ಸಂಪುಟ ವಿಸ್ತರಣೆ; ಒಂದೇ ಖಾತೆಗೆ ಇಬ್ಬರು ನಾಯಕರ ಪೈಪೋಟಿ!
ಬೆಂಗಳೂರು, ಡಿಸೆಂಬರ್ 17 : 15 ಕ್ಷೇತ್ರಗಳ ಉಪ ಚುನಾವಣೆ ಬಳಿಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಸಂಪುಟ ವಿಸ್ತರಣೆ ಸಂಕಟ ಆರಂಭವಾಗಿದೆ. ಅದರಲ್ಲೂ ಇಬ್ಬರೂ ಪ್ರಭಾವಿ ನಾಯಕರು ಒಂದೇ ಖಾತೆಗೆ ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಒಂದು ಕಡೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಮತ್ತೊಂದು ಕಡೆ ಜಲ ಸಂಪನ್ಮೂಲ ಖಾತೆಗಾಗಿ ಇಬ್ಬರು ನಾಯಕರು ಪಟ್ಟು ಹಿಡಿದಿದ್ದಾರೆ. ಇದು ಯಡಿಯೂರಪ್ಪಗೆ ತಲೆನೋವು ತಂದಿದೆ.
ಬಸವರಾಜ ಬೊಮ್ಮಾಯಿ ಮತ್ತು ಗೋಕಾಕ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ. ಇಬ್ಬರೂ ನಾಯಕರು ಯಡಿಯೂರಪ್ಪಗೆ ಆಪ್ತರು. ಆದ್ದರಿಂದ, ಖಾತೆ ಹಂಚಿಕೆ ಕಗ್ಗಂಟಾಗಿದೆ.
ಯಡಿಯೂರಪ್ಪ ಸಂಪುಟ ವಿಸ್ತರಣೆ ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಡಿಸೆಂಬರ್ 25ರ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ. ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂಬ ನಿರೀಕ್ಷೆ ಇದೆ.

ಯಡಿಯೂರಪ್ಪ ಬಳಿ ಇರುವ ಖಾತೆ
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಸಂಪುಟ ವಿಸ್ತರಣೆ ಮಾಡುವಾಗ ಅವರು ಜಲಸಂಪನ್ಮೂಲ, ಇಂಧನ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ಹಲವು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡರು. ಮುಖ್ಯಮಂತ್ರಿಗಳ ಬಳಿ ಇರುವ ಖಾತೆಗೆ ಈಗ ಬೇಡಿಕೆ ಬಂದಿದೆ.

ಗೃಹ ಖಾತೆ ಬೇಡ
ಯಡಿಯೂರಪ್ಪ ಸಂಪುಟದಲ್ಲಿ ಬಸವರಾಜ ಬೊಮ್ಮಾಯಿ ಗೃಹ ಖಾತೆಯ ಜವಾಬ್ದಾರಿ ಹೊತ್ತಿದ್ದಾರೆ. ಈಗ ಸಂಪುಟ ವಿಸ್ತರಣೆ ಮಾಡುವಾಗ ಗೃಹ ಖಾತೆಯನ್ನು ಬೇರೆಯವರಿಗೆ ಕೊಡಿ. ಜಲಸಂಪನ್ಮೂಲ ಖಾತೆಯನ್ನು ನನಗೆ ಕೊಡಿ ಎಂದು ಬಸವರಾಜ ಬೊಮ್ಮಾಯಿ ಬೇಡಿಕೆ ಇಟ್ಟಿದ್ದಾರೆ. ಹಿಂದೆಯೂ ಅವರು ಜಲಸಂಪನ್ಮೂಲ ಖಾತೆಯ ಸಚಿವರಾಗಿ ಕೆಲಸ ಮಾಡಿದ್ದರು.

ರಮೇಶ್ ಜಾರಕಿಹೊಳಿ ಬೇಡಿಕೆ
ಗೋಕಾಕ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದಿರುವ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಪ್ರಮುಖ ಕಾರಣರಲ್ಲಿ ರಮೇಶ್ ಜಾರಕಿಹೊಳಿ ಸಹ ಒಬ್ಬರು. ಆದ್ದರಿಂದ, ಇಲ್ಲ ಎಂದು ಹೇಳುವುದು ಯಡಿಯೂರಪ್ಪಗೆ ಅಷ್ಟು ಸುಲಭವಲ್ಲ.

ಯಡಿಯೂರಪ್ಪ ಸೂತ್ರವೇನು?
ಜಲಸಂಪನ್ಮೂಲ ಖಾತೆ ಹಂಚಿಕೆಗೆ ಯಡಿಯೂರಪ್ಪ ಸೂತ್ರವೇನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡರೆ ಕಷ್ಟ ಎನ್ನುವುದು ಒಂದು ಕಡೆಯಾದರೆ ಆಪ್ತರಾದ ಬಸವರಾಜ ಬೊಮ್ಮಾಯಿ ಮಾತನ್ನು ಯಡಿಯೂರಪ್ಪ ತೆಗೆದು ಹಾಕುವಂತಿಲ್ಲ.












Click it and Unblock the Notifications