Jowar Crop: ಬರಗಾಲದಲ್ಲೂ ರಾಯಚೂರು ರೈತರಲ್ಲಿ ಮಂದಹಾಸ ತರಿಸಿದ 'ಬಿಳಿ ಜೋಳ'
ಬೆಂಗಳೂರು, ಜನವರಿ 02: ರಾಜ್ಯದೆಲ್ಲಡೆ ಬರಗಾಲ ಆವರಿಸಿದೆ. ಬಿತ್ತಿದ ಬೆಳೆ ಕೈಗೆ ಬರದೇ ರೈತರು ಕಂಗಾಲಾಗಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಮಧ್ಯೆ ಆಗಿದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಬಿಳಿ ಜೋಳ ಬಿತ್ತಿದ್ದ ರೈತರಿಗೆ ಉತ್ತಮ ಬೆಳೆ ಕಾಣುವ ಭರವಸೆಯಲ್ಲಿದ್ದಾರೆ.
ಕರ್ನಾಟಕಕ್ಕೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದೆ. ಹೀಗಾಗಿಯೇ ಹತ್ತಿ, ಮೆಣಸಿನಕಾಯಿ ಸೇರಿದಂತೆ ಇನ್ನಿತರ ಬೆಳೆಗಳು ಹಾಳಾಗಿದ್ದರಿಂದ ಹೊಲ ಹರಗಿಸಿ ಹಿಂಗಾರು ಹಂಗಾಮಿಗೆ ಜೋಳ ಬಿತ್ತನೆ ಮಾಡಿದ್ದರು. ಆದರೆ ಕಡಿಮೆ ಮಳೆ ಬೇಡುವ ಈ ಜೋಳ ಬೆಳೆಯ ಮೇಲೆಯು ಮೊದಲು ಅಷ್ಟಾಗಿ ನಂಬಿಕೆ ಇರಲಿಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ಮಳೆ ಆಗಿದ್ದರಿಂದ ವಾತಾವರಣದಲ್ಲಿ ತೇವಾಂಶ ಕಂಡು ಬಂದಿದೆ. ಇದರ ಪರಿಣಾಮ ರಾಯಚೂರಿನ ಸಿಂಧನೂರು ವ್ಯಾಪ್ತಿಯ ಹೊಲಗಳಲ್ಲಿ ಬಿಳಿ ಜೋಳ ಬೆಳೆ ತೆನೆಒಡೆದು ನಿಂತಿದೆ. ಬರಗಾಲದ ಮಧ್ಯೆ ಈ ಜೋಳ ಬೆಳೆ ರೈತರಲ್ಲಿ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿದೆ.

ಸಂಕಷ್ಟದ ರೈತರಲ್ಲಿ ಮಂದಹಾಸ ಮೂಡಿಸಿದ ಬೆಳೆ
ಡಿಸೆಂಬರ್ ಅಂತ್ಯಕ್ಕೆ ರೈತರ ಜಮೀನುಗಳಲ್ಲಿ ಆಳೆತ್ತರಕ್ಕೆ ಬಿಳಿ ಜೋಳ ಬೆಳೆದು ನಿಂತಿದೆ. ಬಿತ್ತನೆ ಆಗಿ ಮೊಣಕಾಲುದ್ದ ಜೋಳ ಬೆಳೆದಾಗ ನೀರಿರಲಿಲ್ಲ ಎಂದು ರೈತರು ವಿಶ್ವಾಸ ಕಳೆದುಕೊಂಡಿದ್ದರು. ದಿನ ಕಳೆದಂತೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಮುಂಗಾರು ಬೆಳೆ ಕಳೆದುಕೊಂಡ ರೈತರಿಗೆ ಹಿಂಗಾರು ಬೆಳೆ ಜೋಳ ಆಸರೆಗೆ ಬರಲಿದೆ.
ರಾಯಚೂರಿನ ಸಿಂಧನೂರು ಸೇರಿದಂತೆ ವಿವಿಧೆಡೆ ವ್ಯಾಪ್ತಿಯಲ್ಲಿ ಕರಿ ಮಣ್ಣಿನ ಭೂಮಿ (ಎರೆಭೂಮಿ) ಯಲ್ಲಿ ಜೋಳ ಬೆಳೆದು ನಿಂತಿದೆ. ಇಲ್ಲಿನ ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ ರೈತರಲ್ಲಿ ಜೋಳ ಬೆಳೆ ನೋಡಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸಿರುಗುಪ್ಪ ತಾಲೂಕಿನ ವಿವಿಧ ಭಾಗಗಳಲ್ಲೂ ಜೋಳ ನಿರೀಕ್ಷೆ ಮಟ್ಟದಲ್ಲಿ ಬೆಳೆದಿದೆ.

ಹತ್ತಿ ಬೆಳೆ ನಾಶವಾದ ಹೊಲದಲ್ಲಿ ಜೋಳ ಬಿತ್ತನೆ
ಕಲ್ಲೂರು ಗ್ರಾಮದ ರೈತ ರವಿ ಕುಮಾರ್ ಅವರು ಮುಂಗಾರು ಮಳೆಗೆ ಐದು ಎಕರೆಯಲ್ಲಿ ಹತ್ತಿ ಕಾಳು ಬಿತ್ತನೆ ಮಾಡಿದ್ದರು. ಮಳೆಕೊರತೆಯಿಂದ ನಾಟಿಕೆಯಾಗಿರಲಿಲ್ಲ. ಹಾಗಾಗಿ ಜಮೀನು ಖಾಲಿ ಉಳಿದಿತ್ತು. ಹಿಂಗಾರು ಬಿತ್ತನೆ ಸಂದರ್ಭದಲ್ಲಿಯೂ ಮಳೆ ಇರಲಿಲ್ಲ. ನಾಟಿಕೆಯಾಗುವಷ್ಟು ಮಾತ್ರ ತೇವಾಂಶವಿತ್ತು. ಜಮೀನನ್ನು ಉಳುಮೆ ಮಾಡದೆ ಹಾಗೇ ಬಿಡಬಾರದು ಎಂಬ ನಂಬಿಕೆಯಲ್ಲೇ ಜೋಳ ಬಿತ್ತನೆ ಮಾಡಿ ದೇವರ ಮೇಲೆ ಭಾರ ಹಾಕಿದ್ದ.
ಹವಾಮಾನ ವೈಪರಿತ್ಯ ಜೋಳಕ್ಕೆ ವರದಾನ
ತದನಂತರ ವಾಯುಭಾರ ಕುಸಿತ, ಚಂಡಮಾರುತದಿಂದಾಗಿ ಅಕಾಲಿಕವಾಗಿ ಸುರಿದ ಅಲ್ಪ ಮಳೆಗೆ ಜೋಳ ಬೆಳೆದು ನಿಂತಿದೆ. ಎರೆಭೂಮಿ (ಕಪ್ಪುಮಣ್ಣು) ಆಗಿರುವುದರಿಂದ ಸ್ವಲ್ಪಮಳೆಯಾದರೂ ಭೂಮಿ ಬಹಳ ದಿನದವರೆಗೆ ತೇವಾಂಶ ಹಿಡಿದಿಟ್ಟುಕೊಳ್ಳಲಿದೆ. ಇದೇ ಇದೀಗ ರೈತನಿಗೆ ವರದಾನವಾಗಿದೆ.
ಈ ವರ್ಷ ಜೋಳಕ್ಕೆ ಅಧಿಕ ಬೆಲೆ ಸಾಧ್ಯತೆ
ಜನವರಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗಲಿದ್ದು, ಜೋಳ ಕಾಳು ಕಟ್ಟಲಿದೆ. ಡಿಸೆಂಬರದ 28ರ ಹೊತ್ತಿಗಾಗಲೇ ಜೋಳ ತೆನೆ ಒಡೆದು ನಿಂತಿದೆ ಎನ್ನುತ್ತಾರೆ ರೈತ ರವಿಕುಮಾರ್. ಈ ವರ್ಷ ಜೋಳ ಬಿತ್ತಿನೆ ಅಷ್ಟಾಗಿ ಆಗಿಲ್ಲ. ಇದು ಮಳೆ ಕೊರತೆ ಕಾರಣ ಎನ್ನಲಾಗಿದೆ. ಇದರ ಮಧ್ಯೆ ವಿವಿಧೆಡೆ ಬಿಳಿ ಜೋಳದ ಫಸಲು ಉತ್ತಮವಾಗಿದ್ದು, ಬೆಲೆಯು ಉತ್ತಮವಾಗಿ ಸಿಗಲಿದ್ದು, ರೈತನ ಅದೃಷ್ಟ ಖುಲಾಯಿಸಲಿದೆ.












Click it and Unblock the Notifications