‘ಸಮುದ್ರ ರಾಜ’ನಿಗೆ ಮೀನುಗಾರ ಮಹಿಳೆಯರ ವಿಶೇಷ ಪೂಜೆ
ಕಾರವಾರ, ಆಗಸ್ಟ್ 08 : ನೂಲ ಹುಣ್ಣಿಮೆಯ ದಿನ ಉತ್ತರಕನ್ನಡ ಜಿಲ್ಲೆಯ ಮೀನುಗಾರ ಸಮುದಾಯದ ಮಹಿಳೆಯರು ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಹುಣ್ಣಿಮೆಯ ದಿನ ಚಂದ್ರಗ್ರಹಣ ಇರುವುದರಿಂದ ಮುನ್ನಾ ದಿನವಾದ ಭಾನುವಾರವೇ ಜಿಲ್ಲೆಯ ಕರಾವಳಿ ತೀರಗಳಲ್ಲಿ ಸಾಮೂಹಿಕ ಸಮುದ್ರ ರಾಜನ ಪೂಜೆ ನೆರವೇರಿತು.
ಕಾರವಾರದ 30ಕ್ಕೂ ಅಧಿಕ ಮಹಿಳೆಯರು ಸರ್ವೋದಯ ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಳಸ ಹೊತ್ತು ಮೆರವಣಿಗೆ ಮೂಲಕ ಸಾಗರ ದರ್ಶನ ಹಿಂಭಾಗದ ಕಡಲತೀರದಲ್ಲಿ ಸಮುದ್ರ ರಾಜನಿಗೆ ನಮಿಸಿ, ಕಳಸದಲ್ಲಿದ್ದ ತೆಂಗಿನಕಾಯಿ ಹಾಗೂ ನೀರನ್ನು ಕಡಲಿಗೆ ಸಮರ್ಪಿಸಿದರು.

ಶ್ರಾವಣಮಾಸದ ನಾಗ ಪಂಚಮಿ ದಿನ ಉಪ್ಪು ನೀರು (ಸಮುದ್ರ ನೀರು) ಹಾಗೂ ಸಿಹಿ ನೀರನ್ನು (ಬಾವಿ ನೀರು) ಕಳಸದಲ್ಲಿ ತುಂಬಿ ಈ ವ್ರತಾಚರಣೆ ಪ್ರಾರಂಭಿಸಲಾಗುತ್ತದೆ. ಹದಿನೈದು ದಿನದ ಬಳಿಕ ಅಂದರೆ ನೂಲ ಹುಣ್ಣಿಮೆಯಂದು ಕಡಲತೀರಕ್ಕೆ ಬಂದು ಸಮುದ್ರರಾಜನಿಗೆ ಪೂಜೆ ಸಲ್ಲಿಸಿ, ಮೀನುಗಾರಿಕೆಗೆ ತೆರಳಿದವರಿಗೆ ಯಾವುದೇ ಅನಾಹುತ ಆಗದಂತೆ ಹಾಗೂ ಮತ್ಸ್ಯ ಸಂಪತ್ಭರಿತವಾಗಿ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ.
ಕಳಸದ ಕಾಯಿ ಹಾಗೂ ಹೂವು, ಹಣ್ಣುಗಳನ್ನು ಕಡಲಿಗೆ ಅರ್ಪಣೆ ಮಾಡಿ, ದೀಪದ ಆರತಿ ಬೆಳಗಿ, ಸುಮಂಗಲೆಯರು ಅರಿಸಿನ, ಕುಂಕುಮ ವಿನಿಮಯ ಮಾಡಿಕೊಳ್ಳುವುದು ಈ ಸಮುದ್ರ ಪೂಜೆಯ ವಿಶೇಷ. ಅಲ್ಲದೇ ತನ್ನೊಡಲಿನ ಮತ್ಸ್ಯಗಳನ್ನು ನೀಡುವ ಸಮುದ್ರರಾಜನಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸಲಾಗುತ್ತದೆ ಇದು ಎಂದು ಹಿರಿಯ ಮೀನುಗಾರರು ಹೇಳುತ್ತಾರೆ.

ಕಡಲ ತೀರದಲ್ಲಿ ಡಾಲ್ಫಿನ್ ಮರಿಯ ಕಳೇಬರ : ಉತ್ತರಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ್ ಟ್ಯಾಗೋರ ಕಡಲ ತೀರದಲ್ಲಿ ಡಾಲ್ಫಿನ್ನ ಮರಿಯ ಕಳೇಬರವೊಂದು ದೊರೆತಿದೆ. ಅಂದಾಜು 20 ಕೆ.ಜಿ.ಯ ತೂಕದ ಈ ಡಾಲ್ಫಿನ್ ಮೃತಪಟ್ಟು ಸುಮಾರು ಎರಡು ದಿನ ಕಳೆದಿದೆ. ಯಾಂತ್ರೀಕೃತ ದೋಣಿಯ ಮೋಟಾರ್ ಫ್ಯಾನ್ನ ರೆಕ್ಕೆ ತಾಗಿ ಮೃತಪಟ್ಟಿರಬಹುದು ಎಂದು ಕಡಲ ವಿಜ್ಞಾನಿಗಳು ಅಭಿಪ್ರಾಯಟ್ಟಿದ್ದಾರೆ.












Click it and Unblock the Notifications