ಪಾರದರ್ಶಕ ಚುನಾವಣೆ ನಡೆಸಲು ಆಯೋಗ ಬದ್ಧ : ಓ.ಪಿ.ರಾವತ್
ಬೆಂಗಳೂರು, ಏಪ್ರಿಲ್ 06 : 'ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಬದ್ಧವಾಗಿದೆ' ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್ ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಪೂರ್ವ ಸಿದ್ಧತೆ ಪರಿಶೀಲನೆಗಾಗಿ ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಮೂರು ದಿನಗಳ ಪರಿಶೀಲನೆ ಬಳಿಕ ಶುಕ್ರವಾರ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?
'ಚುನಾವಣಾ ಆಯೋಗವು ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳಿಗೆ ನಿರ್ಭೀತರಾಗಿ, ನಿಷ್ಪಕ್ಷಪಾತರಾಗಿ, ಯಾವುದೇ ಪೂರ್ವಾಗ್ರಹವಿಲ್ಲದೆ, ಪ್ರಭಾವಗಳಿಗೆ ಒಳಗಾಗದೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ಇದನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
'ಯಾವುದೇ ಅಸಾಂವಿಧಾನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಅಂತಹ ಪ್ರಯತ್ನಗಳೇನಾದರೂ ಕಂಡು ಬಂದಲ್ಲಿ ಆಯೋಗವು ಕಠಿಣ ಕ್ರಮ ಕೈಗೊಳ್ಳಲಿದೆ' ಎಂದು ಹೇಳಿದರು.
ಈ ಬಾರಿ ಚುನಾವಣೆಯಲ್ಲಿ ಏನೇನು ಹೊಸತನವಿರಲಿದೆ?
ಕೇಂದ್ರ ಚುನಾವಣಾ ಆಯೋಗ ಈಗಾಗಲೇ 2018ರ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದೆ. ಮೇ 12ರ ಶನಿವಾರ ಮತದಾನ ನಡೆಯಲಿದ್ದು, ಮೇ 15ರ ಮಂಗಳವಾರ ಮತ ಎಣಿಕೆ ನಡೆಯಲಿದೆ.
ಚುನಾವಣೆಯ ಸಿದ್ಧತೆ ಹೇಗಿದೆ?
ರಾಜ್ಯದಲ್ಲಿ ಚುನಾವಣೆಯ ಸಿದ್ಧತೆ ಹಾಗೂ ಮತದಾರರ ಜಾಗೃತಿ ಕುರಿತು ಓ.ಪಿ.ರಾವತ್ ಮೆಚ್ಚುಗೆ ವ್ಯಕ್ತಪಡಿಸಿದರು. 'ಮದ್ಯ, ಉಡುಗೊರೆಗಳು ಹಾಗೂ ಹಣ ಹಂಚಿಕೆ ಮತ್ತು ಬೂತ್ಮಟ್ಟದ ವರೆಗಿನ ಅಧಿಕಾರಿ, ಸಿಬ್ಬಂದಿ ಸಾಮರ್ಥ್ಯ ಈ ಚುನಾವಣೆಯಲ್ಲಿ ಸವಾಲಿನ ವಿಷಯಗಳು' ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
'ನಗರ ಪ್ರದೇಶಗಳಲ್ಲಿ 400ಕ್ಕೂ ಹೆಚ್ಚು ಮನೆಗಳಿರುವ ವಸತಿ ಸಂಕೀರ್ಣಗಳಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸುವಂತೆ ಕೆಲವು ಸಂಘಟನೆಗಳು ಮನವಿ ಮಾಡಿವೆ. ಈ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.
'ಚುನಾವಣೆ ದಿನಾಂಕ ಸಾಮಾಜಿಕ ಜಾಲತಾಣಗಳಲ್ಲಿ ಮುಂಚಿತವಾಗಿ ಬಹಿರಂಗಗೊಂಡ ಕುರಿತ ತನಿಖೆಯ ವರದಿ ಏ.4 ರಂದು ಸಲ್ಲಿಕೆಯಾಗಿದೆ. ಪ್ರವಾಸದಲ್ಲಿದ್ದೇನೆ. ದೆಹಲಿಗೆ ಹಿಂತಿರುಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ' ಎಂದು ಹೇಳಿದರು.
ವಿವಿಧ ರಾಜಕೀಯ ಪಕ್ಷಗಳ ಸಭೆ
ಚುನಾವಣಾ ಆಯೋಗವು ಕಳೆದ ಮೂರು ದಿನಗಳಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯ ಸಂಗ್ರಹ ಮಾಡಿದೆ.
ಜಿಲ್ಲಾ ಮಟ್ಟದಲ್ಲಿ ಚುನಾವಣಾ ತಯಾರಿ ಕುರಿತು ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಿ ಪರಿಶೀಲನೆ ನಡೆಸಿದೆ. ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ.
ಆದಾಯ ತೆರಿಗೆ, ಅಬಕಾರಿ ಇಲಾಖೆ, ವಾಣಿಜ್ಯ ತೆರಿಗೆ, ಸಾರಿಗೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಹ ಹಣ, ಮದ್ಯ ಹಾಗೂ ಉಡುಗೊರೆಗಳ ಹಂಚಿಕೆ ನಿಯಂತ್ರಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ಮತದಾರರ ಪಟ್ಟಿ
ಫೆಬ್ರವರಿ 28 ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 496.56 ಲಕ್ಷ ಮತದಾರರಿದ್ದು, ಅದರಲ್ಲಿ 251.59 ಲಕ್ಷ (ಶೇ. 50.58) ಪುರುಷರು, 244.76 ಲಕ್ಷ ಮಹಿಳೆಯರು ಹಾಗೂ 455 ತೃತೀಯ ಲಿಂಗಿಗಳು (ಶೇ 0.01) ಇದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಮುಂದುವರಿದಿದ್ದು ಮಾರ್ಚ್ 31ರ ವರೆಗೆ 1.74 ಲಕ್ಷ ಫಾರ್ಮ್ 6, 81 ಸಾವಿರ ಫಾರ್ಮ್ 7, 53 ಸಾವಿರ ಫಾರ್ಮ್ 8 ಮತ್ತು 18 ಸಾವಿರ ಫಾರ್ಮ್ 8 ಎ ಸ್ವೀಕರಿಸಲಾಗಿದ್ದು, ಪರಿಶೀಲನೆಯ ಹಂತದಲ್ಲಿದೆ. 38 ಸಾವಿರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣಾ ವರ್ಷದಲ್ಲಿ ಸ್ವಯಂ ಪ್ರೇರಿತರಾಗಿ ಅಧಿಕಾರಿಗಳು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿಲ್ಲ. ಆದರೆ, ಮತದಾರರಿಗೆ ನೋಟೀಸು ನೀಡದೆ ಯಾವುದೇ ಹೆಸರನ್ನು ತೆಗೆದು ಹಾಕುತ್ತಿಲ್ಲ.
ಮತದಾರರ ಪಟ್ಟಿಯಲ್ಲಿ ಶೇ. 99.47 ರಷ್ಟು ಭಾವಚಿತ್ರ ಸೇರ್ಪಡೆಯಾಗಿದೆ. ಹಾಗೂ ಶೇ 97.46 ರಷ್ಟು ಮತದಾರರು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ.
ರಾಜ್ಯದಲ್ಲಿನ ಮತಗಟ್ಟೆಗಳು
ಚುನಾವಣಾ
ಆಯೋಗವು
ಮತಗಟ್ಟೆಗಳಲ್ಲಿ
ಅಗತ್ಯ
ಮೂಲಸೌಲಭ್ಯ
ಒದಗಿಸಲು
ಕ್ರಮ
ಕೈಗೊಂಡಿದ್ದು,
ವಿಕಲಚೇತನರಿಗೆ
ಮತದಾನ
ಮಾಡಲು
ಅಗತ್ಯ
ವ್ಯವಸ್ಥೆಗಳನ್ನು
ಸಹ
ಕಲ್ಪಿಸಲಾಗುತ್ತಿದೆ.
ರಾಜ್ಯದ
ಎಲ್ಲ
58546
ಮತಗಟ್ಟೆಗಳಲ್ಲಿ
ವಿವಿಪ್ಯಾಟ್
ಯಂತ್ರಗಳನ್ನು
ಬಳಸಲಾಗುತ್ತಿದ್ದು,
ಈ
ಕುರಿತು
ಸಾರ್ವಜನಿಕರಿಗೆ
ಅರಿವು
ಮೂಡಿಸುವ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗುತ್ತಿದೆ.
ಚುನಾವಣಾ ವೆಚ್ಚ ಪರಿಶೀಲನೆ ಹಾಗೂ ನೀತಿ ಸಂಹಿತೆ ಪಾಲನೆಗೆ ಸಂಬಂಧಿಸಿದಂತೆ 1344 ಸಂಚಾರಿ ತಂಡಗಳು ಹಾಗೂ 1255 ಸ್ಟಾಟಿಕ್ ಸರ್ವೇಲೆನ್ಸ್ ತಂಡಗಳನ್ನು ರಚಿಸಲಾಗಿದೆ. ಈ ವರೆಗೆ ಒಟ್ಟು 6.65 ಕೋಟಿ ರೂ. ಮೌಲ್ಯದ ನಗರು, ಮದ್ಯ, ಮಾದಕ ವಸ್ತುಗಳು, ಬೆಲೆಬಾಳುವ ಲೋಹಗಳು ಮತ್ತಿತರ ಉಡುಗೊರೆಗಳನ್ನು ವಶಪಡಿಸಿಕೊಳಳ್ಳಲಾಗಿದೆ.
ಮಾಹಿತಿ ತಂತ್ರಜ್ಞಾನ ಬಳಕೆ
ಚುನಾವಣೆಯಲ್ಲಿ ಕುಂದುಕೊರತೆ ನಿವಾರಣೆಗೆ ಸಮಾಧಾನ್, ಏಕಗವಾಕ್ಷಿ ಪರವಾನಗಿ ವ್ಯವಸ್ಥೆ ಸುವಿಧಾ, ವಾಹನ ನಿರ್ವಹಣಾ ವ್ಯವಸ್ಥೆ ಸುಗಮ್ ಅನ್ನು ಬಳಸಲಾಗುತ್ತಿದೆ. ಸುಮಾರು 6000 ಮತಗಟ್ಟೆಗಳಲ್ಲಿ, ಮತ ಎಣಿಕೆ ಕೇಂದ್ರಗಳಲ್ಲಿ, ಪೊಲೀಸ್ ಚೆಕ್ ಪೋಸ್ಟ್ಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಸೇವಾ ಕೇಂದ್ರವನ್ನು ಚುನಾವಣಾ ಆಯೋಗದಿಂದಲೇ ವ್ಯವಸ್ಥೆ ಮಾಡಲಾಗುವುದು. ವಿಕಲಚೇತನ ಮತದಾರರಿಗೆ ಗಾಲಿಕುರ್ಚಿಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮತಗಟ್ಟೆಯನ್ನು ಗುರುತಿಸಲು ಎಸ್ಎಂಎಸ್ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ.