ಸ್ಪೋಟಕ ರಹಸ್ಯಕ್ಕೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಕುಮಾರಸ್ವಾಮಿ ವಿಫಲ
ಸಮ್ಮಿಶ್ರ ಸರಕಾರದ ಭಾಗವಾಗಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದ ವೇಳೆ ರಾಜ್ಯದಲ್ಲಿ ವ್ಯಾಪಕವಾಗಿ ತಳವೂರಿದ್ದ ಡ್ರಗ್ಸ್ ದಂಧೆಯ ಬಗೆಗಿನ ಮಾಹಿತಿಯನ್ನು ಹೊರಗೆಳೆದಿದ್ದರು. ಆದರೆ, ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಎಚ್ಡಿಕೆ ವಿಫಲರಾಗಿದ್ದರು ಎನ್ನುವುದು ಕೂಡಾ ಅಷ್ಟೇ ಸತ್ಯ.
ಸೆಪ್ಟಂಬರ್ 2018ರಲ್ಲಿ ಕುಮಾರಸ್ವಾಮಿ, "ತನ್ನ ಸರಕಾರವನ್ನು ಉರುಳಿಸಲು ಮಾಫಿಯಾ ಜಗತ್ತಿನ ದುಡ್ಡು ಚಲಾವಣೆಯಲ್ಲಿದೆ. ಬಟ್, ನನ್ನ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ, ಬಿಜೆಪಿಯ ಪ್ರಯತ್ನ ಕೈಗೂಡುವುದಿಲ್ಲ" ಎನ್ನುವ ಮಾತನ್ನು ಹೇಳಿದ್ದರು.
ಡ್ರಗ್ಸ್ ಮಾಫಿಯಾ ಕುರಿತು ಮಾಜಿ ಸಿಎಂ ಎಚ್ಡಿಕೆ ಗಂಭೀರ ಆರೋಪ
Recommended Video
ಈ ಹೇಳಿಕೆ ನೀಡಿದ್ದ ಒಂದೇ ದಿನದಲ್ಲಿ ಐಪಿಎಸ್ ವಲಯದಲ್ಲಿ ಸಂಚಲನ ಮೂಡಿಸುವ ವರ್ಗಾವಣೆಯನ್ನು ಮಾಡಿದ್ದರು. 23 ಅಧಿಕಾರಿಗಳನ್ನು ಬೇರೆ ಬೇರೆ ಇಲಾಖೆಗೆ ವರ್ಗಾಯಿಸಿ, ಆಯಕಟ್ಟಿನ ಜಾಗಕ್ಕೆ, ಆ ವೇಳೆ, ಸಾರ್ವಜನಿಕ ವಲಯದಲ್ಲಿ ಒಳ್ಳೆ ಹೆಸರು ಇರುವ ಪೊಲೀಸ್ ಅಧಿಕಾರಿಗಳನ್ನು ಕೂರಿಸಿದ್ದರು.
ಈಗ, ಸ್ಯಾಂಡಲ್ ವುಡ್ ನಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಡ್ರಗ್ಸ್ ದಂಧೆಯ ಬಗ್ಗೆ ಕುಮಾರಸ್ವಾಮಿ ಹೇಳಿಕೆ ನೀಡಿದ ನಂತರ, ಎರಡು ವರ್ಷದ ಹಿಂದಿನ ಅವರ ಹೇಳಿಕೆ/ತೆಗೆದುಕೊಂಡಿದ್ದ ಕ್ರಮ ಮತ್ತೆ ಮುನ್ನಲೆಗೆ ಬಂದಿದೆ.
ಡ್ರಗ್ಸ್ ಮಾಫಿಯಾ: ಇಬ್ಬರು ನಾಯಕರ ಮಧ್ಯೆ ಮುಂದುವರೆದ ಟ್ವೀಟ್ ಸಮರ!
ಗುಪ್ತಚರ, ಎಸಿಬಿ ಮತ್ತು ಲೋಕಾಯುಕ್ತ ಇಲಾಖೆ
ಸೆಪ್ಟಂಬರ್ 16,2018ರಲ್ಲಿ ಮಾಡಲಾಗಿದ್ದ ಪ್ರಮುಖ ಪೊಲೀಸ್ ಅಧಿಕಾರಿಗಳ ಬದಲಾವಣೆಯಲ್ಲಿ ಗುಪ್ತಚರ, ಎಸಿಬಿ ಮತ್ತು ಲೋಕಾಯುಕ್ತ ಇಲಾಖೆಯೂ ಸೇರಿತ್ತು. ಗುಪ್ತಚರ ಇಲಾಖೆಯ ಡಿಐಜಿಯಾಗಿದ್ದ ಸಂದೀಪ್ ಪಾಟೀಲ್, ಎಸಿಬಿಯ ಎಡಿಜಿಪಿಯಾಗಿದ್ದ ಅಲೋಕ್ ಮೋಹನ್ ಅವರನ್ನು ಆ ಸ್ಥಾನದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿತ್ತು.
ಸಿಸಿಬಿಗೆ (ಕ್ರೈಂ) ಎಸಿಪಿಯಾಗಿ ಅಲೋಕ್ ಕುಮಾರ್
ಐಪಿಎಸ್ ಅಧಿಕಾರಿಗಳ ಈ ಮೇಜರ್ ಸರ್ಜರಿಗೆ ಡ್ರಗ್ಸ್ ಮಾಫಿಯಾದ ಹಣ ಸರಕಾರ ಉರುಳಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ನೇರವಾಗಿ, ಬಿಜೆಪಿಯನ್ನು ಎಚ್ಡಿಕೆ ಟಾರ್ಗೆಟ್ ಮಾಡಿದ್ದರು. ಈ ಪ್ರಮುಖ ವರ್ಗಾವಣೆಯಾದ ಒಂದು ತಿಂಗಳಲ್ಲಿ ಸಿಸಿಬಿಗೆ (ಕ್ರೈಂ) ಎಸಿಪಿಯಾಗಿ ಅಲೋಕ್ ಕುಮಾರ್ ಅವರನ್ನು ಎಚ್ಡಿಕೆ ತಂದು ಕೂರಿಸಿದ್ದರು. ಇದಲ್ಲದೇ, ಚಿಕ್ಕಮಗಳೂರಿನ ಎಸ್ಪಿಯಾಗಿದ್ದ ಕೆ.ಅಣ್ಣಾಮಲೈ ಅವರನ್ನು ಬೆಂಗಳೂರು (ದಕ್ಷಿಣ) ಡಿಸಿಪಿಯಾಗಿ ನೇಮಿಸಿದ್ದರು.
ಬಿಜೆಪಿ ಸ್ವಾಭಾವಿಕವಾಗಿ ಬೇಸ್ ಲೆಸ್ ಎಂದಿತ್ತು
ಆದರೆ, ಇದ್ಯಾವುದೂ ವರ್ಕೌಟ್ ಆಗದೇ ಕುಮಾರಸ್ವಾಮಿ ಸರಕಾರ ಪತನಗೊಂಡಿದ್ದು ಗೊತ್ತಿರುವ ವಿಚಾರ. ಸರಕಾರವನ್ನು ಉರುಳಿಸಲು 15-17 ಶಾಸಕರಿಗೆ ಈ ಮಾಫಿಯಾದಿಂದ ಅಡ್ವಾನ್ಸ್ ಪೇಮೆಂಟ್ ಕೂಡಾ ಹೋಗಿದೆ ಎಂದು ಎಚ್ಡಿಕೆ ಹೇಳಿದ್ದರು. ಕುಮಾರಸ್ವಾಮಿಯವರ ಈ ಆರೋಪಗಳನ್ನು ಬಿಜೆಪಿ ಸ್ವಾಭಾವಿಕವಾಗಿ ಬೇಸ್ ಲೆಸ್ ಎಂದಿತ್ತು.
ಮಾಫಿಯಾ ಜಗತ್ತಿನ ಕಿಂಗ್ ಪಿನ್ ಗಳು
ಮಾಫಿಯಾ ಜಗತ್ತಿನ ಕಿಂಗ್ ಪಿನ್ ಗಳು ಯಾರು ಎನ್ನುವುದು ನನಗೆ ಗೂತ್ತಿಲ್ಲದ ವಿಚಾರವಲ್ಲ ಎಂದು ಹೇಳಿದ್ದ ಕುಮಾರಸ್ವಾಮಿಯವರು ತಮ್ಮ ಅಧಿಕಾರದ ಅವಧಿಯಲ್ಲೇ ಅಂತಹ ಸಮಾಜದ್ರೋಹಿಗಳ ಹೆಡೆಮುರಿ ಕಟ್ಟುವಲ್ಲಿ ವಿಫಲರಾದರೇ ಎನ್ನುವ ಪ್ರಶ್ನೆ ಕಾಡುವುದು, ಇಂದಿನ ಅವರ ಟ್ವೀಟ್.
ನಾನು ಸಿಎಂ ಆಗಿದ್ದಾಗ ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಲು ಯತ್ನಿಸಿದ್ದೆ
"ನಾನು ಸಿಎಂ ಆಗಿದ್ದಾಗ ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಲು ಯತ್ನಿಸಿದ್ದೆ. ಈ ವೇಳೆ ಕೆಲವರು ಶ್ರೀಲಂಕಾಗೆ ಓಡಿ ಹೋದರು. ನನ್ನ ಸರ್ಕಾರ ಬೀಳಿಸೋಕೆ ಡ್ರಗ್ಸ್, ಬೆಟ್ಟಿಂಗ್ ಹಣ ಬಳಕೆ ಆಯ್ತು" ಎನ್ನುವ ಹೇಳಿಕೆಯನ್ನು ಮತ್ತೆ ಕುಮಾರಸ್ವಾಮಿ ನೀಡಿದ್ದಾರೆ. "ಇಂತಹ ಕೆಟ್ಟ ಮಾಫಿಯಾಗಳಿಗೆ ಚಿಕ್ಕ, ಚಿಕ್ಕ ಮಕ್ಕಳು ಬಲಿಯಾಗಬಾರದು. ಆದ್ದರಿಂದ ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ, ಈ ಹಗರಣದ ಹಿಂದೆ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರು ಅವರ ವಿರುದ್ಧ ಕಠಿಣ ಕ್ರಮ ಜರುಗಬೇಕು" ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕುಮಾರಸ್ವಾಮಿಯವರಿಗೆ ಗೊತಿಲ್ಲದ ವಿಚಾರವೇನೂ ಅಲ್ಲ
ತಾವು ಸಿಎಂ ಆಗಿದ್ದ ವೇಳೆ, ಡ್ರಗ್ಸ್ ದಂಧೆಯ ಹಿಂದಿನ ಮನೆಹಾಳರು ಯಾರು ಎನ್ನುವ ವಿಚಾರ ಕುಮಾರಸ್ವಾಮಿಯವರಿಗೆ ಗೊತಿಲ್ಲದ ವಿಚಾರವೇನೂ ಅಲ್ಲ. ಸಾಮಾಜಿಕ ಕಳಕಳಿಯಿಂದ, ಕಿಂಗ್ ಪಿನ್ ಗಳು ಯಾರು, ಅದರ ಹಿಂದೆ ಯಾರಿದ್ದಾರೆ ಎನ್ನುವ ಮಾಹಿತಿಯನ್ನು ಸರಕಾರಕ್ಕೆ ನೀಡಿ, ಈ ಭಯಾನಕ ದುಶ್ಚಟಕ್ಕೆ ಸಮುದಾಯ ಬಲಿಯಾಗದಿರಲು ಕುಮಾರಸ್ವಾಮಿಯವರ ಸಹಕಾರ ಅತ್ಯವಶ್ಯಕ ಎನ್ನುವುದು ಎಲ್ಲರ ಕಳಕಳಿ.