ಅಸೆಂಬ್ಲಿ ಟಿಕೆಟ್ ಬಯಸಿರುವ ಸಂಸದರು, ಎಂಎಲ್ಸಿಗಳ ಪಾಡೇನು?
ಬೆಂಗಳೂರು, ಮಾರ್ಚ್ 12: ಹಾಲಿ ಶಾಸಕರು, ಸಚಿವರ ಜತೆಗೆ ಕಾರ್ಪೊರೇಟರ್ ಗಳು, ಎಂಎಲ್ಸಿಗಳು, ಸಂಸದರು ಕೂಡಾ ಈ ಬಾರಿ ಅಸೆಂಬ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕೆಪಿಸಿಸಿ ಈಗ ಸಾವಿರಾರು ಅರ್ಜಿಗಳನ್ನು ಪರಿಶೀಲಿಸುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಆಂತರಿಕ ಸಮೀಕ್ಷೆ ಮೂಲಕ ಮಾಡಲಾಗುತ್ತದೆ.
ಸಂಸದರ ಪೈಕಿ ಶಿವಮೊಗ್ಗದಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೆಸರು ಪಟ್ಟಿಯಲ್ಲಿ ಮೊದಲಿಗೆ ಬರುತ್ತದೆ. ಬಿಎಸ್ವೈ ಬೆನ್ನಲ್ಲೇ ಬಳ್ಳಾರಿಯ ಸಂಸದ ಬಿ. ಶ್ರೀರಾಮುಲು ಹಾಗೂ ಕಡೂರು-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಅಸೆಂಬ್ಲಿ ಕಣಕ್ಕೆ ಇಳಿಯುವ ಉತ್ಸಾಹ ತೋರಿದ್ದಾರೆ.
ಕೊಡಗು-ಚಿಕ್ಕಮಗಳೂರು ಸಂಸದ ಪ್ರತಾಪ್ ಸಿಂಹ ಅವರು ಅಸೆಂಬ್ಲಿ ಪ್ರವೇಶಿಸಬೇಕು ಎಂಬುದು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ತೀವ್ರ ಒತ್ತಾಯವಾಗಿದೆ. ಆದರೆ, ಈ ಬಗ್ಗೆ ಪ್ರತಾಪ್ ಅವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಲೋಕಸಭೆ ಚುನಾವಣೆ 2019ರ ಮೇಲೆ ಅವರ ಗಮನ ನೆಟ್ಟಿದೆ.

ಬಿಜೆಪಿ ಎಂಎಲ್ಸಿಗಳು
ಬಿಜೆಪಿ ಎಂಎಲ್ಸಿ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಅಸೆಂಬ್ಲಿಗೆ ಪ್ರವೇಶ ಬಯಸಿದ್ದಾರೆ. ಮಾಜಿ ಸಚಿವ ವಿ ಸೋಮಣ್ಣ ಅವರು ಈ ಬಾರಿ ಗೋವಿಂದರಾಜನಗರ ಬದಲಿಗೆ ಚಾಮರಾಜನಗರದ ಹನೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.
ಈ ಪೈಕಿ ಕೆಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ಖಚಿತವಾಗಿದ್ದು, ಶಿವಮೊಗ್ಗದಿಂದ ಸ್ಪರ್ಧಿಸಲಿದ್ದಾರೆ. ಆದರೆ, ವಿ ಸೋಮಣ್ಣ ಅವರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಸಿಗುವುದೋ? ಅಥವಾ ಈ ಬಾರಿ ಟಿಕೆಟ್ ಸಿಗದೇ ಹೋಗುವುದೋ? ಕಾದು ನೋಡಬೇಕಿದೆ. ಈ ನಡುವೆ ತಮ್ಮ ಪುತ್ರ ಅರುಣ್ ರನ್ನು ಅರಸೀಕೆರೆಯಿಂದ ಕಣಕ್ಕಿಳಿಸಲು ಸೋಮಣ್ಣ ತಯಾರಿ ನಡೆಸಿದ್ದಾರೆ.

ಚಿಕ್ಕೋಡಿಯ ಸಂಸದ ಪ್ರಕಾಶ್ ಹುಕ್ಕೇರಿ
ಕಾಂಗ್ರೆಸ್ ಪೈಕಿ ಚಿಕ್ಕೋಡಿಯ ಸಂಸದ ಪ್ರಕಾಶ್ ಹುಕ್ಕೇರಿ ಅವರು ತಮ್ಮ ಪುತ್ರ ಗಣೇಶ್ ಅವರನ್ನು 2019ರ ಲೋಕಸಭೆಗೆ ಕಳಿಸಲು ತಯಾರಿ ನಡೆಸಿದ್ದಾರೆ. ಹೀಗಾಗಿ, ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗುತ್ತಿದ್ದರು. ಆದರೆ, ಈ ಬಾರಿ ಗಣೇಶ್ ಹುಕ್ಕೇರಿ ಅವರಿಗೆ ಅಸೆಂಬ್ಲಿ ಟಿಕೆಟ್ ಸಿಗುವುದು ಖಚಿತವಾಗಿದೆ.

ಕಾಂಗ್ರೆಸ್ಸಿನಿಂದ ಅಸೆಂಬ್ಲಿ ಟಿಕೆಟ್ ಬಯಸಿದವರು
ಮೋಟಮ್ಮ(ಮೂಡಿಗೆರೆ), ಸಚಿವ ಎಂ.ಆರ್ ಸೀತಾರಾಮ್(ಮಲ್ಲೇಶ್ವರ), ಜಿ ರಘು ಆಚಾರ್ (ಚಿತ್ರದುರ್ಗ) ಅಲ್ಲದೆ ವಿ. ಎಸ್ ಉಗ್ರಪ್ಪ(ಮೊಳಕಾಲ್ಮೂರು), ರಿಜ್ವಾನ್ ಅರ್ಷದ್ ಹಾಗೂ ಆರ್ ಬಿ ತಿಮ್ಮಾಪುರ್ ಪಟ್ಟಿಯಲ್ಲಿದ್ದಾರೆ. ಮೋಟಮ್ಮ ಅವರು ಸಿದ್ದರಾಮಯ್ಯ ಸಚಿವ ಸಂಪುಟ ಸೇರಲು ಹಾತೊರೆಯುತ್ತಿದ್ದರು. ಆದರೆ, ಅದೃಷ್ಟ ಕೈಗೂಡಲಿಲ್ಲ. ಅಲ್ಲದೆ ಕೆ.ಸಿ ಕೊಂಡಯ್ಯ ಅವರಿಗೆ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗುವ ಸಾಧಯ್ತೆ ಹೆಚ್ಚಿದೆ.

ಹೆಬ್ಬಾಳದ ಟಿಕೆಟ್ ಆಕಾಂಕ್ಷಿಗಳು
ಹೆಬ್ಬಾಳದ ಟಿಕೆಟ್ ಆಕಾಂಕ್ಷಿಗಳ ಪೈಕಿ ಎಂಎಲ್ಸಿ ಬೈರತಿ ಸುರೇಶ್ ಹಾಗೂ ಸಾರಿಗೆ ಸಚಿವ ಎಚ್ಎಂ ರೇವಣ್ಣ ನಡುವೆ ಪೈಪೋಟಿ ಏರ್ಪಟ್ಟ ಸುದ್ದಿ ಬಂದಿತ್ತು. 2008ರಲ್ಲಿ ಈ ಕ್ಷೇತ್ರದಿಂದ ಸೋಲು ಕಂಡಿರುವ ರೇವಣ್ಣ ಅವರಿಗೆ ಇಲ್ಲಿ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗಿತ್ತು. ಈಗ ಬೈರತಿ ಸುರೇಶ್ ಅವರಿಗೆ ಇಲ್ಲಿ ಟಿಕೆಟ್ ನೀಡುವುದು ಖಚಿತವಾಗಿದ್ದು, ಮಹಾಲಕ್ಷ್ಮಿ ಲೇಔಟಿನಿಂದ ರೇವಣ್ಣ ಸ್ಪರ್ಧೆಗಿಳಿಯಲಿದ್ದಾರೆ.

ರಿಜ್ವಾನ್ ಅರ್ಷದ್
2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸುಲಭವಾಗಿ ಸಿಗುವ ಸಾಧ್ಯತೆಯಿದೆ. 2014ರಲ್ಲಿ ಇದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದರೆ, ಪಕ್ಷ ಬಯಸಿದರೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು. ಆದರೆ, ಪಕ್ಷದ ಹಿರಿಯರ ಅಣತಿಯಂತೆ ಮುಂದಿನ ಲೋಕಸಭೆಗೆ ತಯಾರಿ ನಡೆಸಲು ನಿರ್ಧರಿಸಿರುವ ಸುದ್ದಿ ಬಂದಿದೆ.

ಎಚ್ಚರಿಕೆಯ ನಡೆ ಇಡಲು ಕಾಂಗ್ರೆಸ್ ಸಜ್ಜು
ಕರ್ನಾಟಕ ವಿಧಾನಪರಿಷತ್ತಿನಲ್ಲಿ 75 ಸ್ಥಾನಗಳಿದ್ದು, ಈ ಪೈಕಿ 34 ಸ್ಥಾನಗಳನ್ನು ಆಡಳಿತಾರೂಢ ಕಾಂಗ್ರೆಸ್ ಹೊಂದಿದೆ. 34 ಜನ ಶಾಸಕರ ಪೈಕಿ ಅರ್ಧದಷ್ಟು ಮಂದಿ ಅಸೆಂಬ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಟಿಕೆಟ್ ಸಿಕ್ಕರೆ ಮೇಲ್ಮನೆಯಲ್ಲಿ ಕಾಂಗ್ರೆಸ್ ನ ಬಲ ತಗ್ಗಲಿದೆ. ಈ ಬಗ್ಗೆ ಯೋಚಿಸಿ, ಎಚ್ಚರಿಕೆಯ ನಡೆಯನ್ನು ಇಡಲು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗುತ್ತಿದೆ.












Click it and Unblock the Notifications