ರೈತರಿಗೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತನೆ: ನಂದಿನಿ ಹಾಲಿನ ದರ ಹೆಚ್ಚಳದ ಮುನ್ಸೂಚನೆ ಕೊಟ್ಟ ಕೆಎನ್ ರಾಜಣ್ಣ
ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಲು ಚಿಂತನೆ ಮಾಡುತ್ತಿದೆ ಎಂದು ಸಹಕಾರ ಖಾತೆ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಈ ಮೂಲಕ ನಂದಿನ ಹಾಲಿನ ದರವನ್ನು ಹೆಚ್ಚಿಸಬಹುದು ಎನ್ನುವ ಪರೋಕ್ಷ ಸೂಚನೆಯನ್ನು ನೀಡಿದ್ದಾರೆ.
ಹಾಲಿನ ದರ ಏರಿಕೆ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ. ದರ ಹೆಚ್ಚಳ ಎಂದರೆ ಎರಡು ರೀತಿ ಇರುತ್ತದೆ. ಉತ್ಪಾದಕರಿಗೆ ಹೆಚ್ಚಿನ ದರವನ್ನು ನೀಡುವುದು, ಖರೀದಿ ಮಾಡುವವರಿಗೆ ದರ ಹೆಚ್ಚು ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಕರ್ನಾಟಕದಲ್ಲಿ ಈ ಎರಡೂ ಕಡಿಮೆ ಇದೆ, ಹಾಲು ಉತ್ಪಾದಕರಿಗೆ ನಾವು ನೆರವು ನೀಡಬೇಕಿದೆ. ಯಾರಿಗೂ ಹೊರೆಯಾಗದಂತೆ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಸಚಿವ ಕೆಎನ್ ರಾಜಣ್ಣ ಹೇಳಿದರು.

ಹಲವು ತಿಂಗಳಿನಿಂದ ರಾಜ್ಯದಲ್ಲಿ ನಂದಿನಿ ದರ ಹೆಚ್ಚಳದ ಬಗ್ಗೆ ಸುದ್ದಿಗಳು ಬರುತ್ತಲೇ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ದರ ಹೆಚ್ಚಳ ಮಾಡಬೇಕಿತ್ತಾದರೂ, ಮಾಡಿರಲಿಲ್ಲ. ಕೆಎಂಎಫ್ ಮಾತ್ರ ನಂದಿನ ಹಾಲಿನ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ.
5 ರೂಪಾಯಿ ಹೆಚ್ಚಳ ಸಾಧ್ಯತೆ
ರ್ನಾಟಕ ಹಾಲು ಮಾರಾಟ ಮಹಾಮಂಡಳದ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಕೂಡ ದರ ಹೆಚ್ಚಳದ ಬಗ್ಗೆ ಸುಳಿವು ನೀಡಿದ್ದರು. ನಂದಿನ ಹಾಲಿನ ದರವನ್ನು ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಈಗಾಗಲೇ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದ್ದರು.
ಎಲ್ಲಾ ಹಾಲು ಒಕ್ಕೂಟಗಳು ಹಾಲಿನ ದರವನ್ನು ಕನಿಷ್ಠ 5 ರೂಪಾಯಿ ಹೆಚ್ಚಿಸುವಂತೆ ಬೇಡಿಕೆ ಇಟ್ಟಿವೆ. ದರ ಹೆಚ್ಚಿಸುವ ಜೊತೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ಹಾಲು, ಮೊಸರು, ತುಪ್ಪ ಪೂರೈಕೆ ಮಾಡಲು ಆದ್ಯತೆ ನೀಡುವುದಾಗಿ ಹೇಳಿದ್ದರು.
ರೈತರಿಗೆ ಪ್ರೋತ್ಸಾಹಧನ ಹೆಚ್ಚಳ
ಗ್ರಾಹಕರಿಗೆ 5 ರೂಪಾಯಿ ದರ ಹೆಚ್ಚಿಸಿದರೂ ಅದರಲ್ಲಿ 2 ರೂಪಾಯಿಗಳನ್ನು ಹಾಲು ಉತ್ಪಾದಕರಿಗೆ ನೀಡಲು ಚಿಂತನೆ ನಡೆಸಲಾಗಿದೆ. ಈಗಾಗಲೇ ರೈತರಿಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ಅದರ ಜೊತೆ ದರ ಹೆಚ್ಚಿಸಿದರೆ ಇನ್ನೂ 2 ರೂಪಾಯಿ ಹೆಚ್ಚಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.
ಬೇಸಿಗೆ ಸಮಯದಲ್ಲಿ ರೈತರಿಗೆ ಕೊಡುತ್ತಿದ್ದ ವಿಶೇಷ ಪ್ರೋತ್ಸಾಹ ಧನ ಕಡಿಮೆ ಮಾಡಲು ಇತ್ತೀಚೆಗೆ ಒಕ್ಕೂಟ ನಿರ್ಧರಿಸಿತ್ತು. ಇದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹಾಲಿನ ಪ್ರೋತ್ಸಾಹ ಧನ ಕಡಿಮೆ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಎಂಎಫ್ಗೆ ಸೂಚನೆ ನೀಡಿದ್ದರು.












Click it and Unblock the Notifications