷ್ಟವಾಗಿದ್ದು, ಜನರು ಪರದಾಡುತ್ತಿದ್ದಾರೆ.ರಾಜ್ಯ ಸರ್ಕಾರ ಹೆಚ್ಚಿನ ಗಮನ ಕೊಟ್ಟು ಅಗತ್ಯ ಕ್ರಮಕೈಗೊಳ್ಳಬೇಕು' ಎಂದು ದಿನೇಶ್ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
'ದೆಹಲಿಗೆ ತೆರಳಿರುವ ಸಿಎಂ ಯಡಿಯೂರಪ್ಪ ಪ್ರವಾಹ ಪರಿಹಾರಕ್ಕಾಗಿ ಹೆಚ್ಚಿನ ಅನುದಾನ ತರಬೇಕು. ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಆಡಳಿತದಲ್ಲಿವೆ. ಹಾಗಾಗಿ ಯಾವುದೇ ಮಲತಾಯಿ ಧೋರಣೆ ತೋರದೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಬೇಕು. ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುವ ವಿಶ್ವಾಸವಿದೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬೆಳಗಾವಿ : ಮಳೆ, ಪ್ರವಾಹ; ಸಹಾಯವಾಣಿ ಆರಂಭ
'ರಾಜ್ಯದಲ್ಲಿ ಇನ್ನು ಮಂತ್ರಿಮಂಡಲವೇ ರಚನೆಯಾಗಿಲ್ಲ. ಮುಖ್ಯಮಂತ್ರಿಗಳು ಒಬ್ಬರೇ ಇದ್ದು, ಆಡಳಿತದ ಚುಕ್ಕಾಣಿ ಹಿಡಿಯುವ ರಾಜಕೀಯ ನಾಯಕತ್ವವೇ ಇಲ್ಲದಂತಾಗಿದೆ. ಅಧಿಕಾರಿಗಳನ್ನಷ್ಟೇ ನಂಬಿಕೊಂಡು ಕುಳಿತರೆ ಆಗುವುದಿಲ್ಲ. ಕೂಡಲೇ ಸಚಿವ ಸಂಪುಟ ರಚಿಸಿ, ಪ್ರವಾಹ ಸ್ಥಳಗಳಲ್ಲಿ ಪರಿಹಾರ ಕಾರ್ಯಗಳನ್ನು ಮತ್ತಷ್ಟು ತೀವ್ರಗೊಳಿಸಬೇಕು' ಎಂದು ದಿನೇಶ್ ಗುಂಡೂರಾವ್ ಅವರು ಸರಕಾರವನ್ನು ಒತ್ತಾಯಿಸಿದರು.