ಮೊದಲ ಬಾರಿ ಸಚಿವರಾದ 7 ಶಾಸಕರ ಪರಿಚಯ
ಬೆಂಗಳೂರು, ಜೂನ್ 20 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆಯಾಗಿದೆ. ಒಟ್ಟು 13 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಅವರು, 14 ಜನರನ್ನು ಸಂಪುಟದಿಂದ ಕೈ ಬಿಟ್ಟಿದ್ದಾರೆ. ಸಂಪುಟದಲ್ಲಿ ಒಂದು ಸ್ಥಾನವನ್ನು ಖಾಲಿ ಇಟ್ಟುಕೊಂಡಿದ್ದಾರೆ.
ಸಂಪುಟ ಸೇರಿದ 13 ಶಾಸಕರ ಪೈಕಿ 7 ಜನರು ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ಮೊದಲ ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ನಿಯಮವನ್ನುಮೀರಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. [ಸಿದ್ದು ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]
ರಮೇಶ್ ಕುಮಾರ್ (ಶ್ರೀನಿವಾಸಪುರ), ರಮೇಶ್ ಜಾರಕಿಹೊಳಿ (ಗೋಕಾಕ್), ಪ್ರಿಯಾಂಕ ಖರ್ಗೆ (ಚಿತ್ತಾಪುರ), ಈಶ್ವರ ಖಂಡ್ರೆ (ಬಾಲ್ಕಿ), ಪ್ರಮೋದ್ ಮಧ್ವರಾಜ್ (ಉಡುಪಿ), ರುದ್ರಪ್ಪ ಲಾಮಣಿ (ಹಾವೇರಿ). ಎಂ.ಆರ್.ಸೀತಾರಾಮ್ (ವಿಧಾನಪರಿಷತ್ ಸದಸ್ಯ) ಮೊದಲ ಬಾರಿಗೆ ಸಚಿವರಾಗಿದ್ದಾರೆ. ಮೊದಲ ಬಾರಿಗೆ ಸಚಿವರಾದವರ ಸಂಕ್ಷಿಪ್ತ ಪರಿಚಯ ಇಲ್ಲಿದೆ... [ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ ಮೇಲೆ ಕಣ್ಣು?]
ಸಚಿವರಾದ ರಮೇಶ್ ಕುಮಾರ್
ಒಟ್ಟು 5 ಬಾರಿ ಶ್ರೀನಿವಾಸಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ರಮೇಶ್ ಕುಮಾರ್ ಅವರು ಮೊದಲ ಬಾರಿ ಸಚಿವರಾಗಿದ್ದಾರೆ. 1994 ರಿಂದ 1999ರ ತನಕ ಅವರು ಸ್ಪೀಕರ್ ಆಗಿ ಕೆಲಸ ಮಾಡಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಗಲೇ ರಮೇಶ್ ಕುಮಾರ್ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ತಡವಾಗಿಯಾದರೂ ಅವರು ಸಚಿವರಾಗಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರಮೇಶ್ ಕುಮಾರ್ ಬಿ.ಎಸ್ಸಿ ಪದವೀಧರರು.
ಖರ್ಗೆ ಪುತ್ರನಿಗೆ ಸಚಿವರಾಗುವ ಭಾಗ್ಯ
ಮೊದಲ ಬಾರಿಗೆ ಚಿತ್ತಾಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಪ್ರಿಯಾಂಕ ಖರ್ಗೆ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. 2011-12ರಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಪ್ರಿಯಾಂಕ ಖರ್ಗೆ ಅವರು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಅವರ ಪುತ್ರ. ವಿದ್ಯಾರ್ಹತೆ : ಪ್ರಥಮ ಪಿಯುಸಿ.
ಸಂಪುಟ ಸೇರಿದ ಪ್ರಮೋದ್ ಮಧ್ವರಾಜ್
ಉಡುಪಿ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಸಂಪುಟ ಸೇರಿದ್ದಾರೆ. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಅವಿಭಜಿತ ದಕ್ಷಿಣ ಜಿಲ್ಲಾ ಎನ್ಎಸ್ಯುಐ ಉಪಾಧ್ಯಕ್ಷ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಮೊದಲ ಬಾರಿ ಸಚಿವರಾಗಿದ್ದಾರೆ.
ಸಂಪುಟ ಸೇರಿದ ಎಂ.ಆರ್.ಸೀತಾರಾಮ್
ಎಂ.ಎಸ್.ರಾಮಯ್ಯ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಎಂ.ಆರ್. ಸೀತಾರಾಮ್ ಅವರು ಸಂಪುಟ ಸೇರಿದ್ದಾರೆ. ಎರಡು ಬಾರಿ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿದ್ದ ಸೀತಾರಾಮ್ ಅವರು 2012ರಿಂದ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ವಿದ್ಯಾರ್ಹತೆ : ಬಿಎಸ್ಸಿ
ಈಶ್ವರ ಖಂಡ್ರೆಗೆ ಸಚಿವ ಸ್ಥಾನದ ಭಾಗ್ಯ
ಎರಡು ಬಾರಿ ಬಾಲ್ಕಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಈಶ್ವರ ಖಂಡ್ರೆ ಅವರು ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ. ವೀರಶೈವ ಲಿಂಗಾಯಿತ ಸಮುದಾಯಕ್ಕೆ ಸೇರಿದ ಇವರು ಬಿಇ ಪದವೀಧರರು.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ಭಾಗ್ಯ
ಗೋಕಾಕ್ ಕ್ಷೇತ್ರದಿಂದ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾದ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. 1977ರಿಂದಲೂ ಇವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ವಾಲ್ಮೀಕಿ ಜನಾಂಗಕ್ಕೆ ಸೇರಿದ ಇವರು ಸತೀಶ್ ಜಾರಕಿಹೊಳಿ ಅವರ ಸಹೋದರ.
ಸಂಪುಟ ಸೇರಿದ ರುದ್ರಪ್ಪ ಲಮಾಣಿ
ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರು ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ. 2013ರಲ್ಲಿ ಹಾವೇರಿ ಕ್ಷೇತ್ರದಲ್ಲಿ ಜಯಗಳಿಸಿರುವ ಅವರು, ಬ್ಯಾಡಗಿ ಕ್ಷೇತ್ರದಿಂದ 1999 ಮತ್ತು 2004ರಲ್ಲಿ ಗೆಲುವು ಸಾಧಿಸಿದ್ದರು. ರುದ್ರಪ್ಪ ಅವರು ಬಿಎ, ಎಲ್ಎಲ್ಬಿ ಪದವೀಧರರು.