ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ದಿನವೇ ಕೂಡಿ ಬರುತ್ತಿಲ್ಲ: 2ನೇ ಬಾರಿಯೂ ವಿಘ್ನ
ಬೆಂಗಳೂರು, ಜೂನ್ 1: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನಿಯೋಜಿತರಾಗಿ ಎಂಬತ್ತು ದಿನದ ಮೇಲಾದರೂ, ಪ್ರಮಾಣವಚನ ಸೀಕರಿಸಲು ಡಿ.ಕೆ.ಶಿವಕುಮಾರ್ ಗೆ ಇನ್ನೂ ದಿನಗೂಡಿ ಬಂದಿಲ್ಲ.
Recommended Video
ಅಧ್ಯಕ್ಷರಾಗಿ ನಿಯೋಜಿತರಾದ ಮೇಲೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹುರುಪನ್ನು ತರುವಲ್ಲಿ ಯಶಸ್ವಿಯಾಗಿರುವ ಡಿಕೆಶಿ, ಇದೇ ಬರುವ ಭಾನುವಾರ (ಜೂನ್ 7) ಪ್ರಮಾಣವಚನ ಸ್ವೀಕರಿಸಬೇಕಿತ್ತು.
ಇದು ಪ್ರಮಾಣವಚನ ಸ್ವೀಕರಿಸಲು ನಿಗದಿ ಪಡಿಸಿದ ಎರಡನೇ ದಿನಾಂಕವಾಗಿತ್ತು. ಮೊದಲು, ಮೇ 24ಕ್ಕೆ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದರು. ಆದರೆ, ಭಾನುವಾರದ ಕರ್ಫ್ಯೂ ಇದ್ದಿದ್ದರಿಂದ ಇದು ರದ್ದಾಗಿತ್ತು.
"ಪ್ರಮಾಣವಚನ ಸ್ವೀಕರಿಸದೇ ಇದ್ದರೂ, ನನ್ನ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ"ಎಂದಿರುವ ಡಿಕೆಶಿ, ಎರಡನೇ ಬಾರಿಯೂ ಅನುಮತಿ ಸಿಗದೇ ಇದ್ದಿದ್ದಕ್ಕೆ ಸರಕಾರದ ವಿರುದ್ದ ಕೆಂಡಾಮಂಡಲವಾಗಿದ್ದಾರೆ.

ಭಾನುವಾರದ ಕರ್ಫ್ಯೂ
"ಮೇ 24ರಂದು ಪ್ರಮಾಣವಚನ ಸ್ವೀಕರಿಸಲು ದಿನಾಂಕ ನಿಗದಿಯಾಗಿತ್ತು. ಭಾನುವಾರದ ಕರ್ಫ್ಯೂ ಇದ್ದಿದ್ದರಿಂದ, ಆ ಕಾರ್ಯಕ್ರಮ ನಡೆಯಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಪಕ್ಷಕ್ಕೆ ನಂಬಿಕೆ ಇರುವುದರಿಂದ, ಸರಕಾರದ ನಿರ್ಧಾರವನ್ನು ನಾವು ಪ್ರತಿಭಟಿಸಲಿಲ್ಲ"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಡಿಜಿಗೆ ಅನುಮತಿ ಕೋರಿ ಪತ್ರ ಬರೆದಿದ್ದೆ
"ಜೂನ್ ಏಳರಂದು ಪ್ರಮಾಣವಚನ ಸಮಾರಂಭ ನಡೆಸಲು ಮುಖ್ಯಮಂತ್ರಿಗಳು ಮತ್ತು ಡಿಜಿಗೆ ಅನುಮತಿ ಕೋರಿ ಪತ್ರ ಬರೆದಿದ್ದೆ. ಸರಕಾರ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಿಲ್ಲ. ಜೂನ್ ಎಂಟರವರೆಗೆ ಸಭೆ ನಡೆಸಲು ಅನುಮತಿ ಇಲ್ಲ"ಎಂದು ಸರಕಾರ ಹೇಳಿದೆ.

ರಾಜಕೀಯ ಸಭೆ ನಡೆಸಲು ಅನುಮತಿ ಇಲ್ಲ
"ಕೇಂದ್ರ ಸರಕಾರದ ಮಾರ್ಗಸೂಚಿಯಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ಇಲ್ಲ ಎಂದು ಸರಕಾರ ಹೇಳಿದೆ. 150 ಜನರು ಸೇರಲು ಅನುಮತಿ ಕೇಳಿದ್ದೆ. ಸರಕಾರದ ಈ ನಿರ್ಧಾರದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ"ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಸರಕಾರದ ತಪ್ಪು ನಿರ್ಧಾರದ ವಿರುದ್ದ ಪ್ರತಿಭಟನೆಯನ್ನು ನಡೆಸಿದ್ದೇವೆ
"ಕೊರೊನಾದ ಈ ಸಂಕಷ್ಟದ ವೇಳೆ ಸರಕಾರದ ತಪ್ಪು ನಿರ್ಧಾರದ ವಿರುದ್ದ ಪ್ರತಿಭಟನೆಯನ್ನು ನಡೆಸಿದ್ದೇವೆ. ಪ್ರಮಾಣವಚನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ನಡೆಸಲು ಯೋಚಿಸಿದ್ದೆವು. ಸರಕಾರ ಅನುಮತಿ ನೀಡದೇ ಇರುವುದರ ಹಿಂದೆ ರಾಜಕೀಯ ಹುನ್ನಾರವಿದೆ"ಎಂದು ಡಿಕೆಶಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications