ಏಳಿ, ಎದ್ದೇಳಿ ನಿದ್ದೆಯಿಂದ ಹೊರ ಬನ್ನಿ ಸಿದ್ದರಾಮಯ್ಯ!
ಬೆಂಗಳೂರು, ಸೆಪ್ಟೆಂಬರ್ 05; ಕರ್ನಾಟಕದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಬಿತ್ತನೆ ಪ್ರಮಾಣ ಕುಂಠಿತವಾಗಿದೆ. ಈಗಾಗಲೇ 62 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಸರ್ಕಾರ ಘೋಷಣೆ ಮಾಡಿದೆ. ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಏನು ಮಾಡುತ್ತಿದೆ?.
ಮಂಗಳವಾರ ಪ್ರತಿಪಕ್ಷ ಬಿಜೆಪಿ ಟ್ವೀಟ್ವೊಂದನ್ನು ಮಾಡಿದೆ. 'ಅಯ್ಯಯ್ಯೋ..! ಬರಗಾಲ, ಕ್ಷಾಮ ಕರ್ನಾಟಕದಲ್ಲಿ ತಾಂಡವವಾಡುತ್ತಿದೆ, ಏಳಿ ಎದ್ದೇಳಿ ನಿದ್ದೆಯಿಂದ ಹೊರ ಬನ್ನಿ ಮಾನ್ಯ ಸಿದ್ದರಾಮಯ್ಯ ಅವರೇ...!' ಎಂದು ಮುಖ್ಯಮಂತ್ರಿಗಳನ್ನು ಎಚ್ಚರಿಸಿದೆ.

ಬಿಜೆಪಿ ಟ್ವೀಟ್ನಲ್ಲಿ
* ನಿಲ್ಲುತ್ತಿಲ್ಲ ಅನ್ನದಾತನ ಆತ್ಮಹತ್ಯೆ ಸರಣಿ, ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ 70ಕ್ಕೂ ಹೆಚ್ಚು ರೈತರ ಸಾವು..!
* ಬೆಳೆ ಬೆಳೆದ ನಮ್ಮ ರೈತರಿಗಿಲ್ಲ ಕಾವೇರಿ ನೀರು, ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯುಸೆಕ್ಸ್ ಹರಿಯುತ್ತಿದ್ದಾಳೆ ಕಾವೇರಿ..!
* ಕುಡಿಯುವ ನೀರಿಗೂ ರಾಜ್ಯದಲ್ಲಿ ಹಾಹಾಕಾರ, ನಿಲ್ಲುತ್ತಿಲ್ಲ ಕಲುಷಿತ ನೀರು ಪೂರೈಕೆ, ಅಪಾರ ಸಾವು ನೋವು ಮುಂದುವರಿಕೆ..!
* ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ದುರಾಡಳಿತಕ್ಕಿಲ್ಲ ಕಡಿವಾಣ..!
* ಮೊದಲೇ ಬೆಲೆ ಏರಿಕೆಗೆ ರೋಸಿ ಹೋಗಿದ್ದ ಜನರ ಮೇಲೆ ಇದೀಗ ಪ್ರತಿ ಕೆಜಿ ಅಕ್ಕಿ ಬೆಲೆ 10 ರಿಂದ 20 ರೂ. ಏರಿಕೆಯ ಹೊರೆ!
* 135 ತಾಲೂಕುಗಳಲ್ಲಿ ಬರ ಬಂದಿದ್ದರೂ, ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಿಸದೆ ಮೊಂಡಾಟ..!
ಆಡಳಿತದ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ಈ ಪರಿ ಮೌನಕ್ಕೆ ಶರಣಾಗಿರುವುದು ಕನ್ನಡಿಗರ ದುರಂತ..! ಎಂದು ಪ್ರತಿಪಕ್ಷ ಟೀಕೆ ಮಾಡಿದೆ.
ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ, 'ರಾಜ್ಯದ ಬೊಕ್ಕಸವನ್ನು ಈಗಾಗಲೇ ಬರಿದು ಮಾಡಿರುವ ಕಾಂಗ್ರೆಸ್ ಸರ್ಕಾರ ಬರ ಘೋಷಿಸಲೂ ಮೀನಮೇಷ ಎಣಿಸುತ್ತಿದೆ. ಕಾಂಗ್ರೆಸ್ಸಿನ ದೂರದೃಷ್ಟಿಯ ಕೊರತೆ ಕರ್ನಾಟಕವನ್ನು ಸಂಕಷ್ಟದ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಕೇಂದ್ರದ ಶ್ರೀ ನರೇಂದ್ರ ಮೋದಿ ಸರ್ಕಾರ ನೀಡದ ಹೊರತು ಯಾವುದೇ ಪರಿಹಾರ ಪ್ಯಾಕೇಜ್ ಘೋಷಿಸುವುದಕ್ಕೂ ರಾಜ್ಯ ಸರ್ಕಾರದ ಬಳಿ ಹಣ ಉಳಿದಿಲ್ಲ. ಹಾಗಾಗಿ ಈಗಾಗಲೇ ಪರಿಸ್ಥಿತಿ ಬಿಗಡಾಯಿಸಿದರೂ ಬರ ಘೋಷಿಸುವುದನ್ನು ಸಿದ್ದರಾಮಯ್ಯ ಅವರ ಸರ್ಕಾರ ಇನ್ನೂ ಒಂದು ವಾರ ಮುಂದಕ್ಕೆ ಹಾಕಿದೆ' ಎಂದು ಆರೋಪ ಮಾಡಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದರು. "ಮಳೆ ಕೊರತೆ ಮತ್ತು ಬಿತ್ತನೆ ಪ್ರಮಾಣ ಕುಂಠಿತವಾಗಿರುವುದನ್ನು ಆಧರಿಸಿ 113 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗಿತ್ತು. 62 ತಾಲೂಕುಗಳು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಬರವನ್ನು ಎದುರಿಸುತ್ತಿವೆ" ಎಂದು ಹೇಳಿದ್ದರು.
"ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕಾದರೆ ಶೇ 60ರಷ್ಟು ಮಳೆ ಕೊರತೆ ಇರಬೇಕು ಮತ್ತು ಮೂರು ವಾರ ಶುಷ್ಕ ವಾತಾವರಣ ಇರಬೇಕು. ಆದರೆ 51ಕ್ಕೂ ಅಧಿಕ ತಾಲೂಕುಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ" ಎಂದು ತಿಳಿಸಿದ್ದರು.
"ರಾಜ್ಯದಲ್ಲಿ ದಕ್ಷಿಣ ಒಳನಾಡಿನ ತಾಲೂಕುಗಳಲ್ಲಿಯೂ ಬರ ಪರಿಸ್ಥಿತಿ ಇದೆ. 62 ತಾಲೂಕುಗಳಲ್ಲಿ ಬೆಳೆ ಕ್ಷೀಣಿಸಿದೆ. ಆದರೆ ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಇನ್ನೂ ಹೆಚ್ಚಿನ ತಾಲೂಕುಗಳಲ್ಲಿ ಬೆಳೆ ಪ್ರಮಾಣ ಕ್ಷೀಣಿಸಿದೆ" ಎಂದು ಸಚಿವರು ವಿವರಣೆ ನೀಡಿದ್ದರು.












Click it and Unblock the Notifications