ಶಿಕ್ಷಣದಲ್ಲಿ ಭಾರತೀಯತೆ 'ಕೇಸರೀಕರಣ' ಅಲ್ಲ : ವಜುಬಾಯಿ
ಪುತ್ತೂರು, ಜ. 8: ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಅಳವಡಿಸುವುದನ್ನು ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಸಮರ್ಥಿಸಿಕೊಂಡಿದ್ದಾರೆ. ಶಿಕ್ಷಣದಲ್ಲಿ ಭಾರತೀಯತೆ ಪಾಲಿಸಿದರೆ ಅದು ಕೇಸರೀಕರಣವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಶಿಕ್ಷಣ ಎಂದರೆ ಎಲ್ಲ ಧರ್ಮಗಳ ಜನರೂ ಸುಖಿಗಳಾಗಿ ಬದುಕಬೇಕು ಎಂದು ಹಾರೈಸುವಂತದ್ದು. ಆದ್ದರಿಂದ ಈ ಪದ್ಧತಿ ಅಳವಡಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಬುದ್ಧನೂ ಹೇಳಿದ್ದ : ಮಕ್ಕಳಿಗೆ ಅಕ್ಷರ ಕಲಿಕೆಯ ಜೊತೆಗೆ ಸಂಸ್ಕಾರವನ್ನೂ ನೀಡಬೇಕು. ಆಗಲೇ ಅದಕ್ಕೆ ವಿದ್ಯೆ ಎಂದು ಕರೆಯುತ್ತಾರೆ. ಬುದ್ಧ ಕೂಡ ಇದನ್ನೇ ಹೇಳಿದ್ದ ಎಂದು ವಜುಭಾಯಿ ವಾಲಾ ಸಮರ್ಥಿಸಿಕೊಂಡರು.
'ನಮ್ಮ ದೇಶದಲ್ಲಿ ಸಂಸ್ಕಾರ ಇದೆ. ಅದನ್ನು ಮಕ್ಕಳಿಗೆ ಉಣಬಡಿಸಬೇಕು. ವಿದೇಶಗಳಲ್ಲಿ ಸಂಪತ್ತು ಇರಬಹುದು, ಆದರೆ ಸಂಸ್ಕಾರ ಇಲ್ಲ. ಯಾವತ್ತೂ ಸಂಪತ್ತಿಗಿಂತ ಸಂಸ್ಕಾರವೇ ಶ್ರೇಷ್ಠ. ಶಿಕ್ಷಣದಲ್ಲಿ ಸಂಪತ್ತಿನ ಪ್ರತಿಪಾದನೆ ನಿಲ್ಲಿಸಬೇಕು. ಸಂಸ್ಕಾರದ ಪರಿಚಯ ಆರಂಭದಿಂದ ಕೊನೆ ತನಕ ವಿದ್ಯಾರ್ಥಿಗೆ ಸಿಗಬೇಕು' ಎಂದು ಹೇಳಿದರು.
ಇಸ್ರೇಲ್ ತರುಣಿಯರು ಮಾದರಿಯಾಗಲಿ?: ಭಾರತ ಪುರುಷ ಪ್ರಧಾನ ರಾಷ್ಟ್ರವಲ್ಲ, ಮುಂದೆಯೂ ಆಗಲ್ಲ. ಅಷ್ಟಕ್ಕೂ ತಾಯಿಯಿಲ್ಲದೇ ಪುರುಷರು ಇರುವುದಕ್ಕೆ ಹೇಗೆ ಸಾಧ್ಯ? ಮಾತೃ ಶಕ್ತಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸ್ತ್ರೀಯರು ಧೈರ್ಯವಂತರಾಗಬೇಕು. ಇದಕ್ಕೆ ಇಸ್ರೇಲ್ ತರುಣಿಯರನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಹೆಂಡತಿ ಗಾಳಿಯಿದ್ದಂತೆ : ದೊಡ್ಡ ಮನುಷ್ಯರ ಬಗ್ಗೆ ಹಾಡಿಹೊಗಳುತ್ತಿರಬೇಡಿ. ಸೈಕಲ್ನಿಂದ 60 ಚಕ್ರಗಳ ದೊಡ್ಡ ಲಾರಿಯ ಚಕ್ರಕ್ಕೂ ಗಾಳಿ ಹೊಡೆಯದಿದ್ದರೆ ಓಡುವುದಿಲ್ಲ. ದೊಡ್ಡವರು ಹೇಗೆ ಅಂತ ನಿಜವಾಗಿಯೂ ಗೊತ್ತಾಗಬೇಕಾದರೆ ಅವರ ಹೆಂಡತಿಯನ್ನು ಕೇಳಬೇಕು ಎಂದು ರಾಜ್ಯಪಾಲರು ತಮ್ಮನ್ನು ಪರಿಚಯಿಸುವ ವೇಳೆ ಕೇಳಿಬಂದ ಹೊಗಳಿಕೆಗೆ ಪ್ರತಿಕ್ರಿಯಿಸಿದರು.
ವಿಶೇಷ ಅಂಚೆ ಲಕೋಟೆ ಬಿಡುಗಡೆ : ಸುವರ್ಣ ಮಹೋತ್ಸವ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಲಕೋಟೆ ಕುರಿತು ಕರ್ನಾಟಕ ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಂ.ಎಸ್. ರಾಮಾನುಜನ್ ಮಾಹಿತಿ ನೀಡಿದರು. ಸುವರ್ಣ ವಿವೇಕ ಗ್ರಂಥವನ್ನು ಸಂಸದ ನಳಿನ್ ಕುಮಾರ್ ಕಟೀಲು ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಉರಿಮಜಲು ಕೆ. ರಾಮ ಭಟ್, ಶಾಸಕಿ ಶಕುಂತಲಾ ಟಿ. ಶೆಟ್ಟಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ಪ್ರೊ. ಎ.ವಿ. ನಾರಾಯಣ ವಂದಿಸಿದರು. ಪ್ರಾಧ್ಯಾಪಕ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಕಾರ್ಯಕ್ರಮ ನಿರ್ವಹಿಸಿದರು.