ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು; ಸಾಲಬಾಧೆಯಿಂದ ಆತ್ಮಹತ್ಯೆ ಶಂಕೆ!
ಮೈಸೂರು, ಆಗಸ್ಟ್ 28: ಮೈಸೂರು ನಗರದ ಚಾಮುಂಡಿಪುರಂನಲ್ಲಿಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತ ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಭಾನುವಾರ ನಗರದ ಚಾಮುಂಡಿಪುರಂ ಲೇಔಟ್ ನಿವಾಸದಲ್ಲಿ ದಂಪತಿ ಹಾಗೂ ಇಬ್ಬರು ಪುತ್ರಿಯರು ಶವವಾಗಿ ಪತ್ತೆಯಾಗಿದ್ದಾರೆ. ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ದೂರು ನೀಡಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸಾಲಬಾಧೆಯಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಮಹದೇವಸ್ವಾಮಿ (48), ಪತ್ನಿ ಅನಿತಾ (38), ಪುತ್ರಿಯರಾದ ಚಂದ್ರಕಲಾ (17), ಧನಲಕ್ಷ್ಮೇ (15) ಮೃತರು. ಚಂದ್ರಕಲಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದರೆ, ಅನಿತಾ ದೇಹ ಕುರ್ಚಿ ಮೇಲೆ, ಧನಲಕ್ಷ್ಮಿ ದೇಹ ಕೊಠಡಿಯಲ್ಲಿ, ಮಹದೇವಸ್ವಾಮಿ ಮೃತದೇಹ ಹಾಲ್ನಲ್ಲಿ ಪತ್ತೆಯಾಗಿವೆ. ಭಾನುವಾರ ಸಂಜೆ ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ಕು ಶವಗಳು ಪತ್ತೆಯಾಗಿವೆ.
ವಿದ್ಯಾರಣ್ಯಪುರಂನಲ್ಲಿ ವಾಸವಾಗಿದ್ದ ಅವರು ಎರಡು ತಿಂಗಳ ಹಿಂದೆಯಷ್ಟೇ ಚಾಮುಂಡಿಪುರಂನ ನಾರಾಯಣ ಎಂಬುವವರಿಗೆ ಸೇರಿದ ಮನೆಯನ್ನು ಬಾಡಿಗೆ ಪಡೆದು ವಾಸವಿದ್ದರು. ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಮುತ್ತುರಾಜು, ಬಿ.ಟಿ.ಜಾಹ್ನವಿ, ಎಸಿಪಿ ಗಂಗಾಧರ ಸ್ವಾಮಿ, ಕೆ.ಆರ್.ಠಾಣೆ ಇನ್ಸ್ಪೆಕ್ಟರ್ ನಾಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಎಫ್ಎಸ್ಎಲ್ ಅಧಿಕಾರಿಗಳು ಪರಿಶೀಲಿಸಿದರು. ಹುಣಸೂರಿನಲ್ಲಿರುವ ಅನಿತಾ ಅವರ ಪೋಷಕರು ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ನಾಲ್ವರದು ಆತ್ಮಹತ್ಯೆಯೋ ಅಥವಾ ಇನ್ನಿತರ ಕಾರಣಗಳಿಂದ ಮೃತಪಟ್ಟಿದ್ದಾರೋ ಎಂಬುದು ತನಿಖೆ ಯಿಂದ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಇಂದು ಪರೀಕ್ಷೆ ನಡೆಯುವ ಸಾಧ್ಯತೆ ಇದೆ. 18 ವರ್ಷಗಳ ಹಿಂದೆ ಮಹದೇವಸ್ವಾಮಿ ಮತ್ತು ಧನಲಕ್ಷ್ಮಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಮಹದೇವಸ್ವಾಮಿ ಅವರು ನಗರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು. ಸಾಲಬಾಧೆಯಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಾಲ್ವರೂ ಗುರುವಾರ ಅಥವಾ ಶುಕ್ರವಾರ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರನ್ನು ಕರೆಸಲಾಯಿತು. ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications