Kichcha Sudeep; ಸುದೀಪ್ ಭೇಟಿ ಮಾಡಿ ಒಟ್ಟಿಗೆ ಭೋಜನ ಸವಿದ ಡಿಕೆಶಿ!
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕನ್ನಡ ನಟ ಕಿಚ್ಚ ಸುದೀಪ್ ಭೇಟಿಯಾಗಿ ಮಾತುಕತೆ ನಡೆಸಿದರು.
ಬೆಂಗಳೂರು, ಫೆಬ್ರವರಿ 03; ಕರ್ನಾಟಕದಲ್ಲಿ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿದೆ. ವಿವಿಧ ಪಕ್ಷಗಳು ಪ್ರಚಾರದ ತಂತ್ರಗಳನ್ನು ರೂಪಿಸುತ್ತಿವೆ. ಸಿನಿಮಾ ನಟರನ್ನು ಪ್ರಚಾರಕ್ಕೆ ಕರೆತರಲು ಪ್ರಯತ್ನವನ್ನು ನಡೆಸಿವೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಟ ಕಿಚ್ಚ ಸುದೀಪ್ ಭೇಟಿ ಮಾಡಿದರು. ಗುರುವಾರ ರಾತ್ರಿ ಜೆ. ಪಿ. ನಗರದಲ್ಲಿ ನಿವಾಸಕ್ಕೆ ಅವರು ಭೇಟಿ ನೀಡಿದ್ದರು.
ಕಿಚ್ಚ ಸುದೀಪ್ ಜೊತೆ ಭೋಜನ ಸವಿದ ಡಿ. ಕೆ. ಶಿವಕುಮಾರ್ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದರು.

ರಾಜ್ಯ ರಾಜಕೀಯ ವಲಯದಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಹಿನ್ನಲೆಯಲ್ಲಿ ಡಿ. ಕೆ. ಶಿವಕುಮಾರ್ ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.
ಸುದೀಪ್ ಭೇಟಿ ವೇಳೆ ಡಿ. ಕೆ. ಶಿವಕುಮಾರ್, ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಸುದೀಪ್ ಆಹ್ವಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಸಾಲು-ಸಾಲು ಚುನಾವಣಾ ಪ್ರಚಾರ ಕಾರ್ಯಕ್ರಮಗಳಿವೆ. ಹೀಗಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.
ನಟಿ ರಮ್ಯಾ ಮತ್ತು ಸಂಸದ ರಾಹುಲ್ ಗಾಂಧಿ ಮೂಲಕ ಸುದೀಪ್ರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದ್ದವು. ವಾಲ್ಮೀಕಿ ಸಮುದಾಯಕ್ಕೆ ಕಿಚ್ಚ ಸುದೀಪ್ ಸೇರಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಸಮುದಾಯದ ಹಲವು ಜನರಿದ್ದಾರೆ. ಆದ್ದರಿಂದ ಕಾಂಗ್ರೆಸ್ ಈ ಮತಗಳ ಮೇಲೆ ಕಣ್ಣಿಟ್ಟಿದೆ.
ಕಿಚ್ಚ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಆಪ್ತರು. ಮುಖ್ಯಮಂತ್ರಿಯಾಗಿ ಅವರು ಆಯ್ಕೆಯಾದಾಗ ಟ್ವೀಟ್ ಮಾಡಿ ಶುಭಾಶಯ ಸಲ್ಲಿಸಿದ್ದರು. ಬೇರೆ ಬೇರೆ ಪಕ್ಷಗಳಲ್ಲಿ ಸುದೀಪ್ಗೆ ಹಲವು ಸ್ನೇಹಿತರು ಇದ್ದಾರೆ.
ಪಕ್ಷಕ್ಕೆ ಬಂದರೆ ಸ್ವಾಗತ; ಕಿಚ್ಚ ಸುದೀಪ್, ಡಿ. ಕೆ. ಶಿವಕುಮಾರ್ ಭೇಟಿ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಸಿನಿಮಾ ನಟರು ರಾಜಕೀಯದಿಂದ ದೂರ ಉಳಿದಿರುತ್ತಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸುದೀಪ್ ಕಾಂಗ್ರೆಸ್ ಪಕ್ಷ ಸೇರುವುದಾದರೆ ಸ್ವಾಗತ" ಎಂದು ಹೇಳಿದರು.












Click it and Unblock the Notifications