ಬಿಜೆಪಿ ತೊರೆದು 'ಕೈ' ಹಿಡಿದ ಮಾಜಿ ಶಾಸಕ ಎಂ.ವೈ.ಪಾಟೀಲ್
ಬೆಂಗಳೂರು, ಏಪ್ರಿಲ್ 02: ಮಾಲೀಕಯ್ಯ ಗುತ್ತೇದಾರ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡಿದ್ದಕ್ಕೆ ಬೇಸರಗೊಂಡಿದ್ದ ಅಫ್ಜಲ್ಪುರ ಕ್ಷೇತ್ರದ ಬಿಜೆಪಿ ಪ್ರಮುಖ ನಾಯಕ ಎಂ.ವೈ.ಪಾಟೀಲ್ ಅವರು ಪಕ್ಷ ತೊರೆದು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು.
ಅಫ್ಜಲ್ಪುರ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡಿದ್ದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಪಾಟೀಲ್ ಅವರು ಬಹು ಕಾಲದ ರಾಜಕೀಯ ವಿರೋಧಿ ಗುತ್ತೇದಾರ್ ಅವರೊಂದಿಗೆ ಒಂದೇ ಪಕ್ಷದಲ್ಲಿ ಇರಲಾರದೆ ಬಿಜೆಪಿ ತೊರೆದರು.
ಅಫ್ಜಲ್ಪುರದಲ್ಲಿ ನಿಲ್ಲದ ಪಕ್ಷಾಂತರ ಪರ್ವ, ಬಿಜೆಪಿ ತೊರೆದ ಪಾಟೀಲ್
ಎಂ.ವೈ.ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಪಕ್ಷಕ್ಕೆ ಸ್ವಾಗತಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಅವರು ಕೇಳಿಕೊಂಡರು.
ನಿನ್ನೆ ಸಂಜೆ ತಮ್ಮ ಬೆಂಬಲಿಗರ ಸಭೆ ಕರೆದಿದ್ದ ಪಾಟೀಲ್ ಅವರು ಬಿಜೆಪಿ ತೊರೆಯುವುದಾಗಿ ನಿನ್ನೆಯೇ ಹೇಳಿದ್ದರು. ಪಾಟೀಲ್ ಅವರನ್ನು ಸಮಾಧಾನ ಪಡಿಸಲು ಬಿಜೆಪಿ ಪ್ರಯತ್ನಿಸಿದರೂ ಕೂಡ ಅದು ಫಲನೀಡಲಿಲ್ಲ. ಮಾಲೀಕಯ್ಯ ಅವರಿಗೆ ಎಂಎಲ್ಎ ಟಿಕೆಟ್, ಪಾಟೀಲ್ ಅವರಿಗೆ ಎಂಎಲ್ಸಿ ಟಿಕೆಟ್ ನೀಡುವ ಬಗ್ಗೆ ಮಾತನಾಡಲಾಗಿತ್ತಾದರೂ ಪಾಟೀಲ್ ಅವರು ಅದಕ್ಕೆ ಒಪ್ಪಲಿಲ್ಲ.
2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ | ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೊದಲು ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಎಂ.ವೈ.ಪಾಟೀಲ್ ಆ ನಂತರ ಬಿಜೆಪಿ ಸೇರಿದ್ದರು ಯಡಿಯೂರಪ್ಪ ಅವರ ಅನುಯಾಯಿ ಆಗಿದ್ದ ಅವರು ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಎಂ.ವೈ.ಪಾಟೀಲ್ ಅವರು ನಾಲ್ಕು ಬಾರಿ ಮಾಲೀಕಯ್ಯ ಗುತ್ತೇದಾರ್ ಅವರ ವಿರುದ್ಧ ಸೋಲುಂಡಿದ್ದಾರೆ. ಕ್ಷೇತ್ರದಲ್ಲಿ ಇವರಿಬ್ಬರನ್ನು ರಾಜಕೀಯ ಕಡು ವೈರಿಗಳೆಂದೇ ಗುರುತಿಸಲಾಗುತ್ತದೆ.