ಅಂಬ್ಯುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು, ನ.9: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಆಂಬ್ಯುಲೆನ್ಸ್ಗಳ ತಡೆ ರಹಿತ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಲು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅಂಬ್ಯುಲೆನ್ಸ್ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. ಅಲ್ಲದೆ, ಈವರೆಗೆ ಜಿಪಿಎಸ್ ಅಳವಡಿಸದ ಎಷ್ಟು ಅಂಬ್ಯುಲೆನ್ಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ವರದಿಯನ್ನು ನೀಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.
ತಯಾರಿಕೆ ವೇಳೆಯೇ ಪೂರ್ವಭಾವಿಯಾಗಿ ಆಂಬ್ಯುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸುವಂತೆ ರಾಜ್ಯದಲ್ಲಿರುವ ಆಂಬ್ಯುಲೆನ್ಸ್ ತಯಾರಿಕರಿಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಇದೇ ವೇಳೆ ಸರ್ಕಾರಕ್ಕೆ ಸಲಹೆ ನೀಡಿದೆ.
ಭಾರತ್ ಪುನರುತ್ಥಾನ ಟ್ರಸ್ಟ್ ರಾಜ್ಯದಲ್ಲಿರುವ ಎಲ್ಲಾ ಆಂಬ್ಯುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಳೆ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಹಾಗೆಯೇ, ಆಂಬ್ಯುಲೆನ್ಸ್ಗಳ ನೋಂದಣಿ ವೇಳೆಯೇ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡುವ ಸಂಬಂಧ ನಿಗದಿತ ನಿಯಮಗಳಿಗೆ ತಿದ್ದುಪಡಿ ತರಲಾಗಿದೆಯೇ ಅಥವಾ ಈ ಕುರಿತು ಸಕ್ಷಮ ಸಾರಿಗೆ ಪ್ರಾಧಿಕಾರಗಳು ಯಾವುದಾದರೂ ನಿರ್ದಿಷ್ಟ ಸುತ್ತೋಲೆ ಹೊರಡಿಸಿವೆಯೇ? ಎಂಬ ಬಗ್ಗೆ ಮೂರು ವಾರದಲ್ಲಿ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿರುವ ಹೈಕೋರ್ಟ್, ಡಿ.2ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
ಸರ್ಕಾರಿ ವಕೀಲರು, ರಾಜ್ಯದಲ್ಲಿರುವ ಆಂಬುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಸಾರಿಗೆ ಮತ್ತು ಪ್ರಾದೇಶಿಕ ರಸ್ತೆ ಸುರಕ್ಷಿತ ಅಧಿಕಾರಿಗಳಿಗೆ ಮಾಸಿಕ ಪ್ರಗತಿ ವರದಿ ಸಲ್ಲಿಸುವಂತೆ 2020ರ ಮಾ.4ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಹೈಕೋರ್ಟ್ಗೆ ಮಾಹಿತಿ ನೀಡಿದರು.
ಸುತ್ತೋಲೆ ಆಧರಿಸಿ ಕ್ರಮವೇನು?: ಸರ್ಕಾರ ವಾದ ಆಲಿಸಿದ ನ್ಯಾಯಪೀಠ, ಹಾಗಿದ್ದರೆ 2020ರ ಮಾ.4ರಂದು ಹೊರಡಿಸಿರುವ ಸುತ್ತೋಲೆ ಅನುಸಾರ ಇದುವರೆಗೆ ಎಷ್ಟು ವರದಿಗಳನ್ನು ಸಲ್ಲಿಸಲಾಗಿದೆ? ಒಂದೊಮ್ಮೆ ವರದಿ ಸಲ್ಲಿಕೆಯಾಗಿದ್ದರೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆಯೇ ಎಂದು ಕೇಳಿತು.
ದತ್ತಾಂಶ ನಿರ್ವಹಣೆ ಮಾಡಿದ್ದರೆ ಮ್ಯಾನುಯೆಲ್ ಅಥವಾ ಡಿಟಿಟಲ್ ಆಗಿ ಸಂಗ್ರಹಿಸಲಾಗಿದೆಯೇ? ಆ ದತ್ತಾಂಶಗಳನ್ನು ಪರಿಶೀಲಿಸಿದಾಗ ಯಾವುದಾದರೂ ಆಂಬ್ಯುಲೆನ್ಸ್ಗಳು ಜಿಪಿಎಸ್ ಅಳವಡಿಸದಿರುವುದು ಕಂಡು ಬಂದಿದ್ದರೆ, ಅವುಗಳ ವಿರುದ್ಧ ಆಯುಕ್ತರು ಯಾವ ಕ್ರಮ ಕೈಗೊಂಡಿದ್ದಾರೆ? ಖಾಸಗಿ ಅಥವಾ ಸರ್ಕಾರಿ ಆಂಬ್ಯುಲೆನ್ಸ್ ನಿರ್ವಹಣೆದಾರರಿಗೆ ಏನಾದರೂ ಸಂವಹನ ಪತ್ರ ಕಳುಹಿಸಲಾಗಿದೆಯೇ? ಎಂದು ಸರ್ಕಾರ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.