ಮಹಿಳೆಯರಿಗೆ ಫ್ರೀ ಬಸ್ ಎಫೆಕ್ಟ್: ಕರ್ನಾಟಕ ರತ್ನ ಅಪ್ಪು ಸಮಾಧಿ ದರ್ಶನಕ್ಕೆ ಜನಸಾಗರ!
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಈ ಹೆಸರು ಕೇಳುತ್ತಿದ್ದಂತೆ ಕನ್ನಡ ಕುಲಕೋಟಿಗೆ ಏನೋ ರೋಮಾಂಚನ. ಅಷ್ಟಕ್ಕೂ ದಿವಂಗತ ಪುನೀತ್ ಸಮಾಧಿ ಸ್ಥಳವನ್ನ ದೇಗುಲದಂತೆ ಜನ ಪೂಜೆಸುತ್ತಾರೆ. ಇದೀಗ ರಾಜ್ಯದಲ್ಲಿ ಉಚಿತ ಬಸ್ ಸೇವೆಯಿಂದ ಅಪ್ಪು ದರ್ಶನಕ್ಕೆ ಬರುವ ಮಹಿಳೆಯರ ಸಂಖ್ಯೆ ಭಾರಿ ಏರಿಕೆ ಕಂಡಿದೆಯಂತೆ. ಹಾಗಾದರೆ ಅಪ್ಪು ಸಮಾಧಿ ದರ್ಶನ ಪಡೆದವರು ಎಷ್ಟು ಸಾವಿರ ಜನ? ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಕನ್ನಡಿಗರು ಮಾತ್ರವಲ್ಲ ದೇಶದ ಮೂಲೆ ಮೂಲೆ ಇದೀಗ ಪವರ್ ಸ್ಟಾರ್ ಪುನಿತ್ ರಾಜ್ಕುಮಾರ್ ಅವರ ಅಭಿಮಾನಿಗಳಿಂದ ಆವೃತವಾಗಿದೆ ಎನ್ನಬಹುದು. ಕರ್ನಾಟಕ ರತ್ನ ಅಪ್ಪು ಕೋಟ್ಯಂತರ ಅಭಿಮಾನಿಗಳನ್ನ ಅಗಲಿ ಹೋಗಿದ್ದಾರೆ. ಆದರೆ ಅವರು ಮಾಡಿರುವ ಸಮಾಜಮುಖಿ ಕೆಲಸ ಇಂದಿಗೂ ಅವರನ್ನ ಜೀವಂತವಾಗಿ ಇಟ್ಟಿದೆ. ಹೀಗಾಗಿಯೇ ಅಪ್ಪುರ ಸಮಾಧಿ ಸ್ಥಳಕ್ಕೆ ಇಂದಿಗೂ ನಿತ್ಯ ಸಾವಿರಾರು ಫ್ಯಾನ್ಸ್ ಭಕ್ತರಂತೆ ಭೇಟಿ ನೀಡುತ್ತಾರೆ. ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಮಹಿಳೆಯರಿಗೆ ಒದಗಿಸಿದ ಉಚಿತ ಬಸ್ ವ್ಯವಸ್ಥೆಯು ಸಾಕಷ್ಟು ಸಹಾಯ ಮಾಡುತ್ತಿದ್ದು, ಅಪ್ಪು ಸಮಾಧಿ ದರ್ಶನಕ್ಕೆ ಸಾವಿರಾರು ಮಹಿಳೆಯರು ನಿತ್ಯ ಬರ್ತಿದ್ದಾರಂತೆ.

ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರು
ಅಂದಹಾಗೆ ಅಪ್ಪು ನಮ್ಮನ್ನು ಅಗಲಿ ಒಂದೂವರೆ ವರ್ಷಗಳೇ ಉರುಳಿದರೂ ಆ ನೋವು ಮಾತ್ರ ಮರೆಯಾಗುತ್ತಿಲ್ಲ. ಹೀಗಾಗಿ ಅಭಿಮಾನಿಗಳು ಇಂದಿಗೂ ಅಪ್ಪು ಸಮಾಧಿ ಎದುರಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮಾಡುತ್ತಿದ್ದ ಸಮಾಜ ಮುಖಿ ಕೆಲಸಗಳನ್ನು ನೆನೆಯುತ್ತಿದ್ದಾರೆ. ಅಲ್ಲದೆ ಅಪ್ಪು ಕೈಯಿಂದ ಸಹಾಯ ಪಡೆದವರಿಗೆ, ಅವರು ಇಲ್ಲವೆಂಬ ನೋವು ಸಾಕಷ್ಟು ಕಾಡುತ್ತಿದೆ. ಹಾಗೇ ದೂರದ ಊರುಗಳಿಂದ, ಆ ಪೈಕಿ ಉತ್ತರ ಕರ್ನಾಟಕದಿಂದ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಈ ಮೂಲಕ ಉಚಿತ ಬಸ್ ವ್ಯವಸ್ಥೆ ದೇಗುಲಗಳ ಭೇಟಿಗೆ ಸಹಾಯ ಮಾಡಿದಂತೆ, ಅಪ್ಪು ಸಮಾಧಿಗೆ ಭೇಟಿ ನೀಡಲು ಕೂಡ ಬೆಂಬಲ ಒದಗಿಸಿದೆ.
ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್!
ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಕೊಟ್ಟಿರುವ 5 ಗ್ಯಾರಂಟಿ ಪೈಕಿ ಉಚಿತ ಬಸ್ ಪ್ರಯಾಣವೂ ಒಂದು. ಈಗಾಗಲೇ ಉಚಿತ ಬಸ್ ಯೋಜನೆ ಅಂದರೆ ಈ ಶಕ್ತಿ ಯೋಜನೆ ಜಾರಿಯಾಗಿ 2 ವಾರವೇ ಕಳೆದಿವೆ. ಆದರೂ ಈ ಯೋಜನೆ ಸದ್ದು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅದರಲ್ಲೂ ದುಡಿಯುವ ವರ್ಗದ ಮಹಿಳೆಯರಿಗೆ ಸಾಕಷ್ಟು ಸಹಾಯ ಆಗಿದೆ. ಇನ್ನು ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಕಳೆದ 2 ವಾರದಲ್ಲಿ ಅಂದ್ರೆ 11.06.2023ರಿಂದ 25.06.2023ರ ತನಕ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಖರ್ಚು ಮಾಡಿದ್ದು ಎಷ್ಟು ನೂರು ಕೋಟಿ ರೂಪಾಯಿ ಗೊತ್ತಾ?

2 ವಾರದಲ್ಲಿ 179 ಕೋಟಿ ರೂಪಾಯಿ ಖರ್ಚು!
11.06.2023ರಿಂದ 25.06.2023ರ ತನಕ ಕರ್ನಾಟಕದ 4 ನಿಗಮಗಳ ಬಸ್ಗಳಲ್ಲಿ ಒಟ್ಟಾರೆ 7 ಕೋಟಿ 64 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಸರ್ಕಾರ ಒಟ್ಟಾರೆ 179 ಕೋಟಿ 28 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈ ಮೂಲಕ ಸರ್ಕಾರಿ ಸಾರಿಗೆಗೆ ಜನ ಬರ್ತಿಲ್ಲ ಅನ್ನೋ ಕೊರಗು ದೂರವಾಗುತ್ತಿದೆ. ಹಾಗೇ ಸಾರಿಗೆ ಸಂಸ್ಥೆಗಳಿಗೂ ಈ ಮೂಲಕ ಹೊಸ ಉತ್ತೇಜನ ಸಿಕ್ಕಂತಾಗಿದೆ. ಸಾಕಷ್ಟು ನಷ್ಟದ ಹಾದಿಯಲ್ಲಿ ಸಾಗುತ್ತಿದ್ದ ರಾಜ್ಯ ಸರ್ಕಾರಿ ಸಾರಿಗೆಗೆ ಹೊಸ ಹುಮ್ಮಸ್ಸು ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ. ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಿದರೂ ರಾಜ್ಯ ಸರ್ಕಾರವೇ ಅದರ ಟಿಕೆಟ್ನ ವೆಚ್ಚ ಭರಿಸಲಿದೆ. ಇದರಿಂದ ದೇಗುಲ ಭೇಟಿಗೂ ಸಾಕಷ್ಟು ಮಹಿಳೆಯರು ತೆರಳುತ್ತಿದ್ದು, ಅದರಂತೆ ಅಪ್ಪು ಸಮಾಧಿಗೂ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳು ಬರುತ್ತಿರುವುದು ವಿಶೇಷ.












Click it and Unblock the Notifications