ರೈತರು ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಬಾರದು: ಗೌಡರ ಕಿವಿಮಾತು
ರೈತರು ಕೇವಲ ಕೃಷಿ ಅಥವಾ ಮಳೆಯನ್ನು ಮಾತ್ರ ಆಧರಿಸದೇ ಇತರ ಕೆಲಸಗಳನ್ನು ರೂಢಿಸಿಕೊಳ್ಳಬೇಕೆಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕರೆ ನೀಡಿದ್ದಾರೆ. ಚಿಕ್ಕಮಗಳೂರನ ಬೀರೂರಿನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಡಿಸಿಸಿ ಬ್ಯಾಂಕ್ ನ ಶಾಖೆಯ ಕಟ್ಟಡ
ಚಿಕ್ಕಮಗಳೂರು, ಜೂನ್ 10: ರಾಜ್ಯದ ರೈತರು ಕುಲಕಸುಬಾಗಿ ಬಂದಿರುವ ತಮ್ಮ ಕೃಷಿಯ ಮೇಲೇ ಹೆಚ್ಚು ಅವಲಂಬಿತವಾಗದೆ ಇತರ ಕೆಲಸ ಹಾಗೂ ಕೆಲವು ಉಪ ಕಸುಬುಗಳನ್ನು ರೂಢಿಸಿಕೊಳ್ಳಬೇಕೆಂದು ಜೆಡಿಎಸ್ ಪಕ್ಷದ ಧುರೀಣ ಎಚ್.ಡಿ. ದೇವೇಗೌಡರು ಕಿವಿಮಾತು ಹೇಳಿದ್ದಾರೆ.
ಚಿಕ್ಕಮಗಳೂರಿನ ಬೀರೂರಿನಲ್ಲಿ ಡಿಸಿಸಿ ಬ್ಯಾಂಕ್ ನ ನೂತನ ಶಾಖೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ''ಪ್ರತಿಯೊಬ್ಬ ರೈತರಿಗೂ ಬೆಳೆ ನಷ್ಟವಾದಾಗ ವಿಮೆ ಕಟ್ಟಲಿ , ಕಟ್ಟದಿರಲಿ ಪರಿಹಾರ ಸಿಗಬೇಕೆಂಬ ಆಶಯವಿರುತ್ತದೆ. ಆದರೂ, ರೈತರು ಮಳೆ ಹಾಗೂ ಕೃಷಿಯನ್ನು ಮಾತ್ರ ಆಶ್ರಯಿಸದೇ ಇತರ ಕೆಲಸಗಳನ್ನೂ ರೂಢಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು'' ಎಂದು ಆಶಿಸಿದರು.
ಇದೇ ವೇಳೆ, ರೈತರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ''ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ರೈತರ ಹೋರಾಟ ತಾರಕಕ್ಕೇರಿದೆ. ದೇಶದ ಅಲ್ಲಲ್ಲಿ ಸಾಲಮನ್ನಾಕ್ಕಾಗಿ ಹೋರಾಟ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿ ಹಾಸನ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಸೇರಿದಂತೆ ಅನೇಕ ಭಾಗಗಳಲ್ಲಿ ಬೆಳೆ ನಷ್ಟವಾಗಿದೆ. ಆದರೆ ಸರ್ಕಾರಕ್ಕೆ ಬೆಳೆ ಪರಿಹಾರ ನೀಡಲು ಮನಸ್ಸಿಲ್ಲ'' ಎಂದು ಬೇಸರಿಸಿದರು.
ಇದೇ ವೇಳೆ, ರೈತ ವಿರೋಧಿ ನೀತಿಗಳನ್ನು ವಿರೋಧಿಸಿದ ಅವರು, ಯಾವುದೇ ದೇಶವಾಗಲೀ, ಸರ್ಕಾರವಾಗಲಿ ರೈತರನ್ನು, ಕೃಷಿಯನ್ನು ತಾತ್ಸಾರದಿಂದ ಕಂಡರೆ ಅಂಥ ದೇಶ, ಸರ್ಕಾರಗಳು ಸರ್ವನಾಶವಾಗುವುದು ಖಂಡಿತ ಎಂದು ಎಚ್ಚರಿಸಿದರು.