ರೋಹಿಣಿ ಸೇರಿ 6 ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿದ ಚುನಾವಣಾ ಆಯೋಗ
ಬೆಂಗಳೂರು, ಜನವರಿ 23: ದಕ್ಷ, ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಶಿಕ್ಷೆಗೆ ಚುನಾವಣಾ ಆಯೋಗದಿಂದ ತಡೆ ಬೀಳುವ ಕಾಲ ಬಂದಿದೆ. ರೋಹಿಣಿ ಸಿಂಧೂರಿ ಸೇರಿದಂತೆ 6 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ನೀಡಿದ್ದ ಆದೇಶಕ್ಕೆ ಮಂಗಳವಾರದಂದು ಚುನಾವಣಾ ಆಯೋಗ ತಡೆ ನೀಡಿದೆ.
ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಬೇಡಿ. ಯಾವುದೇ ಆರೋಪವಿಲ್ಲದಿದ್ದರೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ, ಜೆಡಿಎಸ್ ದಲಿತ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರೋಹಿಣಿ ಸಿಂಧೂರಿ ದಾಸರಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ವ್ಯವಸ್ಥಾಪಕ ನಿರ್ದೇಶಕಿಯಾಗಿ ವರ್ಗಾವಣೆ ಮಾಡಲಾಗಿತ್ತು. ಎಂ.ವಿ.ವೆಂಕಟೇಶ್ ಅವರು ಹಾಸನದ ನೂತನ ಡಿಸಿಯಾಗಿ ನೇಮಕವಾಗಿದ್ದರು.
ಆದರೆ, ಚುನಾವಣೆ ಪ್ರಕ್ರಿಯೆ ಮುಗಿಯುವ ತನಕ ಮೇ 28, 2018ರ ತನಕ ಈ ಏಳು ಐಎಎಸ್ ಅಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ. ಹಾಗೇನಾದರೂ, ಅಧಿಕಾರಿಗಳ ವರ್ಗಾವಣೆ ಮಾಡಬೇಕಾದರೆ ಆಯೋಗದ ಗಮನಕ್ಕೆ ತನ್ನಿ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಮುಖ್ಯ ಕಾರ್ಯದರ್ಶಿ ಸಿ.ಎಸ್ ರತ್ನಪ್ರಭಾ ಅವರಿಗೆ ಆದೇಶ ಪತ್ರ ಕಳಿಸಿದ್ದಾರೆ.
ಇದಲ್ಲದೆ 80ಕ್ಕೂ ಅಧಿಕ ಅಧಿಕಾರಿಗಳನ್ನು ಚುನಾವಣೆ ಕಾರ್ಯ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಕೇಂದ್ರ ಚುನಾವಣಾ ಆಯೋಗದಿಂದ ಸರ್ಕಾರಕ್ಕೆ ಅದೇಶ ಬಂದಿದೆ. ಆದರೂ, ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.

ನ್ಯಾಯ ಸಮ್ಮತ ಚುನಾವಣೆಗಾಗಿ
ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆಗಾಗಿ ಪೊಲೀಸ್ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಹಂತದಿಂದ ಐಜಿಪಿವರೆಗಿನ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವಂತೆ ಕೇಂದ್ರ ಚುನಾವಣೆ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಶುಕ್ರವಾರ ಪತ್ರ ತಲುಪಿದ್ದು, ಚುನಾವಣೆ ಅಧಿಸೂಚನೆ ಹೊರಡಿಸಿದ ವಾರದೊಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಲು ತಿಳಿಸಿದೆ.

ಅನುಸರಿಸಬೇಕಾದ ಮಾರ್ಗಸೂಚಿ ನೀಡಲಾಗಿದೆ
ಮಾರ್ಗಸೂಚಿ ಏನು? : ಎಸ್ಐ ಹುದ್ದೆಯಿಂದ ಐಜಿಪಿವರೆಗೆ ಎಲ್ಲ ಹಂತದ ಹುದ್ದೆಗಳಲ್ಲಿರುವವರೂ ಆಯೋಗದ ನಿಯಮಗಳಂತೆ ವರ್ಗಾವಣೆ ಆಗಲೇಬೇಕಾಗುತ್ತದೆ. ವರ್ಗ ಮಾಡಲು ಅನುಸರಿಸಬೇಕಾದ ಮಾರ್ಗ ಸೂಚಿ ಕೂಡ ಆಯೋಗ ನೀಡಿದೆ.
ಯಾವುದೇ ಸಿಬ್ಬಂದಿ ಒಂದೇ ಸ್ಥಳದಲ್ಲಿ 3 ವರ್ಷಕ್ಕೂ ಅಧಿಕ ಸಮಯ ಇರಬಾರದು. ಹುಟ್ಟೂರಿನ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರಬಾರದು. ಕುಟುಂಬದಲ್ಲಿ ಯಾರೂ ಚುನಾವಣೆಗೆ ಸ್ಪರ್ಧಿಸಿರಬಾರದು.

ವರ್ಗಾವಣೆಯಾಗಬೇಕಾದ ಅಧಿಕಾರಿಗಳ ಪಟ್ಟಿ
ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳೊಂದಿಗೆ ಸಂಬಂಧ ಹೊಂದಿರಬಾರದು. ಹಿಂದಿನ ಚುನಾವಣೆಗಳಲ್ಲಿ ಅಕ್ರಮದ ದೂರು ಹೊಂದಿರಬಾರದು ಎನ್ನುವ ಪ್ರಮುಖ ಸೂಚನೆಗಳನ್ನು ನೀಡಲಾಗಿದೆ.
ಇದನ್ನು ಆಧರಿಸಿ ಮುಂದಿನ ಒಂದು ತಿಂಗಳಲ್ಲಿ ಆಯೋಗವು ವರ್ಗಾವಣೆಯಾಗಬೇಕಾದ ಅಧಿಕಾರಿಗಳ ಪಟ್ಟಿ ತಯಾರಿಸಲಿದೆ. ಈಗಾಗಲೇ ರಾಜ್ಯ ಸರ್ಕಾರವು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಒಂದು ಹಂತದ ವರ್ಗಾವಣೆ ಮಾಡಿದೆ ಎಂಬ ಆರೋಪವಿದೆ. ಹೀಗಾಗಿ ಈ ಬಾರಿ ಈ ವರ್ಗಾವಣೆಯು ದೊಡ್ಡ ಚರ್ಚೆಗೂ ಕಾರಣವಾಗಬಹುದು.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ
ಚುನಾವಣೆಗೆ ಸಕಲ ರೀತಿಯಲ್ಲೂ ಸಜ್ಜುಗೊಳ್ಳುತ್ತಿರುವ ಚುನಾವಣಾ ಆಯೋಗ ಇದೀಗ ಮತದಾರರ ಕರಡು ಪಟ್ಟಿಯನ್ನು ಪರಿಪಕ್ವಗೊಳಿಸಲು 12 ಹಿರಿಯ ಐಎಎಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ನಿಗದಿತ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಈ ಅಧಿಕಾರಿಗಳು ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸಲಾರಂಭಿಸಿದ್ದಾರೆ.
ತಮಗೆ ಕೊಟ್ಟ ಜಿಲ್ಲೆಗಳಲ್ಲಿ ಸಂಚರಿಸಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಮೇಲೆ ನಿಗಾ ವಹಿಸಲಿದ್ದಾರೆ. ಆ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟು ಹೋಗಿರುವುದು, ದೋಷ ಪೂರಿತ ಪಟ್ಟಿ, ಸಾಲುಸಾಲು ಹೆಸರು ಕಾಣೆಯಾಗುವುದು ಸೇರಿದಂತೆ ಮತದಾನ ಸಂದರ್ಭದಲ್ಲಿ ಕೇಳಿಬರುವ ಆಕ್ಷೇಪಣೆಗಳಿಗೆ ಕಡಿವಾಣ ಹಾಕಲು ಆಯೋಗ ಗಂಭೀರ ಪ್ರಯತ್ನ ನಡೆಸಿದೆ ಎಂದು ಜಂಟಿ ಆಯುಕ್ತ ರಮೇಶ್ ಹೇಳಿದ್ದಾರೆ.

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗ ಬ್ರೇಕ್
ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗ ಬ್ರೇಕ್
ಸರಕಾರದ ವರ್ಗಾವಣೆಗೆ ರಾಜ್ಯ ಚುನಾವಣಾ ಆಯೋಗ ಆಕ್ಷೇಪಣೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಪತ್ರ ಮತದಾರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ ಈ ಹಂತದಲ್ಲಿ ವರ್ಗಾವಣೆ ಮಾಡಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ ವರ್ಗಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತನ್ನಿ ಕೂಡಲೇ ವರ್ಗಾವಣೆ ಆದೇಶ ಜಾರಿ ನಿಲ್ಲಿಸಿ ಸರಕಾರಕ್ಕೆ ಸಂಜೀವ್ ಕುಮಾರ್ ಸೂಚನೆ












Click it and Unblock the Notifications