ಬಿಜೆಪಿ - ಜೆಡಿಎಸ್ ನಡುವೆ ಶುರುವಾಯ್ತು ಮುನಿಸು!
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಯ ಪರ್ವವನ್ನೇ ಶುರು ಮಾಡಿದೆ. ನಿತ್ಯವೂ ಒಂದಿಲ್ಲೊಂದು ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಜನ ಹೈರಾಣಾಗಿದ್ದಾರೆ. ಜನ ಸಾಮಾನ್ಯರು ನಿತ್ಯವೂ ಒಂದಿಲ್ಲೊಂದು ಬೆಲೆ ಏರಿಕೆಯ ಶಾಕ್ಗೆ ಒಳಗಾಗುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳು ಆಡಳಿತ ಪಕ್ಷದ ತಪ್ಪುಗಳನ್ನು ಹಾಗೂ ಬೆಲೆ ಏರಿಕೆಯನ್ನು ಸಮರ್ಥವಾಗಿ ಪ್ರತಿಭಟನೆ ಮಾಡುವಲ್ಲಿ ಎಡವುತ್ತಿದೆ ಎನ್ನುವ ಅನುಮಾನ ಹಾಗೂ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಇದಕ್ಕೆ ತಕ್ಕಂತೆ ಪ್ರತಿಭಟನೆಯ ವಿಷಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ನಡುವೆ ಬಿರುಕು ಮೂಡಿದ್ದು ಬಹಿರಂಗವಾಗಿಯೇ ಈ ವಿಚಾರವಾಗಿ ಜೆಡಿಎಸ್ ಅಸಮಾಧಾನ ಹೊರ ಹಾಕಿದೆ.
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಆದರೆ, ಈ ಪ್ರತಿಭಟನೆ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಬಿರುಕು ಮೂಡಿದ್ದು. ಈ ಪ್ರತಿಭಟನೆಗೆ ನಮ್ಮನ್ನು ಆಹ್ವಾನಿಸಿಯೇ ಇಲ್ಲ ಎಂದು ಜೆಡಿಎಸ್ ದೂರಿದೆ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿರುವಾಗಲೇ ಬಿಜೆಪಿ ಪ್ರತಿಭಟನೆಗೆ ಇಳಿದಿದೆ.

ಮುಂದುವರಿದು ಬಿಜೆಪಿ ಈ ಹಿಂದಿನಂತೆ ಪ್ರತಿಭಟನೆ ಮಾಡುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಇದೆ. ಈ ರೀತಿ ಇರುವಾಗಲೇ ಜೆಡಿಎಸ್ ಸಹ ಈ ಪ್ರತಿಭಟನೆಯಿಂದ ಅಂತರ ಕಾಪಾಡಿಕೊಂಡಿತ್ತು. ಜೆಡಿಎಸ್ ಪಕ್ಷವು ಪ್ರತಿಭಟನೆಯ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿರುವುದು ಯಾಕೆ ಎನ್ನುವ ಅನುಮಾನ ಎದುರಾಗಿತ್ತು. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಸಹ ರಾಜ್ಯ ಸರ್ಕಾರದ ನಿರಂತರ ಬೆಲೆ ಏರಿಕೆಯನ್ನು ವಿರೋಧಿಸಿ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದರು. ಇದೀಗ ಬಿಜೆಪಿಯು ಬೆಲೆ ಏರಿಕೆಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದೆ.
ಈ ಪ್ರತಿಭಟನೆಗೆ ಜೆಡಿಎಸ್ ಪಕ್ಷವನ್ನು ಆಹ್ವಾನಿಸಿಲ್ಲ ಎಂದು ದೂರಲಾಗಿದೆ. ಪ್ರತಿಭಟನೆ ಹಾಗೂ ಸಂಕಲ್ಪ ಯಾತ್ರೆಗಳ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ನಡುವೆ ಬಿರುಕು ಮೂಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಮುಡಾ ಪ್ರಕರಣದಲ್ಲೂ ಇದೇ ಆಗಿತ್ತು. ಇದೀಗ ಪ್ರತಿಭಟನೆ ವಿಚಾರದಲ್ಲೂ ಇದೇ ಆಗಿದೆ. ಬಸ್, ಮೆಟ್ರೋ, ವಿದ್ಯುತ್, ಹಾಲು, ಮೊಸರು ಹಾಗೂ ಡೀಸೆಲ್ ಸೇರಿದಂತೆ ಹಲವು ಸೇವೆಗಳ ಮತ್ತು ವಸ್ತುಗಳ ಬೆಲೆ ಏರಿಕೆ ಕರ್ನಾಟಕದಲ್ಲಿ ಆಗಿದೆ.
ಕರ್ನಾಟಕದ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಆದರೆ ಈ ಬೃಹತ್ ಪ್ರತಿಭಟನೆಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನವನ್ನೇ ಕೊಟ್ಟಿಲ್ಲ ಎನ್ನುವ ದೂರು ಜೆಡಿಎಸ್ನಿಂದ ವ್ಯಕ್ತವಾಗಿದೆ. ಕರ್ನಾಟಕದಲ್ಲಿನ ಬೆಲೆ ಏರಿಕೆಯನ್ನು ವಿರೋಧಿಸಿ ಬಿಜೆಪಿಯು ಆಹೋರಾತ್ರಿ ಧರಣಿಯನ್ನು ಮಾಡಿದೆ. ಆದರೆ ಇದಕ್ಕೆ ಜೆಡಿಎಸ್ನಿಂದ ಬೆಂಬಲ ವ್ಯಕ್ತವಾಗಿಲ್ಲ. ಈ ಪ್ರತಿಭಟನೆಯಿಂದ ಜೆಡಿಎಸ್ ಅಂತರ ಕಾಪಾಡಿಕೊಂಡಿದೆ. ಪ್ರತಿಭಟನೆಗೆ ನಮ್ಮನ್ನೂ ಆಹ್ವಾನಿಸಿಯೇ ಇಲ್ಲ ಎಂದು ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಆಕ್ರೋಶ ಹೊರ ಹಾಕಿದ್ದಾರೆ.
ನಾವೆಷ್ಟೇ ಬೆಂಬಲ ಕೊಟ್ಟರೂ ಬಿಜೆಪಿಯಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗುತ್ತಿಲ್ಲ ಎನ್ನುವ ಆರೋಪವನ್ನು ಜೆಡಿಎಸ್ನ ಶಾಸಕರು ಹಾಗೂ ನಾಯಕರು ಮಾಡಿದ್ದಾರೆ. ಇದೀಗ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿಯಿಂದ ಅಂತರ ಕಾಪಾಡಿಕೊಂಡ ಮೇಲೆ ಜೆಡಿಎಸ್ನ ನಾಯಕರು ಸಹ ಅಂತರ ಕಾಪಾಡಿಕೊಂಡಿದ್ದಾರೆ.
ಈಚೆಗಷ್ಟೇ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ನಡುವೆ ಸಮನ್ವಯತೆಗೆ ಸಮಿತಿ ರಚನೆಯಾಗಬೇಕು ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದರು.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ
ಇನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ವಿಷಯವು ಚರ್ಚೆಯಾಗುತ್ತಿದ್ದಂತೆಯೇ ಈ ವಿಷಯದ ಬಗ್ಗೆ ಹಲವು ಬಿಜೆಪಿ ನಾಯಕರು ರಿಯಾಕ್ಟ್ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಿಯಾಕ್ಟ್ ಮಾಡಿದ್ದು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ನಾಯಕರು ಕೊಡುತ್ತಿರುವ ಭಿನ್ನ ಹೇಳಿಕೆಗಳಿಂದಲೇ ಹಲವು ಅನುಮಾನಗಳು ಶುರುವಾಗಿದೆ.
ಆರ್. ಅಶೋಕ್ ಹೇಳಿದ್ದೇನು: ಇನ್ನು ಬೆಂಗಳೂರಿನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಸೇರಿ ಪ್ರತಿಭಟನೆ ಮಾಡದೆ ಇರುವುದಕ್ಕೆ ಅಥವಾ ಈ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಬಿಜೆಪಿ ಹಾಗೂ ಜೆಡಿಎಸ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಒಂದೊಮ್ಮೆ ಸಣ್ಣಪುಟ್ಟ ಮನಸ್ಥಾಪಗಳು ಇದ್ದರೂ ನಾವು ಕುಳಿತು ಮಾತನಾಡಿ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀನ್ ಕುಮಾರ್ ಅವರು, ಇದು ಬಿಜೆಪಿಯಿಂದ ನಡೆಯುತ್ತಿರುವ ಪ್ರತಿಭಟನೆ. ಈ ಪ್ರತಿಭಟನೆಯಲ್ಲಿ ಜೆಡಿಎಸ್ ಭಾಗವಹಿಸಲೇಬೇಕು ಎಂದೇನು ಇಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಹೊಂದಾಣಿಕೆ ಆಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲೂ ಒಂದಾಗಿಯೇ ಕಾಣಿಸಿಕೊಳ್ಳಬೇಕು ಎಂದೇನು ಇಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಜೆಡಿಎಸ್ನವರು ಪ್ರತಿಭಟನೆಯಲ್ಲಿ ಭಾಗವಹಿಸಿದೆ ಇರುವ ವಿಷಯದ ಬಗ್ಗೆ ಸ್ಪಷ್ಟವಾಗಿ ಮಾತನಾಡಿಲ್ಲ. ಅಲ್ಲದೇ ಜೆಡಿಎಸ್ನವರು ಸಮನ್ವಯ ಸಮಿತಿ ರಚನೆಗೆ ಹೇಳಿದ್ದಾರೆ. ನಾವು ಖಂಡಿತವಾಗಿಯೂ ಸಮನ್ವಯ ಸಮಿತಿಯನ್ನು ಮಾಡಿಕೊಳ್ಳಲಿದ್ದೇವೆ ಎಂದಿದ್ದಾರೆ.
ಕರ್ನಾಟಕದಲ್ಲಿ ನಿಲ್ಲದ ಬೆಲೆ ಏರಿಕೆ: ಇನ್ನು ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಯ ಪರ್ವವನ್ನೇ ಶುರು ಮಾಡಿದೆ. ರಾತ್ರಿ - ಬೆಳಗಾಗುವುದರ ಒಳಗಾಗಿ ಒಂದೊಂದು ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ, ವಿರೋಧ ಪಕ್ಷಗಳು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿ ಜೋರು ಪ್ರತಿಭಟನೆ ಮಾಡುವಲ್ಲಿ ವಿಫಲವಾಗಿರುವುದು ಜನ ಸಾಮಾನ್ಯರಲ್ಲಿ ನಿರಾಸೆ ಮೂಡಿಸಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಬೆಲೆ ಏರಿಕೆಯ ವಿಚಾರದಲ್ಲಿ ಜೆಡಿಎಸ್ ಪ್ರತಿಭಟನೆ ಮಾಡದೆ ಕೇವಲ ಟ್ವೀಟ್ ಪ್ರತಿಕ್ರಿಯೆಗೆ ಸೀಮಿತವಾಗಿದೆ. ಬಿಜೆಪಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿದೆ. ಆದರೆ ಇದು ಸಹ ದೊಡ್ಡಮಟ್ಟದಲ್ಲಿ ಆಗಿಲ್ಲ. ಜೆಡಿಎಸ್ಗೆ ಪ್ರತ್ಯೇಕವಾಗಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶ ಇದ್ದರೂ ಪ್ರತಿಭಟನೆ ನಡೆಸಿಲ್ಲ ಎಂದು ಜನರು ದೂರಿದ್ದಾರೆ.












Click it and Unblock the Notifications