ಸಫಾಯಿ ಕರ್ಮಚಾರಿಗಳಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ವಿತರಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು, ಸೆಪ್ಟೆಂಬರ್ 16: ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಯೋಜನೆಯನ್ನು ಹತ್ತು ಮಹಾನಗರ ಪಾಲಿಕೆಗಳಿಗೆ ವಿಸ್ತರಣೆ ಮಾಡಲಾಗಿದೆ. ಉದ್ದೇಶಿತ ಒಟ್ಟು 600 ಜನರ ಪೈಕಿ ಮೊಲದ ಹಂತದಲ್ಲಿ 400 ಜನರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ ಶುಕ್ರವಾರ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವೇಳೆ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಯೋಜನೆ ವಿಸ್ತರಣೆ ಕುರಿತು ತಿಳಿಸಿದರು.
ಅಲ್ಲದೇ ಸಫಾಯಿ ಕರ್ಮಾಚಾರಿಗಳು ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮ ಆಯೋಜಿಸಿದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಸದಸ್ಯರಿಗೆ ಅವರು ಅಭಿನಂದನೆ ತಿಳಿಸಿದರು.

ಸಫಾಯಿ ಕರ್ಮಚಾರಿಗಳ ಬದುಕು ಸುಂದರಗೊಳಿಸಬೇಕಿದೆ
ಸಫಾಯಿ ಕರ್ಮಚಾರಿಗಳಿಗೂ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ. ಅವರ ಬದುಕಿಗೆ ಶಕ್ತಿ ತುಂಬುವ ಜತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಬದುಕನ್ನು ಸುಂದರಗೊಳಿಸುವ ಅವಶ್ಯಕತೆ ಇದೆ. ಸಫಾಯಿ ಕರ್ಮಾಚಾರಿಗಳು ಮಾಡುತ್ತಿರುವ ಕೆಲಸ ಅತ್ಯಂತ ಪ್ರಮುಖ ಕೆಲಸ. ನಾವು ಸೃಷ್ಟಿ ಮಾಡುವ ಕಸವನ್ನು ಪ್ರತಿನಿತ್ಯ ನಿರಂತರವಾಗಿ ದಣಿವಿಲ್ಲದೆ ಮಾಡುತ್ತಿದ್ದಾರೆ. ಆ ಕಾಯಕವನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮ ಇದಾಗಿದೆ ಎಂದು ಸಫಾಯಿ ಕರ್ಮಚಾರಿಗಳು ದೈನಂದಿನ ಕಾರ್ಯ ಬಗ್ಗೆ ಬೊಮ್ಮಾಯಿ ಶ್ಲಾಘಿಸಿದರು.

ಭಾರತದಲ್ಲಿ ಕಾರಿನಲ್ಲಿ ಓಡಾಡುವ ದಿನ ಬರಲಿವೆ
ವಿದೇಶದಲ್ಲಿ ಸಫಾಯಿ ಕರ್ಮಚಾರಿಗಳು ಕಾರುಗಳಲ್ಲಿ ಓಡಾಡುವುದನ್ನು ಕೇಳಿದ್ದೆವು. ಈಗ ಇದು ನಮ್ಮ ದೇಶದಲ್ಲಿಯೂ ಆಗುತ್ತಿದೆ. ಈಗ ಕರ್ನಾಟಕದಲ್ಲಿ ಸಫಾಯಿ ಕರ್ಮಚಾರಿಗಳು ಸ್ಕೂಟರ್ನಲ್ಲಿ ಓಡಾಡುವಂತಾಗಿದೆ. ಮುಂಬರು ಬರುವ ದಿನಗಳಲ್ಲಿ ಅವರಿಗೆ ಕಾರುಗಳನ್ನು ಒದಗಿಸುವಂತಹ ದಿನಗಳು ಬರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಯಂ ಉದ್ಯೋಗ ಕೈಗೊಳ್ಳಲು ಆದೇಶ
ಸಫಾಯಿ ಕರ್ಮಚಾರಿಗಳ ಸಮಸ್ಯೆ, ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ. ಪ್ರಸ್ತುತ ಈ ವಿತರಣಾ ದ್ವಿಚಕ್ರ ವಾಹನಗಳಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವಂತೆ ಬಾಕ್ಸ್ವೊಂದನ್ನು ಜೋಡಿಸಲು ಸೂಚಿಸಲಾಗಿದೆ. ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಪ್ರತಿ ಕ್ಷೇತ್ರಕ್ಕೆ ಬಾಕ್ಸ್ಉಳ್ಳ 100 ಸ್ಕೂಟರ್ಗಳನ್ನು ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುವಂತೆ ಒದಗಿಸಲು ತೀರ್ಮಾನಿಸಿ ಆದೇಶಿಸಲಾಗಿದೆ ಎಂದರು.

25 ಸಾವಿರ ಎಸ್ಸಿ, ಎಸ್ಟಿ ಜನರಿಗೆ ಅನುಕೂಲ
ಸರ್ಕಾರದ ವಿವಿಧ ಯೋಜನೆಗಳಿಂದ ಸುಮಾರು 25 ಸಾವಿರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನುಕೂಲವಾಗುತ್ತದೆ. ಸರ್ಕಾರ ಹಂತ ಹಂತವಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸಲಿದೆ. ಯುವಕರಿಗೆ, ಯೋಜನೆಯ ಸೌಲಭ್ಯಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಮಹಿಳೆಯರಿಗೂ ಒದಗಿಸಲಾಗುವುದು. ರಾಜ್ಯ ಬಿಜೆಪಿ ಸರ್ಕಾರ ಬಡವರ, ದೀನ ದುರ್ಬಲರ ಹಾಗೂ ದುಡಿಯುವ ವರ್ಗವಾದ ಶ್ರಮಿಕರ ಪರವಾದ ರಾಜ್ಯ ಸರ್ಕಾರ ಇದಾಗಿದೆ. ಸಾಮಾಜಿಕ ನ್ಯಾಯ ಅನ್ನುವುದು ಕೇವಲ ಮಾತಿನಲ್ಲಿ ಮಾತ್ರ ಹೇಳಿದೆ ಅದನ್ನು ಕೃತಿಯಲ್ಲಿ ಮಾಡಿ ತೋರಿಸುತ್ತಿರುವುದು ನಮ್ಮ ಬಿಜೆಪಿ ಸರ್ಕಾರ ಇದು ಎಂದು ಮುಖ್ಯಮಂತ್ರಿಗಳು ವಿವರಿಸಿದರು. ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ, ಸಫಾಯಿ ಕರ್ಮಚಾರಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications