ಮಂಡ್ಯದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು
ಮಂಡ್ಯ, ಫೆ. 23 : ಕೌಟುಂಬಿಕ ಕಲಹದಿಂದ ಬೇಸತ್ತು ಒಂದೇ ಕುಟುಂಬದ ಐದು ಮಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮಾರದೇವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಶಿಕ್ಷಕರಾಗಿದ್ದ ದಿ. ರಾಮೇಗೌಡ ಅವರ ಪತ್ನಿ ಮೀನಾಕ್ಷಮ್ಮ (55), ಯೋಗಶ್ರೀ (20), ಪದ್ಮಶ್ರೀ (22), ಸುಚಿತ್ರಾ (26), ಯೋಗಾನಂದಗೌಡ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಸೋಮವಾರ ರಾತ್ರಿ ಇವರೆಲ್ಲ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿಕ್ಷಕರಾದ ರಾಮೇಗೌಡ ಅವರು ಮೂರು ತಿಂಗಳ ಹಿಂದೆ ಬೈಕ್ ಅವಘಡದಲ್ಲಿ ಸಾವನ್ನಪ್ಪಿದ್ದರು. ಅವರ ಪತ್ನಿ ಮೀನಾಕ್ಷಮ್ಮ ಅಳೀಸಂದ್ರ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಮನೆ ಜವಾಬ್ದಾರಿ ಇವರ ಮೇಲಿತ್ತು. ಇವರಿಗೆ ಮೂವರು ಪುತ್ರಿಯರು ಒಬ್ಬ ಪುತ್ರನಿದ್ದಾನೆ. [ಮಂಡ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ತಮಿಳುನಾಡು ಪ್ರೇಮಿಗಳು]
ಎರಡು ವರ್ಷಗಳ ಹಿಂದೆ ಹಿರಿಯ ಮಗಳಾದ ಸುಚಿತ್ರಾಳನ್ನು ತುಮಕೂರಿನಲ್ಲಿನ ಯುವಕನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮಗಳನ್ನು ಮದುವೆ ಮಾಡಿಕೊಟ್ಟ ಬಳಿಕ ಆಕೆಗೆ ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.
ಒಂದೆಡೆ ಪತಿಯ ಅಗಲಿಕೆ, ಮತ್ತೊಂದೆಡೆ ಮಗಳ ಬಾಳು ಹಾಳಾಯಿತಲ್ಲ ಎಂಬ ವೇದನೆ ಇದರಿಂದ ಮಾನಸಿಕವಾಗಿ ಇಡೀ ಕುಟುಂಬ ನೊಂದಿತ್ತು. ಕೊನೆಗೂ ಮೀನಾಕ್ಷ್ಮಮ್ಮ ಮತ್ತು ಮಕ್ಕಳು ಸೋಮವಾರ ರಾತ್ರಿ ಮನೆಯಲ್ಲಿರುವ ಮರದ ತೊಲೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಎಷ್ಟು ಹೊತ್ತಾದರೂ ಯಾರೂ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದವರು ಮನೆ ಬಳಿ ಬಂದು ಕೂಗಿ ಕರೆದಿದ್ದಾರೆ. ಒಳಗಿನಿಂದ ಯಾವುದೇ ಶಬ್ದ ಬಾರದ ಹಿನ್ನೆಲೆಯಲ್ಲಿ ಕಿಟಕಿ ಬಳಿ ಇಣುಕಿ ನೋಡಿದಾಗ ಎಲ್ಲರೂ ಆತ್ಮಹತ್ಯೆಗೆ ಶರಣಾಗಿರುವುದು ಗೋಚರಿಸಿದೆ. ಈ ಸಂಬಂಧ ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ['ನನಗೆ ರೇಷ್ಮೆ ಸೀರೆ ಕೊಡ್ಸು ಎಂದ ಮಗಳೇ ಇಲ್ಲ']