ಅಭಿಮಾನಿಗಳು, ಕಾರ್ಯಕರ್ತರಿಗೆ ಡಿಕೆಶಿ ಮಾಡಿದ ಮನವಿ ಏನು?
ಬೆಂಗಳೂರು, ಅಕ್ಟೋಬರ್ 27 : "ವಕೀಲರನ್ನು ಭೇಟಿ ಮಾಡುವುದಿದೆ. ಕುಟುಂಬದ ಜೊತೆ ಸಮಯ ಕಳೆಯಬೇಕು. ಆರೋಗ್ಯ ಸಮಸ್ಯೆ ಇದೆ. ಎರಡು ದಿನಗಳ ಕಾಲ ಕಾರ್ಯಕರ್ತರು ಸಹಕಾರ ನೀಡಬೇಕು" ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಮನವಿ ಮಾಡಿದರು.
ಭಾನುವಾರ ಸದಾಶಿವ ನಗರದ ನಿವಾಸದಲ್ಲಿ ಡಿ. ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದರು. "ನಾಡಿನ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಶಾಸಕರು, ಮುಖಂಡರು, ಮಾಜಿ ಅಧ್ಯಕ್ಷರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ ಎಲ್ಲರಿಗೂ ಆಬಾರಿ" ಎಂದು ಹೇಳಿದರು.
"ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ದಾರೆ. ಯಾವ ಜನ್ಮದ ಪುಣ್ಯವೋ ತಿಳಿದಿಲ್ಲ. ಅವರ ವಿಶ್ವಾಸ ಉಳಿಸಿಕೊಳ್ಳುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ನಾನು ಮನವಿ ಮಾಡುವೆ" ಎಂದರು.

"ಬೆನ್ನು ನೋವಿದೆ, ಕುಳಿತುಕೊಳ್ಳಲು ಆಗದಷ್ಟು ನೋವಿದೆ. ಪರೀಕ್ಷೆಗೆ ಒಳಗಾಗಬೇಕು ಇಂದು ಮನೆಯ ಬಳಿ ಬಂದವರಿಗೆ ಇಲ್ಲ ಎನ್ನಲಾಗಲಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಸಹಕಾರ ನೀಡಬೇಕು" ಎಂದು ಕರೆ ನೀಡಿದರು.
"ಸೋಮವಾರ ಅಮಾವಾಸ್ಯೆ ಇದೆ. ಗೌರಿ ಹಬ್ಬದ ಸಂದರ್ಭದಲ್ಲಿ ತಂದೆಯ ಕಾರ್ಯ ಮಾಡಲು ಅವಕಾಶ ಸಿಗಲಿಲ್ಲ. ಆದ್ದರಿಂದ, ನಾಳೆ ದೊಡ್ಡ ಆಲದಹಳ್ಳಿಗೆ ಹೋಗುವೆ. ಇಂದು ನೊಣವಿನಕೆರೆಗೆ ಭೇಟಿ ನೀಡುವೆ. ನಂಜವಧೂತ ಸ್ವಾಮೀಜಿಗಳನ್ನು ಭೇಟಿ ಮಾಡುವೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
"ಉಪ ಚುನಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಪಕ್ಷದ ಅಧ್ಯಕ್ಷರು ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಅಧ್ಯಕ್ಷರು ಯಾವ ಪ್ಲಾನ್ ಮಾಡಿದ್ದಾರೆ ತಿಳಿದಿಲ್ಲ. ನಾನು ಇಲ್ಲಿನ ಮತ್ತು ದೆಹಲಿ ನಾಯಕರ ಜೊತೆ ರಾಜಕೀಯ ಮಾತನಾಡಿಲ್ಲ" ಎಂದು ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
"ನನ್ನ ಬಂಧನವಾದಾಗ ವಿವಿಧ ಪಕ್ಷಗಳ ಮುಖಂಡರು ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ. ಆ ಬಗ್ಗೆ ಪತ್ರಿಕಾ ಹೇಳಿಕೆಗಳನ್ನು ತರಿಸಿಕೊಂಡಿದ್ದೇನೆ. ಎಲ್ಲದಕ್ಕೂ ಸೂಕ್ತ ಕಾಲದಲ್ಲಿ ಉತ್ತರ ನೀಡುತ್ತೇನೆ" ಎಂದರು.












Click it and Unblock the Notifications