ಮಳೆ.. ಮಳೆ.. ಮನಸ್ಸಿಗೆ ಮಸ್ತಿ ನೀಡುವ ಹಾಡುಗಳು!
ಮಳೆ ಬರುತ್ತಿದೆ, ಹೊರಗಡೆ ಚಳಿ ಬೇರೆ ಇದೆ. ಬೇಸಿಗೆ ಕಾಲದಲ್ಲಿ ದಿಢೀರ್ ಮಳೆ ಬಂದಿದ್ದು ಖುಷಿ ಕೊಡುತ್ತಿದೆ. ಹೀಗಿದ್ದಾಗ, ಮನಸ್ಸು ಕೂಡ ಮಳೆಯ ಜೊತೆಯಲ್ಲಿ ಹಿತವಾಗಿ ಹಾಡು ಹಾಡಲು ಸಜ್ಜಾಗಿದೆ. ಹಾಗಾದ್ರೆ ಮಳೆ ಬಂದಾಗ ನೀವು ಕೇಳಬೇಕಾದ ಮತ್ತು ಗುನುಗಬೇಕಾದ ಹಾಡಗಳ ಪಟ್ಟಿ ನೋಡೋಣ ಬನ್ನಿ.
ಕರ್ನಾಟಕದಲ್ಲಿ ಈ ಬಾರಿ ಬೇಸಿಗೆ ಹೊಸ ದಾಖಲೆ ಸೃಷ್ಟಿ ಮಾಡಿತ್ತು, 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಿದ್ದ ಕರ್ನಾಟಕದ ಹೀಟ್ ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಹೀಗೆ ಬಿಸಿಲು ಹೆಚ್ಚಾದ ಕಾರಣಕ್ಕೆ ಜನರು ಮನೆಯಿಂದ ಹೊರಗೆ ಬರುವುದು ಬಿಡಿ, ಮನೆಯಲ್ಲೂ ಕೂರಲು ಆಗದೆ ಒದ್ದಾಡಿದ್ದರು. ಆದರೆ ಇದೀಗ ಮಳೆ ಆರ್ಭಟ ಶುರುವಾಗಿದ್ದು, ಎಲ್ಲೆಲ್ಲೂ ವರುಣ ಅಬ್ಬರಿಸುತ್ತಿದ್ದಾನೆ. ಅಲ್ಲದೆ ವಾತಾವರಣ ಕೂಡ ಕೂಲ್ ಕೂಲ್ ಆಗಿದೆ. ಹಾಗಾದ್ರೆ ಮಳೆ ಬಂದಾಗ ನೀವು ಕೇಳಲೇಬೇಕಾದ ಕನ್ನಡದ ಹಾಡುಗಳು ಯಾವುವು ಗೊತ್ತಾ? ಮುಂದೆ ಓದಿ.

ಸ್ವಾತಿ ಮುತ್ತಿನ ಮಳೆ ಹನಿಯೇ!
ಮಳೆ ಬಂದಾಗ ಎಲ್ಲರೂ ಇಷ್ಟಪಡುವ ಹಾಡು 'ಸ್ವಾತಿ ಮುತ್ತಿನ ಮಳೆ ಹನಿಯೇ!'. ಪಕ್ಕಾ ಮಳೆ ಹಾಡು ಅಂದ್ರೆ ಇದೇ ಸಾಂಗ್ ಅಂತಾನೂ ಕೆಲವರು ಕ್ರೆಡಿಟ್ ಕೊಡ್ತಾರೆ. 1990 ರಲ್ಲಿ ರಿಲೀಸ್ ಆಗಿದ್ದ 'ಬಣ್ಣದ ಗೆಜ್ಜೆ' ಚಿತ್ರದ ಹಾಡು ಇದು. ರವಿಚಂದ್ರನ್ ಮತ್ತು ಅಮಲಾ ಪೌಲ್ ಮಳೆಯಲ್ಲಿ ಹೆಜ್ಜೆ ಹಾಕಿದ ರೀತಿ ನೋಡಿದ್ರೆ ಮನಸ್ಸಿಗೂ ಹಿತವಾಗುತ್ತೆ, ಅದರಲ್ಲೂ ಪ್ರೇಮಿಗಳ ಪಾಲಿಗೆ ಈ ಹಾಡು ಫೇವರಿಟ್. ಹಾಡಿಗೆ ಹಂಸಲೇಖ ಸಂಗೀತ, ಎಸ್.ಪಿ. ಬಾಲಸುಬ್ರಹ್ಮಣ್ಯಂ & ಎಸ್. ಜಾನಕಿ ಅವರ ಧ್ವನಿ ಇದೆ.
ಬಂದ ಬಂದ ಮೇಘರಾಜ ನಮ್ಮ ಊರ..
ರವಿಚಂದ್ರನ್ ಮಳೆ ಹಾಡು ಮತ್ತು ರೊಮ್ಯಾನ್ಸ್ ಸಾಂಗ್ಗಳಲ್ಲಿ ಫಸ್ಟ್ ರ್ಯಾಂಕ್ ಪಡೆಯುತ್ತಾರೆ. ಯಾಕಂದ್ರೆ ಈ ನಮ್ಮ ಕ್ರೇಜಿಸ್ಟಾರ್ ತೆಗೆಯುವ ಸಿನಿಮಾಗಳು ಇಂದಿಗೂ ಎವರ್ ಗ್ರೀನ್. ಹೀಗೆ 'ಸಿಪಾಯಿ' ಸಿನಿಮಾದ 'ಬಂದ ಬಂದ ಮೇಘರಾಜ ನಮ್ಮ ಊರ..' ಹಾಡು ಇಂದಿಗು ಕೂಡ, ಕನ್ನಡದ ಮನಸ್ಸುಗಳಿಗೆ ಹತ್ತಿರವಾಗಿದೆ. ಈ ಹಾಡನ್ನ ಕೂಡ ನಿಮ್ಮ ಪ್ರೇಯಸಿ ಜೊತೆ ಕುಳಿತು ನೋಡಿ ಸವಿಯಿರಿ. ಅಥವಾ ಕಾರಲ್ಲಿ ಕೇಳಲು ಇನ್ನೂ ಅದ್ಭುತ!
ಮುಂಗಾರು ಮಳೆಯೇ...
2007ರ ಸಮಯದಲ್ಲಿ ಕನ್ನಡ ಸಿನಿಮಾ ರಂಗದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೆ ಹಾರಿಸಿ ಮೆರೆಸಿದ ಕೀರ್ತಿ 'ಮುಂಗಾರು ಮಳೆ' ಸಿನಿಮಾಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗದಲ್ಲಿ, ಹೊಸ ಟ್ರೆಂಡ್ ಸೆಟ್ ಮಾಡಿದ 'ಮುಂಗಾರು ಮಳೆ' ಸಿನಿಮಾದ 'ಮುಂಗಾರು ಮಳೆಯೇ..' ಟೈಟಲ್ ಸಾಂಗ್ ಮಳೆಯಲ್ಲಿ ಕೇಳಲು ಅತ್ಯುತ್ತಮ ಆಯ್ಕೆ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹೊಸ ಜೀವನ ಕೊಟ್ಟ ಸಿನಿಮಾ ಇದು. ಪೂಜಾ ಗಾಂಧಿ ಈ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು.

ಮಳೆಯಲಿ.. ಜೊತೆಯಲಿ..
ಇದು ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ. ಈ ಸಿನಿಮಾದ ಟೈಟಲ್ ಸಾಂಗ್ ಮಳೆಯಲಿ.. ಜೊತೆಯಲಿ.. ಹಾಡು ಸಖತ್ ಹಿಟ್ ಆಗಿತ್ತು. ಈ ಹಾಡಿಗೆ ಸಾಹಿತ್ಯ ಬರೆದವರು ಜಯಂತ್ ಕಾಯ್ಕಿಣಿ, ವಿ. ಹರಿಕೃಷ್ಣ ಮ್ಯೂಸಿಕ್ ಹಾಗೂ ಸೋನು ನಿಗಮ್ ಧ್ವನಿ ಇದೆ. ಈ ಹಾಡು ಕೂಡ ಮಿಸ್ ಮಾಡದೆ ಮಳೆಯಲ್ಲಿ ಕೇಳಿ.
ಮುತ್ತು ಮುತ್ತು ನೀರ ಹನಿಯಾ..
90s ಕಿಡ್ಸ್ ಎಂದಿಗೂ ಮರೆಯದ ಹಾಡು ಅಂದ್ರೆ 'ಮುತ್ತು ಮುತ್ತು ನೀರ ಹನಿಯಾ..' ಹಾಡು ಅಂತಾ ಹೇಳಬಹುದು. ಯಾಕಂದ್ರೆ'ನಮ್ಮೂರ ಮಂದಾರ ಹೂವೇ' ಸಿನಿಮಾದ ಹಾಡುಗಳಿಗೆ ಕನ್ನಡಿಗರು ಫಿದಾ ಆಗಿದ್ದರು, ಅದರಲ್ಲಿಯೂ 'ಮುತ್ತು ಮುತ್ತು ನೀರ ಹನಿಯಾ..' ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡು ಕೂಡ ಮಳೆ ಬಂದಾಗ ಕೇಳಲು ಬೆಸ್ಟ್ ಆಯ್ಕೆಯಾಗಿದೆ.
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರಕ್ಕೆ ಕೌಂಟ್ಡೌನ್ ಶುರುವಾಗಿ, ಮುಂದಿನ 48 ಗಂಟೆಯಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರ, ವಿಜಯಪುರ, ರಾಯಚೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ & ಶಿವಮೊಗ್ಗ, ತುಮಕೂರು, ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಮುಂದಿನ 24 ರಿಂದ 48 ಗಂಟೆ ಅವಧಿಯಲ್ಲಿ ರಾಮನಗರ ಚಿಕ್ಕಮಗಳೂರು & ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ಭಾರಿ ಮಳೆ ಬೀಳುತ್ತೆ ಎನ್ನಲಾಗಿದೆ.
ಹಾಗೇ ಮೇ ತಿಂಗಳು ಪೂರ್ತಿ ಮಳೆಯ ಅಬ್ಬರವು ಇದೇ ರೀತಿ ಮುಂದುವರಿಯುತ್ತೆ ಎಂದು ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆ ಸುತ್ತಮುತ್ತ ಕೂಡ ಭರ್ಜರಿ ಮಳೆಯಾಗಲಿದ್ದು, ಬೆಂಗಳೂರು ಗ್ರಾಮಾಂತರ & ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲೂ ಮಳೆಯ ಅಬ್ಬರ ಜೋರಾಗಿ ಇರಲಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.












Click it and Unblock the Notifications