ಲೋಕಾಯುಕ್ತ ಹುದ್ದೆಗೆ ಕೇಳಿಬರಲಿವೆ ಕನಿಷ್ಠ 5 ಹೆಸರು
ಬೆಂಗಳೂರು, ಡಿಸೆಂಬರ್ 08 : ಕರ್ನಾಟಕ ಲೋಕಾಯುಕ್ತ ಹಗರಣದಿಂದ ಬೇಸತ್ತು, ಪರಿಸ್ಥಿತಿಯನ್ನು ನಿಭಾಯಿಲಾಗದೆ 135 ದಿನಗಳ ಕಾಲ ರಜಾ ಹಾಕಿದ್ದ ನ್ಯಾ. ಭಾಸ್ಕರ್ ರಾವ್ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಲೋಕಾಯುಕ್ತ ಜವಾಬ್ದಾರಿ ಯಾರ ಹೆಗಲ ಮೇಲೆ ಬೀಳಲಿದೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಒಂದು ಕೋಟಿ ಲಂಚ ಕೇಳಿದ ದೊಡ್ಡ ಹಗರಣದಲ್ಲಿ ಸ್ವತಃ ಲೋಕಾಯುಕ್ತ ಅವರ ಹೆಸರೇ ಕೇಳಿಬಂದಿದ್ದು, ಭಾಸ್ಕರ್ ರಾವ್ ಮಗ ಅಶ್ವಿನ್ ಸೇರಿದಂತೆ ಹಲವರ ಬಂಧನ, ಸದನದಲ್ಲಿಯೂ ಪದಚ್ಯುತಿಗೆ ಸಂಬಂಧಿಸಿದಂತೆ ಗದ್ದಲವೆದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯೇ ಮುಚ್ಚಿಹಾಕುತ್ತಾರಾ ಎಂಬ ಪ್ರಶ್ನೆ ಉದ್ಭವವಾಗಿತ್ತು.
ಆದರೆ, ವಿಧಾನಸೌಧದ ಅಂಗಳದಿಂದ ಕೇಳಿಬರುತ್ತಿರುವ ಸುದ್ದಿಯೇನೆಂದರೆ, ಹೊಸ ಲೋಕಾಯುಕ್ತರ ನೇಮಕಕ್ಕೆ ಪ್ರಕ್ರಿಯೆ ಈಗಾಗಲೆ ಆರಂಭವಾಗಿದ್ದು, ಎಲ್ಲ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಲೋಕಾಯುಕ್ತರನ್ನು ನೇಮಿಸಲಾಗುವುದು ಎಂದು ಕರ್ನಾಟಕ ಕಾನೂನು ಮಂತ್ರಾಲಯದ ಅಧಿಕಾರಿಯೊಬ್ಬರು ಒನ್ಇಂಡಿಯಾಗೆ ತಿಳಿಸಿದ್ದಾರೆ. ['ಭಾಸ್ಕರರಾವ್ ರಾಜೀನಾಮೆ ಅಂಗೀಕರಿಸಬಾರದಿತ್ತು']

ಲೋಕಾಯುಕ್ತ ನಿಯುಕ್ತಿ ಹೇಗೆ? : ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ಮತ್ತು ಕರ್ನಾಟಕ ಹೈಕೋರ್ಟ್, ಮುಖ್ಯಮಂತ್ರಿ, ಮೇಲ್ಮನೆ ಕೆಳಮನೆಗಳ ವಿರೋಧ ಪಕ್ಷದ ನಾಯಕರು, ವಿಧಾನಸಭಾಧ್ಯಕ್ಷರಿರುವ ಮಂಡಳಿ ನೂತನ ಲೋಕಾಯುಕ್ತರ ಹೆಸರನ್ನು ಸೂಚಿಸಲಿದೆ. ಈ ಎಲ್ಲರ ಸಮ್ಮತಿ ಇಲ್ಲದಿದ್ದರೆ ಲೋಕಾಯುಕ್ತ ನೇಮಕಾತಿ ಅಸಾಧ್ಯ.
ಲೋಕಾಯುಕ್ತ ನೇಮಕಾತಿಗೆ ಮುನ್ನ ಕನಿಷ್ಠ ಐವರ ಹೆಸರನ್ನು ಕರ್ನಾಟಕ ಸರಕಾರ ಸೂಚಿಸಲಿದೆ. ನಿಯಮದ ಪ್ರಕಾರ, ಲೋಕಾಯುಕ್ತ ಹುದ್ದೆ ಅಲಂಕರಿಸುವವರು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಆಗಿರಬೇಕು ಅಥವಾ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಆಗಿರಬೇಕು. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಸಂತೋಷ್ ಹೆಗ್ಡೆ ಸಂದರ್ಶನ]
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೆ ಈ ಕುರಿತು ಸಭೆ ಕರೆಯುವ ಸಾಧ್ಯತೆಗಳಿದ್ದು, ಲೋಕಾಯುಕ್ತ ನಿಯುಕ್ತಿಗೆ ಸಂಬಂಧಿಸಿದಂತೆ ಈ ಬಾರಿ ಯಾವುದೇ ವಿವಾದಕ್ಕೆ ಆಸ್ಪದವಿಲ್ಲದಂತೆ ನಿಗಾ ವಹಿಸಲಾಗುವುದು. ಲೋಕಾಯುಕ್ತದ ಮುಕ್ಕಾದ ಪ್ರತಿಷ್ಠೆ ಮರಳಿ ತರಲು ಸರಕಾರ ಎಲ್ಲ ಯತ್ನ ನಡೆಸಲಿದೆ ಎಂದು ಅಧಿಕಾರಿ ತಿಳಿಸಿದರು.
ಈ ಹಗರಣದಿಂದಾಗಿ ಕೇಸುಗಳು ಧೂಳು ತಿನ್ನತ್ತ ಬಿದ್ದಿವೆ, ಸಂಸ್ಥೆ ಮೊದಲಿನಂತೆ ನಿರ್ಭಿಡೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಹಳೆ ಪ್ರಕರಣಗಳನ್ನು ಉಪ ಲೋಕಾಯುಕ್ತರಿಗೆ ವರ್ಗಾಯಿಸುವ ಪ್ರಕ್ರಿಯೆಯೂ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಾಯುಕ್ತ ಯಾರಾಗಲಿದ್ದಾರೆ ಎಂಬ ಕುರಿತು ಭಾರೀ ಕುತೂಹಲ ಮೂಡಿದೆ. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ 4 ಪ್ರಮುಖ ಬೆಳವಣಿಗೆಗಳು]
ಉಪ ಲೋಕಾಯುಕ್ತ ಹುದ್ದೆಗೆ ನ್ಯಾ. ಆನಂದ್ : ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತಿ ನ್ಯಾಯಮೂರ್ತಿ ಎ.ಎಸ್. ಆನಂದ್ ಅವರ ಹೆಸರನ್ನು ಉಪ ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಲಾಗಿದೆ. ಕುಮಾರಕೃಪಾ ಅತಿಥಿಗೃಹದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನ್ಯಾ.ಆನಂದ್ ಅವರ ಹೆಸರನ್ನು ಒಮ್ಮತದಿಂದ ಉಪ ಲೋಕಾಯುಕ್ತ ಹುದ್ದೆಗೆ ಸ್ವೀಕರಿಸಲಾಗಿದೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]












Click it and Unblock the Notifications