CM Post Fight: ಡಿ ಕೆ ಶಿವಕುಮಾರ್ ಸಿಎಂ ಆಗುವ ಹಾದಿ ಅಷ್ಟು ಸುಲಭವಲ್ಲ: ಯಾಕೆ ಗೊತ್ತಾ? ವಿಶ್ಲೇಷಣೆ
ಬೆಂಗಳೂರು, ಸೆಪ್ಟೆಂಬರ್ 06: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆಯ ಆರಂಭದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರ ಸಾಕಷ್ಟು ಗೊಂದಲಗಳ ನಡುವೆಯೂ ನಡೆಯುತ್ತಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ರು. ಬಳಿಕ ಹೈಕಮಾಂಡ್ ನಾಲ್ಕೈದು ದಿನಗಳ ಕಾಲ ಡಿ ಕೆ ಶಿವಕುಮಾರ್ ಅವರನ್ನ ಮನವೊಲಿಸುವಲ್ಲಿ ಯಶಸ್ಸಿಯಾದ್ರು. ಆದರೆ, ಹೈಕಮಾಂಡ್ ಮುಂದೆ ಡಿ ಕೆ ಶಿವಕುಮಾರ್ ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆದಿದೆ ಎನ್ನುವ ಮಾತು ಹಲವು ಬಾರೀ ಕೇಳಿಬಂದಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುವುದು ಕಷ್ಟ ಎಂಬ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡು ವರ್ಷಗಳು ತುಂಬಲಿದೆ. ಇದೇ ಸಂದರ್ಭದಲ್ಲಿ ಹೈಕಮಾಂಡ್ ಮುಂದೆ ಆಗಿರುವ ಒಪ್ಪಂದದಂತೆ ಮುಖ್ಯಮಂತ್ರಿ ಬದಲಾವಣೆ ಆಗಲೇ ಬೇಕು ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಹೈಕಮಾಡ್ ಮುಂದೆ ಪಟ್ಟು ಹಿಡಿಯಲಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ಅಥವಾ ಕೈಗೊಳ್ಳದಿದ್ದರೂ ಕಷ್ಟ ಎಂಬ ಇಕ್ಕಟ್ಟಿನ ಸ್ಥಿತಿಗೆ ಕಾಂಗ್ರೆಸ್ ಹೈಕಮಾಂಡ್ ಇದೆ. ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮನವೊಲಿಸುವ ಪ್ರಯತ್ನಗಳು ನಡೆದರೂ ಅದಕ್ಕೆಲ್ಲ ಸಿದ್ದರಾಮಯ್ಯ ಅವರಯ ಒಪ್ಪುವುದು ಸಾಧ್ಯವೇ ಇಲ್ಲ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡಗ ಬಲವಂತವಾಗಿ ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಸರ್ಕಾರವೇ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವುದಿಲ್ಲ.
ಈಗಾಗಲೇ ಕಾಂಗ್ರೆಸ್ ಶಕ್ತಿ ರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿರುವ ಹಿನ್ನಲೆಯಲ್ಲಿ ಆ ಪಕ್ಷವನ್ನು ನಂಬಿ ಕೂರಲು ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ತಯಾರಿಲ್ಲ. ಪದಚ್ಯುತಿಯ ಸನ್ನಿವೇಶ ಎದುರಾದರೆ ಅವರ ಬೆಂಬಲಿಗ ಶಾಸಕರು ಒಂದಷ್ಟು ಮಂದಿ ಬಿಜೆಪಿ ಸೇರಿ ಮುಂದಿನ ದಾರಿ ಕಂಡುಕೊಳ್ಳುವ ಆಲೋಚನೆಯಲ್ಲಿದ್ದಾರೆ. ಮತ್ತೊಂದು ಕಡೆ ಒಪ್ಪಂದದಂತೆ ಅಧಿಕಾರ ಹಸ್ತಾಂತರ ಆಗದಿದ್ದರೆ ಮುಂದಿನ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ ಎಂದು ಡಿ.ಕೆ.ಶಿವಕುಮಾರ್ ಇತ್ತೀಚೆಗೆ ದಿಲ್ಲಿ ವರಿಷ್ಟರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನವೆಂಬರ್ ತಿಂಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭವಿಷ್ಯ ಏನೆಂಬುದೇ ಸದ್ಯ ಪ್ರಶ್ನೆಯಾಗಿದೆ.
ಡಿಕೆಶಿ ಸಿಎಂ ಆಗುವ ಕನಸು ಅಷ್ಟು ಸುಲಭವಲ್ಲ
* ಸಿದ್ದರಾಮಯ್ಯ ಬೆಂಬಲ ಇಲ್ಲ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೈ ಹಾಕಿದ್ದೇ ಆದರೆ ರಾಜ್ಯ ಸರ್ಕಾರ ಪತನಗೊಳ್ಳುವುದಷ್ಟೇ ಅಲ್ಲ. ಪಕ್ಷವೂ ಇಬ್ಭಾಗ ಆಗಲಿದೆ. ಹೀಗಾದಾಗ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿ ಡಿ ಕೆ ಶಿವಕುಮಾರ್ ಬಣ ಹಾಗೂ ಸಿದ್ದರಾಮಯ್ಯ ಬಣ ರಾಜಕೀಯ ನಡೆಯುತ್ತಲೇ ಇದೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಚರ್ಚೆಯಾಗಿದೆ ಎಂಬ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ, ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಬಹಿರಂಗವಾಗಿ ತಿಳಿಸಿದ್ದಾರೆ. ಈ ಬೆಳವಣಿಗೆಯನ್ನ ಗಮನಿಸಿದರೆ ಸಿಎಂ ಆಗುವ ಕನಸು ಕಂಡಿರುವ ಡಿ ಕೆ ಶಿವಕುಮಾರ್ ಗೆ ಸಿದ್ದರಾಮಯ್ಯ ಬೆಂಬಲ ಇಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
* ಸಿದ್ದರಾಮಯ್ಯ ಒಪ್ಪಿದರೂ, ಶಾಸಕರ ಒಪ್ಪುವುದು ಕಷ್ಟ
ಮುಂದಿನ ಚುನಾವಣೆ ತನ್ನ ನಾಯಕತ್ವದಲ್ಲೇ ನಡೆಯುವುದಾಗಿ ಡಿ ಕೆ ಶಿವಕುಮಾರ್ ಈ ಹಿಂದೆ ಬಹಿರಂಗವಾಗೇ ಹೇಳಿರುವುದು ಕಾಂಗ್ರೆಸ್ ನಲ್ಲಿ ಹಲವು ತಲ್ಲಣಗಳಿಗೆ ಕಾರಣವಾಗಿತ್ತು. ಇನ್ನೂ ಡಿ ಕೆ ಶಿವಕುಮಾರ್ ಬಣದ ಕೆಲ ಶಾಸಕರು ಡಿ ಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಮಾತನ್ನ ಬಹಿರಂಗವಾಗಿ ಹೇಳುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಅವರ ಆಪ್ತ ಶಾಸಕರು ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುರೆಯುತ್ತಾರೆ ಎಂದು ಹೇಳುವ ಮೂಲಕ ಡಿಕೆಶಿ ಬಣಕ್ಕೆ ಟಾಂಗ್ ಕೊಟ್ಟಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂದು 100 ಹೆಚ್ಚು ಜನ ಶಾಸಕರು ಹೈಕಮಾಂಡ್ ಗೆ ತಿಳಿಸಿದ್ದರು. ಇನ್ನೂ ಡಿ ಕೆ ಶಿವಕುಮಾರ್ ಅವರಿಗೆ ಕೇವಲ 20 ರಿಂದ 30 ಜನ ಶಾಸಕರು ಮಾತ್ರ ಬೆಂಬಲವನ್ನ ಸೂಚಿಸಿದ್ದರು. ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ಡಿ ಕೆ ಶಿವಕುಮಾರ್ ಸಿಎಂ ಆಗಲಿ ಎಂದು ಸಿದ್ದರಾಮಯ್ಯ ಅವರು ಒಪ್ಪಿದರೂ ಸಹ ಬಹುತೇಕ ಶಾಸಕರು ತೀವ್ರ ವಿರೋಧವನ್ನ ವ್ಯಕ್ತಪಡಿಸಲಿದ್ದಾರೆ ಎನ್ನಲಾಗಿದೆ.
* ಹೈಕಮಾಂಡ್ನಲ್ಲೂ ಎರಡು ಬಣ
ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹೀಗೆ ಎರಡು ಬಣ ರಾಜಕೀಯವಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಈಗ ಇದೇ ರೀತಿ ಹೈಕಮಾಂಡ್ನಲ್ಲಿಯೂ ಎರಡು ಬಣಗಳಿವೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಹೈಕಮಾಂಡ್ ಸಹ ಎರಡು ಬಣವಾಗಿದೆ ಎಂಬ ಸುದ್ದಿ ಹಬ್ಬಿದೆ. ಈ ಹಿಂದೆ ದೆಹಲಿಗೆ ಹೋದ ಸಂದರ್ಭದಲ್ಲಿ ಸಿದ್ದರಾಮಯ್ಯ ಕೆಲವು ಸಚಿವರ ಜೊತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಅಲ್ಲದೇ ಜೊತೆಯಿದ್ದ ಸಚಿವರನ್ನು ಹೊರಗೆ ಕಳಿಸಿ ರಾಹುಲ್ ಗಾಂಧಿ ಜೊತೆ 8 ನಿಮಿಷಗಳ ಕಾಲ ಸಿದ್ದರಾಮಯ್ಯ ರಹಸ್ಯ ಮಾತುಕತೆ ನಡೆಸಿದ್ದರು. ಮೊದಲಿನಿಂದಲೂ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಅವರ ಬೆಂಬಲವಿದೆ. ಇನ್ನೂ ಡಿ ಕೆ ಶಿವಕುಮಾರ್ ಗೆ ಮಲ್ಲಿಕಾರ್ಜುನ್ ಖರ್ಗೆ ಅವರ ಬೆಂಬಲ ಇದೆ ಎಂದು ಹೇಳಲಾಗಿದೆ.
* ಬಿಜೆಪಿಯತ್ತ ಡಿ ಕೆ ಶಿವಕುಮಾರ್ ಎಂಬ ಚರ್ಚೆ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹಿಂದುತ್ವದ ಸಿದ್ದಾಂತಗಳಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ. ಈ ಹಿಂದೆ ಪ್ರಯಾಗರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ ಕುಟುಂಬದ ಸದಸ್ಯರೊಂದಿಗೆ ಭಾಗವಹಿಸಿದ್ದು, ಅಲ್ಲಿಂದ ವಾಪಸು ಬಂದ ನಂತರ ಕುಂಭ ಮೇಳದ ವ್ಯವಸ್ಥೆಗಳ ಬಗ್ಗೆ ಬಿಜೆಪಿ ಸರ್ಕಾರವನ್ನು ಹೊಗಳಿದ್ದು. ನಂತರ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮದಲ್ಲಿ ಶಿವರಾತ್ರಿ ಆಚರಣೆ ನೆಪದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ರನ್ನು ಭೇಟಿಯಾಗಿದ್ದು, ಅಲ್ಲದೇ ಕಳೆದ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿಯೂ ಡಿ ಕೆ ಶಿವಕುಮಾರ್ ಸದನದಲ್ಲಿ ಆರ್ ಎಸ್ ಎಸ್ ಗೀತೆ ಹಾಡುವ ಮೂಲಕ ಹೈಕಮಾಂಡ್ ಕೋಪಕ್ಕೆ ಗುರಿಯಾಗಿದ್ದರು. ಅಲ್ಲದೇ ಯತ್ನಾಳ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕರು ಡಿ ಕೆ ಶಿವಕುಮಾರ್ ಬಿಜೆಪಿಗೆ ಹೋಗಬಹುದು ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಹಲವು ಚಟುವಟಿಕೆಗಳನ್ನು ಗಮನಿಸಿದರೆ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಭವಿಷ್ಯದಲ್ಲಿ ಅವರು ಬಿಜೆಪಿ ಸೇರಿದರೂ ಆಶ್ಚರ್ಯೇನೂ ಇಲ್ಲ ಎಂಬ ವದಂತಿಗಳು ಹಬ್ಬಿವೆ.












Click it and Unblock the Notifications