ಪುನೀತ್ ಸಾವಿಗೆ ಈ ಕಾರಣವೂ ಇರಬಹುದು: ಡಾ.ಸಿ.ಎನ್.ಮಂಜುನಾಥ್
ವಯಸ್ಸಲ್ಲದ ವಯಸ್ಸಿನಲ್ಲಿ ನಮ್ಮನ್ನು ಅಗಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವಿಗೆ ಏನು ಕಾರಣವಿರಬಹುದು ಎನ್ನುವ ಚರ್ಚೆಗಳು ಆರಂಭವಾಗಿದೆ. ಯಾಕೆಂದರೆ, ದೈಹಿಕವಾಗಿ ಅತ್ಯಂತ ಫಿಟ್ ಆಗಿದ್ದ ಅಪ್ಪು ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದು.
ವ್ಯಾಯಾಮ, ಜಿಮ್ ಎನ್ನುತ್ತ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿದ್ದ ಪುನೀತ್ ರಾಜಕುಮಾರ್, ಶುಕ್ರವಾರ (ಅ 29) ನಿಧನರಾಗಿದ್ದಾರೆ. ಅವರ ಅಂತಿಮಕ್ರಿಯೆಗಳು ವಿದೇಶದಿಂದ ಅವರ ಮಗಳು ಬೆಂಗಳೂರಿಗೆ ಬರುವ ಸಮಯವನ್ನು ಆಧರಿಸಿ ನಡೆಸಲಾಗುತ್ತದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್, ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಹೇಳಿದ್ದಾರೆ.
ಶನಿವಾರ ಸಂಜೆಯೇ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ!
ಸ್ವಲ್ಪವೂ ಆರೋಗ್ಯದ ಸಮಸ್ಯೆ ಇರದ ಪುನೀತ್ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಎಂದರೆ ಅತಿಯಾದ ವರ್ಕೌಟ್ ಕೂಡಾ ಸಮಸ್ಯೆಯಾಗಲಿದೆಯಾ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.
ಅತಿಯಾದ ವರ್ಕೌಟ್, ಸಿಕ್ಸ್ ಪ್ಯಾಕ್ ಎಲ್ಲವೂ ಅತಿಯಾದರೆ ಈ ರೀತಿಯ ಸಮಸ್ಯೆ ಆಗಲಿದೆ ಎಂದು ಹಲವು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದಂತಹ ಡಾ.ಸಿ.ಎನ್.ಮಂಜುನಾಥ್ ಅವರು ಅಪ್ಪು ಸಾವಿಗೆ ಬೇರೆ ಕಾರಣವೂ ಇರಬಹುದು ಎಂದು ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನ, ಇಂದು ಖಾಸಗಿ ಶಾಲೆಗಳಿಗೆ ರಜೆ
ಶುಕ್ರವಾರ ಬೆಳಗ್ಗೆ ಎರಡು ಗಂಟೆಯ ಕಾಲ ವರ್ಕೌಟ್ ಮಾಡಿದ್ದರು
ಶುಕ್ರವಾರ ಬೆಳಗ್ಗೆ ಎರಡು ಗಂಟೆಯ ಕಾಲ ವರ್ಕೌಟ್ ಮಾಡಿದ್ದರು, ಆ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಇಸಿಜಿಯಲ್ಲಿ ಅವರಿಗೆ ಹೃದಯಾಘಾತ ಆಗಿರುವುದು ದೃಢಪಟ್ಟಿದ್ದರಿಂದ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. "ದಾರಿ ಮಧ್ಯೆಯೇ ಪುನೀತ್ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ, ಮೂರು ಬಾರಿ ಅವರನ್ನು ಬದುಕುಳಿಸುವ ಪ್ರಯತ್ನವನ್ನು ಮಾಡಲಾಯಿತು, ಅದು ಫಲಿಸಲಿಲ್ಲ"ಎಂದು ಅಲ್ಲಿನ ವೈದ್ಯರಾದ ಡಾ.ರಂಗನಾಥ್ ಹೇಳಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯ ಪಡುವುದು ಹೀಗೆ
"17 ಮತ್ತು 23 ವಯಸ್ಸಿನ ಹೃದಯ ಸಂಬಂಧಿ ಸಮಸ್ಯೆಯಿಂದ ಇಬ್ಬರು ನಮ್ಮ ಆಸ್ಪತ್ರೆಗೆ ಇತ್ತೀಚೆಗೆ ಬಂದಿದ್ದರು, ಇವರಿಬ್ಬರಿಗೂ ಭಯ ಪಡುವಂತಹ ಅಂಶಗಳಿರಲಿಲ್ಲ ಅಥವಾ ಅವರ ಕುಟುಂಬದಲ್ಲಿ ಯಾರಿಗೂ ಹೃದಯ ಕಾಯಿಲೆ ಇರಲಿಲ್ಲ. ಟ್ರೆಕ್ಕಿಂಗ್ ಮುಗಿಸಿ ಬಂದ ಮೂರು ದಿನದ ಬಳಿಕ ಇವರಿಬ್ಬರಿಗೂ ನೋವು ಕಾಣಿಸಿಕೊಂಡಿದೆ. ಸಾಮಾನ್ಯವಾಗಿ, ಯುವಕರಿಗೆ ಬಿಪಿ/ಸುಗರ್ ಕಾಯಿಲೆ ಇರುವುದು ಕಮ್ಮಿ" ಎಂದು ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ಪುನೀತ್ ರಾಜಕುಮಾರ್ ವಿಚಾರದಲ್ಲಿ ನಡೆದದ್ದು ಇದೇ
"ಹೃದಯಾಘಾತದ ಸಮಯದಲ್ಲಿ, ಕೆಲವು ದುರದೃಷ್ಟಕರ ರೋಗಿಗಳಿಗೆ ಕೆಲವೇ ನಿಮಿಷಗಳಲ್ಲಿ ventricular fibrillation ನಿಂದಾಗಿ ಹೃದಯ ಸ್ತಂಭನ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಲೂ ಸಮಯ ಇರುವುದಿಲ್ಲ. ಯಾಕೆಂದರೆ ಹೃದಯ ಸ್ನಾಯುಗಳಿಗೆ ರಕ್ತ ಪೂರೈಕೆ ಸ್ಥಗಿತಗೊಳ್ಳುತ್ತದೆ, ನಮ್ಮ ಪುನೀತ್ ರಾಜಕುಮಾರ್ ವಿಚಾರದಲ್ಲಿ ನಡೆದದ್ದು ಇದೇ" ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಶಿವರಾಜ್ ಕುಮಾರ್ ಮತ್ತು ರಾಘಣ್ಣನಿಗೂ ಹೃದಯ ಸಮಸ್ಯೆ ಇತ್ತು
"ಪುನೀತ್ ಅವರ ವಿಚಾರದಲ್ಲಿ ರಕ್ತ ಹೆಪ್ಪುಗಟ್ಟಿ ಕಾರ್ಡಿಯಾಕ್ ಅರೆಸ್ಟ್ ಆಗಿರುವ ಸಾಧ್ಯತೆಯಿದೆ. ಇದು ಯಾವುದೇ ಮುನ್ಸೂಚನೆ ಇಲ್ಲದೇ ಬರುವಂತದ್ದು. ಇನ್ನೊಂದು ಆಯಾಮ ಎಂದರೆ ಕುಟುಬದಲ್ಲಿ ಈ ರೀತಿಯ ಸಮಸ್ಯೆ ಇದ್ದರೂ ಆಗಬಹುದು. ಅವರ ಇಬ್ಬರು ಸಹೋದರರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರಿಗೆ ಹೃದಯಾಘಾತವಾಗಿತ್ತು" ಎಂದು ಡಾ.ಮಂಜುನಾಥ್ ಹೇಳಿದ್ದಾರೆ. ಶಿವಣ್ಣಗೆ 2015ರ ಅಕ್ಟೋಬರ್ ನಲ್ಲಿ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರಿಗೆ 27ನೇ ವಯಸ್ಸಿನಲ್ಲೇ ಹೃದಯ ಸಮಸ್ಯೆ ಉಂಟಾಗಿ ಆ್ಯಂಜಿಯೋಪ್ಲಾಸ್ಟ್ ಮಾಡಲಾಗಿತ್ತು. ಇವರಿಗೆ ಎರಡು ಬಾರಿ ಈ ಸಮಸ್ಯೆ ಎದುರಾಗಿತ್ತು.