ಕೊರೊನಾ ಸೋಂಕು: ಕರ್ನಾಟಕದಲ್ಲಿ ಶಾಲೆಗಳ ಬಂದ್ ಬಗ್ಗೆ ಶಿಕ್ಷಣ ಸಚಿವರು ಹೇಳಿದ್ದೇನು?
ಬೆಂಗಳೂರು, ಜ. 04: ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ತೀವ್ರ ಗತಿಯಲ್ಲಿ ಏರುತ್ತಿವೆ. ಇದರ ನಡುವೆ ಓಮಿಕ್ರಾನ್ ರೂಪಾಂತರಿ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ 77 ಕಾಣಿಸಿಕೊಂಡಿದ್ದು, ಶಾಲೆಗಳು ಬಂದ್ ಆಗುತ್ತವೆಯೇ? ಆಥವಾ ಶಾಲೆಗಳು ಮುಂದುವರೆಯಲಿವೆಯಾ? ಎಂಬುದರ ಬಗ್ಗೆ ರಾಜ್ಯದಲ್ಲಿ ಗೊಂದಲ ಏರ್ಪಟ್ಟಿದೆ. ಈ ಎಲ್ಲಾ ಗೊಂದಲಗಳಿಗೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತೆರೆ ಎಳೆದಿದ್ದಾರೆ. ಒನ್ಇಂಡಿಯಾ ಕನ್ನಡಕ್ಕೆ ಅವರು ನೀಡಿದ ಸ್ಪಷ್ಟನೆ ಇಲ್ಲಿದೆ.

ಸಿಎಂ ಜತೆ ಚರ್ಚಿಸಿ ಇಂದು ನಿರ್ಧಾರ
ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಪಾಸಿಟಿವಿಟಿ ರೇಟ್ ಜಾಸ್ತಿ ಆಗಿದೆ. ಆದರೆ, ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿಲ್ಲ. ಇಲ್ಲಿಯವರೆಗೂ ಶಾಲೆಗಳಲ್ಲಿ ಕೊರೊನಾ ಸೋಂಕು ಹರಡಿಲ್ಲ. ಜ. 03 ರಂದು ಇಡೀ ರಾಜ್ಯದಲ್ಲಿ 1290 ಕೇಸು ಕಾಣಿಸಿಕೊಂಡ್ರೂ, ಶಾಲೆಗಳಲ್ಲಿ ಕೇವಲ 03 ಕೊರೊನಾ ಪಾಸಿಟೀವ್ ಕೇಸು ಕಾಣಿಸಿಕೊಂಡಿದೆ. ಇನ್ನು ಕಳೆದ ಹದಿನೈದು ದಿನದಲ್ಲಿ 193 ಕೊರೊನಾ ಪಾಸಿಟೀವ್ ಕೇಸು ಕಾಣಿಸಿಕೊಂಡಿದ್ದರೂ ಯಾವೊಂದು ಮಗುವಿಗೂ ತೊಂದರೆ ಆಗಿಲ್ಲ. ಬೇರೊಬ್ಬರಿಗೂ ಹರಡಿಲ್ಲ. ಇದು ರಾಜ್ಯದಲ್ಲಿ ಕೊರೊನಾ ಸೋಂಕು ಹರಡಿರುವ ಬಗ್ಗೆ ಇರುವ ವಸ್ತುಸ್ಥಿತಿ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ತಾಲೂಕು ವಾರು ಕ್ರಮಕ್ಕೆ ಸೂಚನೆ
ರಾಜ್ಯದಲ್ಲಿ ಪಾಸಿಟೀವಿಟಿ ದರ ಹೆಚ್ಚಾಗುತ್ತಿದೆ. ಅದರಲ್ಲಿ ಬೆಂಗಳೂರು ಹೊರತು ಪಡಿಸಿದರೆ ಕೇರಳ ಗಡಿ ಭಾಗದ ಎರಡು ತಾಲೂಕಿನಲ್ಲಿ ಹೆಚ್ಚು ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಕೊರೊನಾ ಸೋಂಕು ಪ್ರಕರಣ ಜಾಸ್ತಿಯಾದಲ್ಲಿ ಆ ತಾಲೂಕು ಮಟ್ಟದಲ್ಲಿ ಶಾಲೆಗಳನ್ನು ಬಂದ್ ಮಾಡುವ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯಕ್ಕೆ ಕೇರಳ ಗಡಿಗೆ ಹೊಂದಿಕೊಂಡಿದ್ದ ಎರಡು ತಾಲೂಕಿನಲ್ಲಿ ತಾತ್ಕಾಲಿಕವಾಗಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಕೊರೊನಾ ಪಾಸಿಟೀವಿಟಿ ರೇಟ್ ನೋಡಿಕೊಂಡು ಜಿಲ್ಲಾ ಮಟ್ಟದಲ್ಲಿ ಬೇಡ ತಾಲೂಕು ಮಟ್ಟದಲ್ಲಿ ಕ್ರಮ ಜರುಗಿಸುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕುವಾರು ಶಾಲೆಗಳಲ್ಲಿ ಕೊರೊನಾ ಪಾಸಿಟೀವಿಟಿ ನೋಡಿಕೊಂಡು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಶಾಲೆಗಳು ಬಂದ್ ಆಗ್ತವೆಯೇ?
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಶಾಲೆಗಳು ಬಂದ್ ಆಗಲಿವೆಯಾ ಎಂಬ ಗೊಂದಲ ಏರ್ಪಟ್ಟಿದೆ. ಈ ಕುರಿತು ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವರು, ಶಾಲೆಗಳಲ್ಲಿ ಈವರೆಗೂ ಹೆಚ್ಚು ಪ್ರಕರಣ ಕಂಡು ಬಂದಿಲ್ಲ. ಈ ಹಿಂದೆ ವಸತಿ ಶಾಲೆಗಳಲ್ಲಿ ಕಂಡ ಬಂದಿತ್ತು. ಸದ್ಯಕ್ಕೆ ಇಲ್ಲ. ಈ ಬಗ್ಗೆ ತಾಂತ್ರಿಕ ಸಮಿತಿಗೆ ವರದಿ ನೀಡಲು ಸೂಚಿಸಿದ್ದೇನೆ. ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಾಸ್ಕ್ ಫೋರ್ಸ್ ಸಭೆ ಕರೆದಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದರೆ ಎಲ್ಲಾ ಶಾಲೆಗಳನ್ನು ಅನಿವಾರ್ಯ ವಾಗಿ ಬಂದ್ ಮಾಡಿ ಆನ್ಲೈನ್ ಕಲಿಕೆಗೆ ಒತ್ತು ಕೊಡಬೇಕಾಗುತ್ತದೆ. ಇಲ್ಲವೇ ಲಾಕ್ ಡೌನ್ ಘೋಷಣೆ ಮಾಡದಿದ್ದರೆ, ಆಯಾ ತಾಲೂಕು ಮಟ್ಟದಲ್ಲಿ ಪರಿಸ್ಥಿತಿ ನೋಡಿಕೊಂಡು ಶಾಲೆಗಳನ್ನು ಕ್ಲೋಸ್ ಮಾಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲು ಚಿಂತನೆ ನಡೆಸಿದ್ದೇವೆ ಎಂದು ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದರು.

ಬೆಂಗಳೂರಲ್ಲಿ ಕೊರೊನಾ ಸೋಂಕು ಜಾಸ್ತಿ
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಜಾಸ್ತಿಯಾಗುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಟಾಸ್ಕ್ ಫೋರ್ಸ್ ಸಭೆ ಮುಗಿಸಿದ ಬಳಿಕ ಅವರೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುತ್ತದೆ. ಎಲ್ಲೋ ಒಂದು ಕಡೆ ಕೊರೊನಾ ಕಾಣಿಸಿಕೊಂಡು ಇಡೀ ರಾಜ್ಯದೆಲ್ಲೆಡೆ ಶಾಲೆಗಳನ್ನು ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಮಕ್ಕಳ ಕಲಿಕೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಈಗಾಗಲೇ ಕೊರೊನಾ ಲಾಕ್ ಡೌನ್ನಿಂದ ಮಕ್ಕಳ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತೇವೆ ಎಂದು ನಾಗೇಶ್ ತಿಳಿಸಿದ್ದಾರೆ.












Click it and Unblock the Notifications