ವಿಶ್ರಾಂತಿಗೆ ವೈದ್ಯರ ಸೂಚನೆ; ಸಿದ್ದರಾಮಯ್ಯ ಎಲ್ಲಾ ಕಾರ್ಯಕ್ರಮ ರದ್ದು
Recommended Video
ಬೆಂಗಳೂರು, ಆಗಸ್ಟ್ 23 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ.
ಬಲಗಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದಾಗ ಅಲ್ಲಿಗೆ ಭೇಟಿ ನೀಡಿದ್ದರು. ಮೂರು ದಿನಗಳ ಕಾಲ ಅವರು ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಸಭೆಗಳನ್ನು ನಡೆಸಿದ್ದರು.

ಈಗ ಕಣ್ಣಿನ ಸೋಂಕು ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲಿದ್ದಾರೆ. ದೆಹಲಿಗೆ ಹೋಗಬೇಕಿದ್ದ ಸಿದ್ದರಾಮಯ್ಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿನಲ್ಲಿಯೇ ಉಳಿಯಲಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ : ಶಸ್ತ್ರಚಿಕಿತ್ಸೆಗೀಡಾಗಿರುವ ಕಣ್ಣಿಗೆ ಸೋಂಕು ಉಂಟಾಗಿದ್ದು ವೈದ್ಯರ ಸಲಹೆಯಂತೆ ಪ್ರವಾಹಪೀಡಿತ ಪ್ರದೇಶಗಳ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದೇನೆ. ಇದೇ ಕಾರಣಕ್ಕಾಗಿ ದೆಹಲಿ ಪ್ರವಾಸವನ್ನೂ ರದ್ದುಗೊಳಿಸಬೇಕಾಯಿತು. ವಿಶ್ರಾಂತಿ ಬಳಿಕ ಸೋಮವಾರದಿಂದ ಮತ್ತೆ ಪ್ರವಾಸ ಕೈಗೊಳ್ಳಲಿದ್ದೇನೆ.
ಶಸ್ತ್ರ ಚಿಕಿತ್ಸೆಯಾದ ಕಾರಣ ಬಾದಾಮಿ ಕ್ಷೇತ್ರದ ಪ್ರವಾಸವನ್ನು ಸಿದ್ದರಾಮಯ್ಯ ಮುಂದೂಡಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆದ್ದರಿಂದ, ಮೂರು ದಿನಗಳ ಕಾಲ ಅವರು ಕ್ಷೇತ್ರದ ಪ್ರವಾಸ ಮಾಡಿದ್ದರು.
ಬಾದಾಮಿ ಪ್ರವಾಸದ ವೇಳೆ ಬೇಲೂರು ಗ್ರಾಮಕ್ಕೆ ಭೇಟಿ ಕೊಟ್ಟಿದ್ದ ಸಿದ್ದರಾಮಯ್ಯ ಅಲ್ಲಿನ ರಸ್ತೆ ಬದಿಯ ಹೋಟೆಲ್ನಲ್ಲಿ ಊಟ ಸವಿದಿದ್ದರು. ಹಳ್ಳಿ ಹೋಟೆಲ್ನಲ್ಲಿ ಅವರು ಊಟ ಮಾಡುವ ಫೋಟೋ ವೈರಲ್ ಆಗಿತ್ತು.












Click it and Unblock the Notifications