ಹಾಸನದಲ್ಲಿ ಪತ್ನಿಯನ್ನು ಬೆಂಕಿಹಚ್ಚಿ ಹತ್ಯೆಗೈದ ಕುಡುಕ
ಹಾಸನ, ಜೂನ್ 27 : ಪತಿಯೇ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಬೀರನಹಳ್ಳಿ ಕೆರೆ(ರಾಘವೇಂದ್ರ ಕಾಲೋನಿ) ನಿವಾಸಿ, ಕಾರು ಚಾಲಕನಾಗಿದ್ದ ಜಗದೀಶ್ ಎಂಬಾತನೇ ಪತ್ನಿಗೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದ ಆರೋಪಿ. ಈತ ಸುಮಾರು 7 ವರ್ಷಗಳ ಹಿಂದೆ ಇಂದ್ರ(24) ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. [ಹುಡುಗಿಗಾಗಿ ಹಾಸನ ಬಸ್ ನಿಲ್ದಾಣದಲ್ಲಿ ಮಾರಾಮಾರಿ]
ಈ ನಡುವೆ ಸಂಸಾರ ದೊಡ್ಡದಾಗಿದ್ದರಿಂದ ಜಗದೀಶ್ ಮಾಡುತ್ತಿದ್ದ ಸಂಪಾದನೆ ಸಾಲುತ್ತಿರಲಿಲ್ಲ. ಜತೆಗೆ ಪತಿ ಜಗದೀಶ್ ಮದ್ಯ ವ್ಯಸನಿಯಾಗಿದ್ದರಿಂದ ಮಾಡಿದ ಸಂಪಾದನೆಯನ್ನೆಲ್ಲ ಹೆಂಡಕ್ಕೆ ಸುರಿಯುತ್ತಿದ್ದರಿಂದ ಪತ್ನಿ ಬೇರೆ ಅನ್ಯಮಾರ್ಗವಿಲ್ಲದೆ ತನ್ನ ಇಬ್ಬರು ಮಕ್ಕಳನ್ನು ಆಡುವಳ್ಳಿಯ ತವರಿನಲ್ಲಿ ಬಿಟ್ಟು ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಮಕ್ಕಳು ವಾಪಸ್ಸು ಕರೆತಂದು ಶಾಲೆಗೆ ಸೇರಿಸುವಂತೆ ಹೆಂಡತಿಗೆ ಹಿಂಸೆ ನೀಡುತ್ತಿದ್ದನು. ಅಲ್ಲದೆ ಪ್ರತಿದಿನ ಹೆಂಡ ಕುಡಿದು ಬಂದು ಜಗಳ ತೆಗೆಯುತ್ತಿದ್ದನು.
ಕೆಲ ದಿನಗಳ ಹಿಂದೆ ರಾತ್ರಿ 12 ಗಂಟೆ ಸಮಯದಲ್ಲಿ ಆಕೆ ಮಲಗಿದ್ದ ಸಂದರ್ಭ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ಅಲ್ಲದೆ ಬಾಗಿಲು ಹಾಕಿಕೊಂಡು ನಾಪತ್ತೆಯಾಗಿದ್ದನು. ಆಕೆಯ ಕಿರುಚಾಟ ಕೇಳಿದ ಅಕ್ಕಪಕ್ಕದವರು ಬಂದು ಬೆಂಕಿ ನಂದಿಸಿ ತಕ್ಷಣ ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅಸುನೀಗಿದಳು. [ತನ್ನ ಹೆಂಡತಿ ವಿಚಾರದಲ್ಲಿ ಎಚ್ ಡಿ ರೇವಣ್ಣ ಹಠ ಮಾಡಬಾರದು]