ಜೆಡಿಎಸ್ ನಿಂದ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ತೀರ್ಮಾನಿಸಿ ಹಲವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ: ಡಿ.ಕೆ.ಶಿವಕುಮಾರ್
ರೈತರು,ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ಜನತಾದಳಕ್ಕೆ ಅಧಿಕಾರ ನೀಡಿದೆವು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಆಡಳಿತ ಮಾಡಲು ನಾವು ಸಂಪೂರ್ಣ ಸಹಕಾರ ನೀಡಿದರೂ ಅಧಿಕಾರ ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ.
ಮಂಡ್ಯ, ಜನವರಿ27: ಜೆಡಿಎಸ್ ನಿಂದ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ತೀರ್ಮಾನಿಸಿ ಹಲವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಕುರಿತು ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ರೈತರು,ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ಜನತಾದಳಕ್ಕೆ ಅಧಿಕಾರ ನೀಡಿದೆವು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಆಡಳಿತ ಮಾಡಲು ನಾವು ಸಂಪೂರ್ಣ ಸಹಕಾರ ನೀಡಿದರೂ ಅಧಿಕಾರ ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ.
ಬಡವರ ಕಲ್ಯಾಣಕ್ಕಾಗಿ ನಾವು ಎಂದೂ ಮುಖ್ಯಮಂತ್ರಿ ಸ್ಥಾನ ಬಯಸದೇ, ಯಾವುದೇ ಷರತ್ತು ಹಾಕದೇ ಸಂಪೂರ್ಣ ಬೆಂಬಲ ನೀಡಿದ್ದೆವು. ನಾವು ಅವರಿಗೆ ಮೋಸ, ತೊಂದರೆ ಮಾಡಿದ್ದೆವಾ? ಅವರ ಮಗ ಚುನಾವಣೆಗೆ ನಿಂತಾಗ ಹಲವರು ಒಪ್ಪದಿದ್ದರೂ ನಾನು ಹಾಗೂ ನಮ್ಮ ನಾಯಕರು ಇಲ್ಲಿಗೆ ಬಂದು ಅವರ ಪರವಾಗಿ ಪ್ರಾಮಾಣಿಕವಾಗಿ ಪ್ರಚಾರ ಮಾಡಿದ್ದೇವೆ. ಆದರೆ ಅವರು ಅದನ್ನು ಉಳಿಸಿಕೊಳ್ಳಲಿಲ್ಲ ಎಂದು ಕುಮಾರಸ್ವಾಮಿ ವಿರುದ್ದ ಅಸಮಾಧಾನ ಹೊರ ಹಾಕಿದರು.

ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಅವರ ಅಧಿಕಾರವನ್ನು ನೀವು ನೋಡಿದ್ದೀರಿ. ನಾನು ನಿಮ್ಮ ಮನೆ ಮಗನಾಗಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನನಗೆ ಶಕ್ತಿ ನೀಡುವಂತೆ ನಿಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ.
ನಾವು ಮೇಕೆದಾಟು ಪಾದಯಾತ್ರೆಯನ್ನು ಕಾವೇರಿ ಪ್ರದೇಶದ ಜನರಿಗಾಗಿ ಮಾಡಿದೆವು. ಈ ವರ್ಷ 646 ಟಿಎಂಸಿ ನೀರು ರಾಜ್ಯದಿಂದ ತಮಿಳುನಾಡಿಗೆ ಹೋಗಿದ್ದು, ಅದರಲ್ಲಿ 469 ಟಿಎಂಸಿ ನೀರು ಸಮುದ್ರ ಸೇರಿದೆ. ಅದನ್ನು ಶೇಖರಿಸಿ, ಮಂಡ್ಯ, ಮೈಸೂರು, ಹಾಸನದ ರೈತರಿಗೆ ನೀರು ನೀಡಲು ಮೇಕೆದಾಟು ಆಣೆಕಟ್ಟು ಕಟ್ಟಬೇಕಿದೆ. ಬೆಂಗಳೂರು ಜನರಿಗೆ ಕುಡಿಯುವ ನೀರು ನೀಡಲು ಪಾದಯಾತ್ರೆ ಮಾಡಿದೆವು. ಸುಮಾರು 170 ಕಿ.ಮೀ ಪಾದಯಾತ್ರೆ ಮಾಡಿದೆವು.
ಈ ಯಾತ್ರೆ ತಡೆಯಲು ನಮ್ಮ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಮಾಡಿದರು. ಅವರ ನಾಯಕರ ಮೇಲೆ ಯಾವುದೇ ಕೇಸ್ ಹಾಕಿಲ್ಲ. ನನ್ನ ಮೇಲೆ 25 ಕೇಸ್ ಹಾಕಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ, ಕರಾಳ ಕಾಯ್ದೆ ವಿರುದ್ಧ ರೈತರ ಪರವಾಗಿ ಹೋರಾಟ ಮಾಡಿದ್ದಕ್ಕೂ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಇದು ಬಿಜೆಪಿ ಸರ್ಕಾರದ ನೀತಿ. ಐಟಿ, ಇಡಿ, ಸಿಬಿಐ ಮೂಲಕ ನಮ್ಮನ್ನು ನಿಯಂತ್ರಣ ಮಾಡಬಹುದು ಎಂದು ಬಿಜೆಪಿಯವರ ಭಾವಿಸಿದ್ದರೆ ಅದು ಅವರ ಭ್ರಮೆ.

ನೀವೆಲ್ಲರೂ ಬಿಜೆಪಿ ಆಡಳಿತವನ್ನು ನೋಡಿದ್ದೀರಿ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಧಳದ ನಾಯಕರು, ಕುಮಾರಣ್ಣ ಈ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಯಾವುದೇ ಹೋರಾಟ ಮಾಡಲಿಲ್ಲ. ಸರ್ಕಾರದ ಎಲ್ಲ ಇಲಾಖೆ ಹುದ್ದೆಗಳ ನೇಮಕದಲ್ಲಿ ಹಗರಣ ನಡೆಯುತ್ತಿವೆ. ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳುವ ಪ್ರಕಾರ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಹುದ್ದೆಗೆ ಕನಿಷ್ಠ 4-5 ಕೋಟಿ ಲಂಚ ನೀಡಬೇಕಂತೆ. ನೀವು ಜೆಡಿಎಸ್ ಗೆ ಮತ ಹಾಕಿದರೆ, ಬಿಜೆಪಿಯನ್ನು ಗೆಲ್ಲಿಸಿದಂತೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ.
ನಿಮ್ಮ ಮಗನಾಗಿರುವ ನಾನು ಕಾಂಗ್ರೆಸ್ ಅಧ್ಯಕ್ಷನಾಗಿದ್ದು, ನನ್ನ ಕೈ ಬಲಪಡಿಸಲು 7ಕ್ಕೆ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡಬೇಕು. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಅದಕ್ಕೆ ನೀವು ಅವಕಾಶ ಮಾಡಿಕೊಡಬೇಕು. ನಾವೆಲ್ಲರೂ ನಿಮ್ಮ ಜತೆಯಲ್ಲಿ ನಿಂತು ಬದುಕು ಕಟ್ಟಲು ಶ್ರಮಿಸುತ್ತೇವೆ. ನಾವು ನಿಮ್ಮ ಭಾವನೆ ಜತೆ ರಾಜಕೀಯ ಮಾಡುವುದಿಲ್ಲ. ನಮಗೆ ನಿಮ್ಮ ಹೊಟ್ಟೆಪಾಡು ಮುಖ್ಯ. ಯುವಕರಿಗೆ ಉದ್ಯೋಗ ನೀಡುವುದು ಮುಖ್ಯ. ರಾಜ್ಯಕ್ಕೆ ಬಂದಿರುವ ಭ್ರಷ್ಟಾಚಾರದ ಕಳಂಕ ತೆಗೆದುಹಾಕಬೇಕು.
ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು, ಪದವಿಧರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಅವರೆಲ್ಲರೂ ದಡ್ಡರೇ? ಮಧು ಬಂಗಾರಪ್ಪ, ವೈಎಸ್ ವಿ ದತ್ತಾ, ಕೋಲಾರ ಶ್ರೀನಿವಾಸ ಗೌಡರು, ಗುಬ್ಬಿ ಶ್ರೀನಿವಾಸ್, ಕಾಂತರಾಜ್, ಮನೋಹರ್ ಸೇರಿದಂತೆ 20 ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹೆಚ್. ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದು ಮಾತು ನೀಡಿದ್ದಾರೆ. ಇವರೆಲ್ಲಾ ದಡ್ಡರೇ? ಎಂದು ನೀವು ಆಲೋಚಿಸಬೇಕು. ಜೆಡಿಎಸ್ ನಿಮ್ಮ ಮನೆಯ ಆಲದಮರವಲ್ಲ. ಚೆಲುವರಾಯ ಸ್ವಾಮಿ, ಬಂಡಿಸಿದ್ದೇಗೌಡರು, ಇವರಿಗೆಲ್ಲ ರಾಜಕೀಯ ಪ್ರಜ್ಞೆ ಇಲ್ಲವೇ? ಜೆಡಿಎಸ್ ನಿಂದ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ತೀರ್ಮಾನಿಸಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.












Click it and Unblock the Notifications