ರಾಜ್ಯ ಸರಕಾರಗಳಿಂದ ಕಸಿದುಕೊಂಡಿದ್ದ ಹಕ್ಕನ್ನು ಕೇಂದ್ರ, ರಾಜ್ಯಗಳಿಗೆ ಮರಳಿಸಿದೆ
ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವ ಮತ್ತು ರಾಜ್ಯಕ್ಕೆ ಸೀಮಿತವಾಗಿ ಒಬಿಸಿ ಪ್ರತ್ಯೇಕ ಪಟ್ಟಿ ರೂಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಮತ್ತೆ ದೊರಕಿಸಿಕೊಡುವ ಉದ್ದೇಶದ ಸಂವಿಧಾನದ 127ನೇ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅನುಮೋದಿಸಿದೆ.
ಈ ಮಸೂದೆಯನ್ನು ರಾಜ್ಯಸಭೆಯೂ ಅಂಗೀಕರಿಸಿ ಆ ಬಳಿಕ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರಗಳಿಂದ ಕಸಿದುಕೊಂಡಿದ್ದ ಸಾಂವಿಧಾನಿಕ ಹಕ್ಕೊಂದನ್ನು ಕೇಂದ್ರವು ರಾಜ್ಯಗಳಿಗೆ ಮರಳಿಸಿದಂತಾಗುತ್ತದೆ.
ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡುವುದು ತಾಂತ್ರಿಕವಾಗಿ ಮತ್ತು ನ್ಯಾಯಬದ್ಧವಾಗಿ ಸರಿಯಾದ ವಿಚಾರವೇ ಆಗಿದೆ. ಕಾರಣ ಒಂದು ಪ್ರಾದೇಶಿಕ ಗಡಿಯೊಳಗೆ ವಾಸಿಸುವ ನಿರ್ದಿಷ್ಟ ಭಾಷೆಯ ಜನ ಸಮುದಾಯಗಳ ಬದುಕಿನ ವಿನ್ಯಾಸಗಳು.

ಮತ್ತು, ಒಂದು ರಾಜ್ಯದ ಆರ್ಥಿಕತೆಯ ಪರಿಮಿತಿಯಲ್ಲಿ ಬದುಕುವ ಮತ್ತು ಹಾಗೆ ಬದುಕುವಾಗ ಅವರ ಬದುಕಿನಲ್ಲಿ ಉಂಟಾಗುವ ಬದಲಾವಣೆಗಳನ್ನು ಆಯಾ ರಾಜ್ಯದೊಳಗಿನ ತಜ್ಞರು ಅರ್ಥ ಮಾಡಿಕೊಳ್ಳುವಷ್ಟು ಸುಲಭವಾಗಿ ಹೊರಗಿನ ಮಂದಿ ಅರ್ಥ ಮಾಡಿಕೊಳ್ಳುವುದು ತುಸು ಕಷ್ಟ.
ಈ ಹಿನ್ನಲೆಯಲ್ಲಿ ಈಗಾಗಲೇ ತಜ್ಞರ ಆಯೋಗದ ಶಿಫಾರಸ್ಸಿನ ಮೇರೆಗೆ ಕೆಲ ನಿರ್ದಿಷ್ಟ ಜನ ಸಮುದಾಯಗಳಿಗೆ ನೀಡಲಾದ ಹಿಂದುಳಿದ ವರ್ಗ ಸ್ಥಾನ ಮಾನ ಪ್ರಕ್ರಿಯೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ನಾವು ಎಲ್.ಜೆ.ಹಾವನೂರ್, ಚಿನ್ನಪ್ಪರೆಡ್ಡಿ ಹಾಗೂ ಇನ್ನೂ ಕೆಲ ಆಯೋಗದ ವರದಿಯನ್ನು ವಿವರವಾಗಿ ಓದಿಕೊಳ್ಳಬಹುದು.
ಹಾಗೆಯೇ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಾತಿಯಾಧಾರಿತ ಜನಗಣತಿಗೆ 30 ಕೋಟಿ ರೂಪಾಯಿಗಳ ಅನುದಾನವನ್ನು ನಿಗದಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರವು ಆ ಅನುದಾನವನ್ನು ಬಳಸಿಕೊಂಡು ಸಮರ್ಪಕ ರೀತಿಯಲ್ಲಿ ಜಾತಿಯಾಧಾರಿತವಾದ ಜನಗಣತಿಯನ್ನು ಮಾಡಲಿ.
ನಂತರ, ಆ ಜನ ಸಂಖ್ಯೆಯ ಮತ್ತು ಅವರ ಈಗಿನ ಸಾಮಾಜಿಕ ಸ್ಥಿತಿಗತಿಗಳ ಆಧಾರದ ಮೇಲೆ ಮೀಸಲಾತಿ ಹಾಗೂ ಇನ್ನಿತರೆ ಸಂವಿಧಾನಾತ್ಮಕ ಅನುಕೂಲಗಳನ್ನು ಕಲ್ಪಿಸುವೆಡೆ ಯೋಚಿಸಿದರೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅದು ಹೆಚ್ಚು ಅರ್ಥಪೂರ್ಣ ಎನಿಸಿಕೊಳ್ಳುತ್ತದೆ.












Click it and Unblock the Notifications