ಏನಿದು ಹೊಸ ಗುಲ್ಲು: ಅನರ್ಹ ಶಾಸಕರು ಮುಂಬೈ ಹೊಟೇಲ್ ನಲ್ಲಿ ಹೆಣ್ಣು, ಹೆಂಡದ ಹಿಂದೆ ಬಿದ್ದಿದ್ದರೇ?
ಉಪಚುನಾವಣೆಯ ಪ್ರಚಾರದ ವೇಳೆ, ರಾಜಕಾರಣಿಗಳ ಆರೋಪ, ಪ್ರತ್ಯಾರೋಪದ ಭರಾಟೆ ಕೀಳು ಮಟ್ಟಕ್ಕೆ ಇಳಿಯುತ್ತಿದೆ. ರಾಜಕೀಯದ ಚೌಕಟ್ಟನ್ನು ಮೀರಿ, ವೈಯಕ್ತಿಕವಾಗಿ ಟೀಕೆ ಮಾಡಲಾಗುತ್ತಿದೆ.
ಮೂರೂ ಪಕ್ಷಗಳು ಇದರಲ್ಲಿ ಹಿಂದೆ ಬಿದ್ದಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು, ಉತ್ತರ ಕರ್ನಾಟಕದ ಪ್ರವಾಹದ ವೇಳೆ, ಅನರ್ಹ ಶಾಸಕರು, ಮುಂಬೈನಲ್ಲಿ ತಂಗಿದ್ದ ವಿಚಾರವನ್ನು ಮುಖ್ಯವಾಗಿ ಪ್ರಸ್ತಾವಿಸುತ್ತಿದ್ದಾರೆ.
"ಪ್ರವಾಹ ಬಂದಾಗ ನಾನು ಗೋಕಾಕ್ಗೆ ಬಂದಿದ್ದೆ. ಹಳೆ ಗೋಕಾಕ್ ಪಟ್ಟಣ ಸಂಪೂರ್ಣ ಕೊಚ್ಚಿ ಹೋಗಿತ್ತು. ಜನ ಬೀದಿಗಳಲ್ಲಿ ವಾಸಿಸುತ್ತಿದ್ದರು. ಇಂತಹ ಸಮಯದಲ್ಲಿ ಕ್ಷೇತ್ರದ ಪ್ರತಿನಿಧಿ ನಿಮ್ಮ ಜೊತೆಗಿರಲಿಲ್ಲ" ಎಂದು ಸಿದ್ದರಾಮಯ್ಯ, ವಾಕ್ ಪ್ರಹಾರ ನಡೆಸುತ್ತಿದ್ದಾರೆ.
ಈ ನಡುವೆ, ಯುವ ಕಾಂಗ್ರೆಸ್ ಘಟಕ ಮಾಡಿರುವ ಟ್ವೀಟ್ ಒಂದು ಹೊಸ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಐವೈಸಿ (ಇಂಡಿಯನ್ ಯೂಥ್ ಕಾಂಗ್ರೆಸ್) ಮಾಡಿರುವ ಟ್ವೀಟ್ ಅನ್ನು ಕೆಪಿಸಿಸಿ ಕೂಡಾ ರಿಟ್ವೀಟ್ ಮಾಡಿದೆ. ಹನಿ ಟ್ರ್ಯಾಪ್ ವಿಚಾರ, ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುತ್ತಿರುವ ಈ ವೇಳೆ, ಈ ಟ್ವೀಟಿನ ಮರ್ಮವೇನು ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ

ಸಿದ್ದರಾಮಯ್ಯ ವಾಕ್ ಪ್ರಹಾರ
"ಗೋಕಾಕ್ ಪಟ್ಟಣ ನೀರಿನಲ್ಲಿ ಮುಳುಗಿ ಹೋಗಿತ್ತು, ಜನ ಬದುಕಿಗಾಗಿ ನೆಲೆ ಹುಡುಕುತ್ತಿದ್ದರೆ ರಮೇಶ್ ಜಾರಕಿಹೊಳಿ ಮುಂಬೈನ ಪಂಚತಾರಾ ಹೋಟೆಲ್ನ ಎಸಿ ರೂಮ್ನಲ್ಲಿ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇಂಥ ಶಾಸಕ ಮತ್ತೆ ನಮಗೆ ಬೇಕಾ ಎಂದು ಜನತೆ ಯೋಚನೆ ಮಾಡಿ ಮತ ಚಲಾಯಿಸಬೇಕು" ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.

ಐಷಾರಾಮಿ ಹೋಟೆಲ್ ನಲ್ಲಿ ಹೆಣ್ಣು ಹೆಂಡ ಎಂದುಕೊಂಡು ಬಿದ್ದಿದ್ದರು
ಯುವ ಕಾಂಗ್ರೆಸ್ ಘಟಕ ಮಾಡಿರುವ ಟ್ವೀಟ್ ಹೀಗಿದೆ, "ನೆರೆ ಹಾವಳಿಯಿಂದ ಇಡೀ ಉತ್ತರ ಕರ್ನಾಟಕವೇ ಕಣ್ಣೀರಿನ ಕಡಲಲ್ಲಿ ಮುಳುಗಿದ್ದಾಗ, ಅನರ್ಹ ಶಾಸಕರು ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ಹೆಣ್ಣು ಹೆಂಡ ಎಂದುಕೊಂಡು ಬಿದ್ದಿದ್ದರು".

ಹೃದಯ ಹೀನರು ಜನಸೇವೆಗೆ ಅರ್ಹರೇ?
ಮುಂದುವರಿಯುತ್ತಾ, "ನೆರೆ ಪರಿಸ್ಥಿತಿ ಇದ್ದರೂ ಅವರ ಮನಸ್ಸು ಕರಗಿ ಜನರ ಕಷ್ಟಗಳಿಗೆ ಸ್ಪಂದಿಸಲು ಅವರು ಬಾರಲಿಲ್ಲ. ಇಂತಹ ಹೃದಯ ಹೀನರು ಜನಸೇವೆಗೆ ಅರ್ಹರೇ? ತಮ್ಮ ದುರಾಸೆ, ಅಧಿಕಾರಕ್ಕಾಗಿ ಜನರ ತೀರ್ಪಿಗೆ ದ್ರೋಹ ಬಗೆದವರು ಶಾಸಕರಾಗಲು ಅರ್ಹರೆ ಎಂದು ತೀರ್ಮಾನಿಸಬೇಕಿದೆ" ಇದು ಯುವ ಕಾಂಗ್ರೆಸ್ ಘಟಕ ಮಾಡಿರುವ ಟ್ವೀಟ್.

ಸಖತ್ ಕಾಲೆಳೆಯುತ್ತಿರುವ ಕೆಪಿಸಿಸಿ
ಇಲ್ಲಿ "ಅನರ್ಹ ಶಾಸಕರು ಹೆಣ್ಣು ಹೆಂಡ ಎಂದು ಕೊಂಡಿದ್ದರು" ಎನ್ನುವ ಯುವ ಘಟಕದ ಪದಪ್ರಯೋಗ, ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ. "ಅನರ್ಹರು ಹೋದಲ್ಲೆಲ್ಲ ಜನ ಏಕೆ ಛೀಮಾರಿ ಹಾಕುತ್ತಿದ್ದಾರೆ?
ಮರ್ಯಾದೆ ಏಕೆ ತೆಗೆಯುತ್ತಿದ್ದಾರೆ" ಎಂದು ಯುವ ಘಟಕದ ಟ್ವೀಟ್ ಅನ್ನು ರಿಟ್ವೀಟ್ ಮಾಡಿ, ಕೆಪಿಸಿಸಿ, ಈ ರೀತಿ ಬರೆದುಕೊಂಡಿದೆ.

ಸ್ವಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಫ್ಲೆಕ್ಸ್
"ಅನರ್ಹ ಶಾಸಕರಿಗೆ ಹಳ್ಳಿಗಳಲ್ಲಿ ಹೋಗಲು ಏಕೆ ಬಿಡುತ್ತಿಲ್ಲ? ಅಥಣಿಯ ಸ್ವಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಫ್ಲೆಕ್ಸ್ ಏಕೆ ಹಾಕಿದ್ದಾರೆ. ಪ್ರಚಾರಕ್ಕೆ ಬೆಂಗಾವಲಿಗೆ ಜನರನ್ನ ಕರೆದುಕೊಂಡು ಹೋಗುವ ಸ್ಥಿತಿ ಯಾಕಿದೆ" ಹೀಗೆ.. ಕೆಪಿಸಿಸಿ, ಸಾಲುಸಾಲು ಪ್ರಶ್ನೆಗಳನ್ನು ಅನರ್ಹ ಶಾಸಕರಿಗೆ ಕೇಳಿದೆ.












Click it and Unblock the Notifications