ಇಂದು ಬೃಹತ್ ಪ್ರತಿಭಟನೆ: ರಾಜ್ಯದಲ್ಲಿ ಹೆದ್ದಾರಿ ತಡೆ ಎಲ್ಲೆಲ್ಲಿ?
ಬೆಂಗಳೂರು, ಫೆಬ್ರವರಿ 6: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ದೇಶದಾದ್ಯಂತ ಇಂದು 'ಛಕ್ಕಾ ಜಾಮ್' ಹೆದ್ದಾರಿ ತಡೆ ನಡೆಸಲಿದ್ದಾರೆ. ಇದರಿಂದ ದೇಶದ ಬಹುತೇಕ ರಾಜ್ಯಗಳಲ್ಲಿನ ಪ್ರಮುಖ ರಸ್ತೆಗಳು ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಬಂದ್ ಆಗಲಿದೆ. ಇದರಿಂದ ವಾಹನ ಸವಾರರಿಗೆ ಪ್ರತಿಭಟನೆಯ ಬಿಸಿ ತೀವ್ರವಾಗಿ ತಟ್ಟುವ ಸಾಧ್ಯತೆ ಇದೆ.
Recommended Video
ಮುಖ್ಯವಾಗಿ ರಾಜಧಾನಿ ಬೆಂಗಳೂರಿನಿಂದ ಸುತ್ತಮುತ್ತಲ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಲಿರುವುದರಿಂದ ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರ ಹೋಗಲು ಮತ್ತು ಬರುವ ವಾಹನ ಸವಾರರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ಚೆನ್ನೈ, ಬೆಂಗಳೂರು-ಪುಣೆ ಹೆದ್ದಾರಿಗಳು ಬಂದ್ ಆಗಲಿವೆ. ಇನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರ, ಮಾಗಡಿ ರಸ್ತೆ ಮುಂತಾದವುಗಳಲ್ಲಿ ರೈತ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಿವೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಹೀಗಾಗಿ ಬೆಂಗಳೂರಿನಿಂದ ಹೊರ ಹೋಗಲು ಹಾಗೂ ಒಳಗೆ ಬರಲು ಬಯಸುವವರು ಇದರ ಬಿಸಿ ಎದುರಿಸಲಿದ್ದಾರೆ. ಮುಂದೆ ಓದಿ.
ಅಷ್ಟ ದಿಕ್ಕುಗಳಲ್ಲೂ ಪ್ರತಿಭಟನೆ
ಬೆಂಗಳೂರಿನ ಎಲ್ಲ ದಿಕ್ಕುಗಳಲ್ಲಿಯೂ ಪ್ರಮುಖ ರಸ್ತೆಗಳನ್ನು ತಡೆಯಲು ರೈತ ಸಂಘಟನೆಗಳು ನಿರ್ಧರಿಸಿವೆ. ಇದಲ್ಲದೆ ಮಂಡ್ಯ, ತುಮಕೂರು, ರಾಯಚೂರು, ಮೈಸೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೂಡ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಎಲ್ಲೆಲ್ಲಿ ಪ್ರತಿಭಟನೆ?
ಮೈಸೂರು-ಬೆಂಗಳೂರು ಹೆದ್ದಾರಿಯ ಕೊಲಂಬಿಯಾ ಏಷ್ಯಾ ಸರ್ಕಲ್, ಮೈಸೂರು-ಊಟಿ ಬಂಡಿಪಾಳ್ಯ ಮಾರ್ಗ, ಬೆಂಗಳೂರು-ಹಾಸನ ಹೆದ್ದಾರಿಯ ಚೆನ್ನಪಟ್ಟಣ, ಮಂಡ್ಯದ ವಿ.ಸಿ ಫಾರಂ, ಚಿತ್ರದುರ್ಗ, ಗುಬ್ಬಿ, ರಾಯಚೂರು, ಕೋಲಾರ ಮುಂತಾದೆಡೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಅನುಮತಿ ಪಡೆದಿಲ್ಲ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ಪೊಲೀಸರ ಅನುಮತಿ ಪಡೆದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಅಹಿತಕರ ಘಟನೆಳು ನಡೆಯದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವರು ಮನವಿ ಮಾಡಿದ್ದಾರೆ.
ಪ್ರಧಾನಿಗೆ ರಕ್ತದಲ್ಲಿ ಪತ್ರ
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟ್ಟರ್ ಅಭಿಯಾನ ನಡೆಸಲಿದೆ. ಕರ್ನಾಟಕ ಕಿಸಾನ್ ಕಾಂಗ್ರೆಸ್ ವತಿಯಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆಯುವ ಚಳವಳಿ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬೆಂಗಳೂರಿನಲ್ಲಿರುವುದರಿಂದ ಅವರ ಭೇಟಿಗಾಗಿ ಸಂಘಟನೆ ಅನುಮತಿ ಕೋರಿದೆ. ಅನುಮತಿ ದೊರೆತರೆ ಕಾಯ್ದೆಗಳ ವಿರುದ್ಧ ಅವರಿಗೆ ದೂರು ನೀಡಲಾಗುವುದು ಎಂದು ಸಂಘಟನೆ ತಿಳಿಸಿದೆ.