'ದೊಡ್ದ ಗೌಡ್ರ ಕೊನೆ ಎಲೆಕ್ಷನ್ ವೋಟ್ ಮಾಡಿ'
ಹೊಳೆನರಸೀಪುರ, ಏ.3: 'ದೊಡ್ದ ಗೌಡ್ರ ಕೊನೆ ಎಲೆಕ್ಷನ್ ವೋಟ್ ಮಾಡಿ' ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪುತ್ರ ಎಚ್ ಡಿ ರೇವಣ್ಣ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸ್ವತಃ ದೇವೇಗೌಡರೇ ಇತ್ತೀಚೆಗೆ ಇದು ನನ್ನ ಕೊನೆ ಯುದ್ಧವಲ್ಲ ನಾನು ಇನ್ನೂ ಸಕ್ರಿಯ ರಾಜಕೀಯದಲ್ಲಿರುತ್ತೇನೆ ಎಂದು ಘೋಷಿಸಿದ್ದರು. ಆದರೆ, ರೇವಣ್ಣ ಮಾತ್ರ ಫುಲ್ ಸೆಂಟಿಮೆಂಟಲ್ ಡೈಲಾಗ್ ಗಳನ್ನು ಹೆಣೆದು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು 1962ರಿಂದ ತಾಲೂಕಿನ, ಜಿಲ್ಲೆಯ, ರಾಜ್ಯದ, ದೇಶದ ಸೇವೆ ಮಾಡಲು ಅವಕಾಶ ಹಾಗೂ ಶಕ್ತಿ ಕೊಟ್ಟಿದ್ದು ಜನತೆ. ಈಗ ಗೌಡರಿಗೆ ಇದು ಕೊನೆ ಚುನಾವಣೆ. ನಿಮ್ಮ ಸೇವೆಗಾಗಿ ಗೌಡರಿಗೆ ಈ ಬಾರಿ ಕೊನೆ ಅವಕಾಶ ನೀಡಿ ಎಂದು ಶಾಸಕ, ಮಾಜಿ ಸಚಿವ ಎಚ್ ಡಿ ರೇವಣ್ಣ ಮನವಿ ಮಾಡಿಕೊಂಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆಗ್ರಾಮದ ಚನ್ನಿಗರಾಯ ಸ್ವಾಮಿ ದೇಗುಲದಲ್ಲಿ ಚುನಾವಣಾ ಪ್ರಚಾರದ ಕರಪತ್ರಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ನಂತರ ದೇಗುಲ ಸಮೀಪ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರೇವಣ್ಣ ಅವರು ನನ್ನ ಮೇಲೆ ಕೋಪ, ಬೇಸರ ಇದ್ದರೆ ಅದಕ್ಕಾಗಿ ದೇವೇಗೌಡರಿಗೆ ಶೀಕ್ಷೆ ನೀಡಬೇಡಿ ಎಂದರು.

ಗೌಡರ ಸೊಸೆ ಭವಾನಿ ರೇವಣ್ಣ ಮಾತನಾಡಿ, ತಾಲೂಕಿನ ಮತದಾರರೆಲ್ಲರೂ ಗೌಡರ ಕುಟುಂಬದವರನ್ನು ನಿಮ್ಮ ಮನೆಯವರಂತೆ ಕಂಡಿದ್ದೀರಿ. ಮುಂದೆಯೂ ನಮ್ಮನ್ನು ಹಾಗೆ ನೋಡಿಕೊಳ್ಳಿ. ಈ ಬಾರಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಗೌಡರು ಇಲ್ಲಿಗೆ ಬರಲಾಗುತ್ತಿಲ್ಲ. ಜನರು ನೀವೆ ಗೌಡರ ಪರ ಪ್ರಚಾರ ನಡೆಸಿ, ಗೌಡರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕೇಳಿಕೊಂಡರು.
ಗೌಡರ ಸಹಾಯದಿಂದ ನಾನು ಮತ್ತು ಕುಮಾರಸ್ವಾಮಿ ಹಿಂದಿನ 50 ವರ್ಷದಲ್ಲಿ ಆಗದಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಮಾಡಿದ್ದೇವೆ. ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ನಿಶ್ಚಿತ. ದೇವೇಗೌಡರು ಮತ್ತೊಮ್ಮೆ ಪ್ರಧಾನಿ ಆಗಬಹುದು. ಆದ್ದರಿಂದ ನಿಮ್ಮ ಜಿಲ್ಲೆಯ ಮಣ್ಣಿನ ಮಗ ದೇವೇಗೌಡರನ್ನು ಗೆಲ್ಲಿಸಿ ಎಂದು ಕೋರಿದರು.












Click it and Unblock the Notifications