ಅಮಿತ್ ಶಾರನ್ನು ಬರಮಾಡಿಕೊಳ್ಳಲು ಹೋಗಬೇಡಿ, ಸಾಧ್ಯವಾದರೆ ಬರಲಿಕ್ಕೆ ಅವಕಾಶವನ್ನೇ ಕೊಡಬೇಡಿ: ಜೆಡಿಎಸ್
ಬೆಂಗಳೂರು, ಡಿಸೆಂಬರ್ 30: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಂಡ್ಯ ಜಿಲ್ಲೆಗೆ ಆಗಮಿಸಿದ್ದಾರೆ. ಅಮಿತ್ ಶಾ ಆಗಮನದ ಕುರಿತು ಜೆಡಿಎಸ್ ಟ್ವೀಟ್ ಮಾಡಿದೆ.
'ಅಮಿತ್ ಶಾ ಅವರೇ, ನಮ್ಮ ಕರ್ನಾಟಕ - ಒಂದು ರಾಜ್ಯ, ಹಲವು ಪ್ರಪಂಚಕ್ಕೆ ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ದಯವಿಟ್ಟು ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿಯಲ್ಲಿ ಶಾಂತಿ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಿ' ಎಂದು ತಿಳಿಸಿದೆ.
'ಕರ್ನಾಟಕದ ಬಿಜೆಪಿ ಸರಕಾರ ಕನ್ನಡಿಗರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಕರೆಯಲ್ಪಡುವ ಇದು ಕರ್ನಾಟಕದ ಜನರಿಗೆ ಈಗ ಟ್ರಬಲ್ ಎಂಜಿನ್ ಸರಕಾರವಾಗಿದೆ' ಎಂದು ಜೆಡಿಎಸ್ ಹರಿಹಾಯ್ದಿದೆ.

'ಇವೆಲ್ಲವುಗಳ ಬಗ್ಗೆ ನಮ್ಮಲಿರುವಷ್ಟು ಭಕ್ತಿ ಪ್ರೀತಿ ನಿಮ್ಮಲ್ಲೂ ಇದೆ ಎಂದು ಭಾವಿಸುತ್ತೇವೆ. ಈ ಭಾವನೆಯನ್ನು ನೀವು ಕೂಡ ಒಪ್ಪುವುದಾದರೆ, ನಮ್ಮ ರಾಜ್ಯದ ಸ್ವಾಭಿಮಾನದ ಪ್ರಯುಕ್ತ ನಿಮ್ಮಲ್ಲಿ ಒಂದು ಕಳಕಳಿಯ ಮನವಿಯನ್ನು ಮಾಡುತ್ತೇವೆ' ಎಂದು ತಿಳಿಸಿದೆ.
'ದೇಶದ ನೆಪವೊಡ್ಡಿ, ನಮ್ಮ ತಾಯಿ ನೆಲವನ್ನು ನಮ್ಮಿಂದ ಕಿತ್ತುಕೊಳ್ಳುವುದಕ್ಕೆ ಸಂಚು ಹಾಕುತ್ತಿರುವವರು ಇಲ್ಲಿಗೆ ಬಂದಾಗ ತಾವು ಅವರನ್ನು ಬರಮಾಡಿಕೊಳ್ಳಲು ಹೋಗಬೇಡಿ. ಸಾಧ್ಯವಾದರೆ ಅವರನ್ನು ಬರಲಿಕ್ಕೆ ಅವಕಾಶವನ್ನೇ ಕೊಡಬೇಡಿ' ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
'ನೀವು ನಿಜವಾದ ಕನ್ನಡಾಂಬೆಯ ಮಗನಾಗಿದ್ದರೆ, ನಮ್ಮ ನೋವು ನಿಮಗೀಗಾಗಲೇ ಅರ್ಥವಾಗಿದೆ ಎಂದು ಭಾವಿಸುತ್ತೇವೆ. ನೀವು ಈ ಕೋರಿಕೆಯನ್ನು ಈಡೇರಿಸುತ್ತೀರಿ ಎನ್ನುವ ವಿಶ್ವಾಸ ನಮಗಿದೆ' ಎಂದೂ ಜೆಡಿಎಸ್ ಹೇಳಿದೆ.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಇಂದು ಮಂಡ್ಯ ಜಿಲ್ಲೆಗೆ ಆಗಮಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿ ತಾಲ್ಲೂಕಿನ ಗೆಜ್ಜಲಗೆರೆಯಲ್ಲಿಯ ಮಂಡ್ಯ ಹಾಲು ಒಕ್ಕೂಟದ ಆವರಣದಲ್ಲಿ ನಿರ್ಮಿಸಲಾಗಿರುವ ಮೆಗಾ ಡೈರಿಯನ್ನು ಉದ್ಘಾಟಿಸಲಿದ್ದಾರೆ.
ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯು ಮಹತ್ವ ಪಡೆದುಕೊಂಡಿದೆ. ಶಾ ಅವರ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುತ್ತೇವೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಳಿಗಾಲದ ಅಧಿವೇಶನವನ್ನು ಮೊಟಗೊಳಿಸಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ನಗರ ಹಾಗೂ ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಮಹಾರಾಷ್ಟ್ರ ಸರ್ಕಾರ ಒತ್ತಾಯಿಸಿದೆ. ಇದು ಎರಡೂ ರಾಜ್ಯಗಳ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ.












Click it and Unblock the Notifications