ಮುಷ್ಕರದಿಂದಾಗಿ ಜಿಲ್ಲೆಜಿಲ್ಲೆಗಳಲ್ಲಿ ರೋಗಿಗಳ ನರಳಾಟ
ಬೆಂಗಳೂರು, ನವೆಂಬರ್ 16 : ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ವಿಷಯವನ್ನು ಖಾಸಗಿ ವೈದ್ಯರು ಮತ್ತು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಒಮ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದಾರೆ.
In Pics:ವೈದ್ಯರ ಮುಷ್ಕರ : ಎಲ್ಲಾ ಕಡೆ ಆಸ್ಪತ್ರೆ ಬಂದ್ ಬಂದ್ ಬಂದ್
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ, ಕರ್ನಾಟಕದಾದ್ಯಂತ ಖಾಸಗಿ ವೈದ್ಯರು ಮುಷ್ಕರದಲ್ಲಿ ನಿರತರಾಗಿರುವುದರಿಂದ ರೋಗಿಗಳು ನರಳಾಡುತ್ತಿದ್ದಾರೆ, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯಲು ಹಲವರು ಸಾವಿಗೂ ಈಡಾಗುತ್ತಿದ್ದಾರೆ.

ಆದರೂ, ಖಾಸಗಿ ವೈದ್ಯರಾಗಲಿ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ತೆರಳಲು ಸಿದ್ಧರಿಲ್ಲ ಮತ್ತು ಆರೋಗ್ಯ ಸಚಿವರು ವೈದ್ಯರೊಡನೆ ಮಾತುಕತೆ ನಡೆಸಲೂ ಸಿದ್ಧರಿಲ್ಲ. ಇಬ್ಬರೂ ಪಟ್ಟು ಹಿಡಿದು ಕುಳಿತಿರುವುದು ರೋಗಿಗಳ ಪಾಲಿಗೆ ಮರಣ ಶಾಸನವಾಗಿದೆ.
ಈ ನಡುವೆ, ಕರ್ನಾಟಕದ ಹಲವಾರು ಊರುಗಳಲ್ಲಿ ರೋಗಿಗಳ ನರಳಾಟದ ದನಿಗಳು, ಸತ್ತವರ ಕುಟುಂಬದ ಆರ್ತನಾದಗಳು ಕೇಳಿಬರುತ್ತಿವೆ.
ಬೆಳಗಾವಿ : ಅಧಿವೇಶನ ನಡೆಯುತ್ತಿರುವ ಬೆಳಗಾವಿ ನಗರದಲ್ಲಿ ಖಾಸಗಿ ಆಸ್ಪತ್ರೆ ಮುಂದೆ ಗೃಹಿಣಿಯೊಬ್ಬರು ಅರ್ಧ ಗಂಟೆ ಬಿದ್ದು ನರಳಾಡಿದ್ದಾರೆ. ಖಾನಾಪುರ ತಾಲೂಕಿನ ನಿಟ್ಟೂರು ಗ್ರಾಮದ ಮಹಿಳೆ ಬಿಪಿ ಚೆಕ್ ಮಾಡಿಸಲು ಬೆಳಗಾವಿ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಇರುವ ಡಾ. ಜಯಪ್ರಕಾಶ್ ಮಿರಜಕರ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆ ಬಂದ್ ಆಗಿದ್ದ ಕಾರಣ ಗೃಹಿಣಿ ರಸ್ತೆ ಮೆಲೆ ಬಿದ್ದು ಒದ್ದಾಡಲು ಪ್ರಾರಂಭಿಸಿದ್ದಾರೆ. ಪಂಕ್ಚರ್ ತೆಗೆಯುವ ತಾಜ ಎನ್ನುವ ವ್ಯಕ್ತಿ ಮಾನವೀಯತೆ ಮೆರೆದು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.

ವಿಜಯಪುರ : ವಿಜಯಪುರದಲ್ಲಿ O+ve ರಕ್ತಕ್ಕಾಗಿ ಗರ್ಭಿಣಿ ಸ್ತ್ರೀ ಪರದಾಟ ನಡೆಸಿದ ಘಟನೆ ಗುರುವಾರ ನಡೆದಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರದಲ್ಲಿ ನಿರತರಾಗಿರುವ ಕಾರಣ, ರಕ್ತಕ್ಕಾಗಿ ಮಹಿಳೆ ಅಲೆದಾಡುತ್ತಿದ್ದರು. ಆಗ ಸ್ಥಳೀಯರೇ ಮಹಿಳೆಯ ಸಹಾಯಕ್ಕೆ ಧಾವಿಸಿ, ರಕ್ತಕ್ಕಾಗಿ ಹಣ ನೀಡಿದ್ದಲ್ಲದೆ, ಜಿಲ್ಲಾಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿದ್ದಾರೆ.
ಕಲಬುರಗಿ : ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕೆಲ ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಅವರನ್ನು ದಾಖಲಿಸಿಕೊಳ್ಳದೆ ಬರೀ ಔಷಧ ಕೊಟ್ಟು ಕಳಿಸುತ್ತಿರುವುದು ಕಂಡುಬಂದಿದೆ. ಮಕ್ಕಳು ತೀವ್ರ ಜ್ವರದಿಂದ ಬಳಲುತ್ತಿದ್ದರೂ ಚಿಕಿತ್ಸೆ ನೀಡುತ್ತಿಲ್ಲ. ಎರಡು ವರ್ಷದ ಮಗುವೊಂದು ಚಿಕಿತ್ಸೆ ಸಿಗದೆ ಮೂರ್ಛೆ ಹೋದದ್ದೂ ನಡೆದಿದೆ.
ಹಾವೇರಿ : ವೈದ್ಯರ ಮುಷ್ಕರದಿಂದಾಗಿ ಮತ್ತೋರ್ವ ಮಹಿಳೆ ಬಲಿಯಾಗಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೇ ನೀಲಮ್ಮ ಚನ್ನಬಸಯ್ಯ ಹಿರೇಮಠ ಎಂಬುವವರು ಸಾವಿಗೀಡಾಗಿದ್ದಾರೆ. ಹಾವೇರಿ ಸಮೀಪದ ಕುರುಬಗೊಂಡ ಗ್ರಾಮದ ನಿವಾಸಿಯಾಗಿರುವ ನೀಲಮ್ಮ ಎದೆನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆ ಇಲ್ಲದ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಅಂತಿಮ ಉಸಿರೆಳೆದಿದ್ದಾರೆ. ನಾಲ್ಕು ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆ.
ಚಿಕ್ಕೋಡಿ : ಮೊಬೈಲ್ ಬ್ಯಾಟರಿ ಸ್ಫೋಟದಿಂದ ಚಿಕ್ಕೋಡಿಯ ಬೆಳಕೂಡ ಗ್ರಾಮದಲ್ಲಿ 5 ವರ್ಷದ ಸುಪ್ರಿಯಾ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ಪಟ್ಟಣದಲ್ಲಿ ವೈದ್ಯರಿಗಾಗಿ ಅಲೆದಾಡಿದ್ದಾರೆ ಪೋಷಕರು. ಕೊನೆಗೆ ಚಿಕ್ಕೋಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರಕಾರಿ ಆಸ್ಪತ್ರೆ ವೈದ್ಯರಿಂದ ಮಗುವಿಗೆ ಚಿಕಿತ್ಸೆ ಸಿಕ್ಕಿದೆ.












Click it and Unblock the Notifications