Get Updates
Get notified of breaking news, exclusive insights, and must-see stories!

ಹುಬ್ಬಳ್ಳಿ ಹಿಂಸಾಚಾರ: ಬಿಜೆಪಿಯಿಂದ 'ಕೈ'ವಾಡದ ಆರೋಪ- ಡಿಕೆಶಿ

ಬೆಂಗಳೂರು, ಏ. 20: ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಕೋಮು ಹಿಂಸಾಚಾರ ಘಟನೆಯ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿ ಎನ್ನುತ್ತಾ ಬಿಜೆಪಿಯನ್ನ ಕುಟುಕಿದ್ದಾರೆ. ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದವರು ಭಾಗಿಯಾಗಿದ್ದರೆ ಬಂಧಿಸಲಿ ಎಂದು ಸವಾಲು ಹಾಕಿದ ಅವರು, ಈವರೆಗೆ ಘಟನೆ ಸಂಬಂಧ ಕಾಂಗ್ರೆಸ್ ನಾಯಕರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದರು.

"ಹುಬ್ಬಳ್ಳಿ ಗಲಭೆ ವಿಚಾರವಾಗಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರು ಮತ್ತು ಸಂಸದರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರು ಮಾತನಾಡುತ್ತಾರೆ ಎಂದು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ರಾಜ್ಯದಲ್ಲಿ ಕಾನೂನು ಇದ್ದು ಅದರಂತೆ ನಡೆದುಕೊಳ್ಳಲಿ" ಎಂದು ಡಿಕೆ ಶಿವಕುಮಾರ್ ಹೇಳಿದರು.

ಹುಬ್ಬಳ್ಳಿ ಗಲಭೆ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಮೈಕ್ ಹಿಡಿದು ಜನರಿಗೆ ಪ್ರಚೋದನೆ ಮಾಡುತ್ತಿದ್ದರು ಎಂಬುದು ಬಿಜೆಪಿಯವರ ಆರೋಪವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, "ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಅಂತ ಗಾದೆ ಮಾತಿದೆ. ಏನೇ ಆದರೂ ಬಿಜೆಪಿಯವರು ಕಾಂಗ್ರೆಸ್ ಮೇಲೆ ಹಾಕುತ್ತಾರೆ. ಪೊಲೀಸ್‌ನವರ ಮನವಿ ಮೇರೆಗೆ ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫ್ ಅವರು ಸ್ಥಳಕ್ಕೆ ಹೋಗಿದ್ದರು. ಇಲ್ಲದಿದ್ದರೆ ಪೊಲೀಸ್ ಜೀಪ್ ಮೇಲೆ ನಿಂತು ಮೈಕ್ ಹಿಡಿದು ಮಾತನಾಡಲು ಸಾಧ್ಯವೇ? ಅವರಿಗೂ ಕಲ್ಲೇಟು ಬಿದ್ದಿದ್ದು, ಕೈಗೆ ಗಾಯವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ" ಎಂದು ತಿಳಿಸಿದರು.

"ನಿನ್ನೆ ನಾನೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮಾತನಾಡಿ, ವಾಸ್ತವಾಂಶವನ್ನು ತಿಳಿದಿದ್ದೇನೆ. ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ಮಾಡುವವರ ರಕ್ಷಣೆಗೆ ನಾವು ಹೋಗುವುದಿಲ್ಲ. ಅದೇ ಸರ್ಕಾರದ ಮಂತ್ರಿಗಳು, ಮುಖ್ಯಮಂತ್ರಿಗಳು ಆರಂಭದಿಂದಲೂ ನೈತಿಕ ಪೊಲೀಸ್‌ಗಿರಿ ಮೊಟಕು ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈ ರಾಜ್ಯದಲ್ಲಿ ಕಾನೂನು ಇದ್ದು, ಅದರಂತೆ ನಡೆದುಕೊಳ್ಳಲಿ. ಇವರು ಕಾನೂನು ಎಲ್ಲಿ ಸಮನಾಗಿ ಪಾಲನೆ ಮಾಡಿದ್ದಾರೆ? ನಮ್ಮ ಮೇಲೆ ಪ್ರಕರಣ ದಾಖಲಿಸಿ, ಈಶ್ವರಪ್ಪನವರ ಜತೆ ಮೆರವಣಿಗೆ ಹೋದವರ ಮೇಲೆ ಕೇಸ್ ದಾಖಲಿಸಿಲ್ಲ. ಶಿವಮೊಗ್ಗದಲ್ಲಿ ಸೆಕ್ಷನ್ 144 ಉಲ್ಲಂಘಿಸಿದಾಗ ಅವರ ಮೇಲೆ ಏಕೆ ಪ್ರಕರಣ ದಾಖಲಿಸಲಿಲ್ಲ? ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್ ಅಲೆಸಿ, ಜೈಲಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಆಯ್ತು ಅವರು ಏನು ಮಾಡುತ್ತಾರೋ ಮಾಡಲಿ, ನೋಡೋಣ" ಎಂದು ಸವಾಲು ಹಾಕಿದರು.

 ಸಂತೋಷ್ ಆತ್ಮಹತ್ಯೆ ಪ್ರಕರಣ: ಪೊಲೀಸ್ ತನಿಖೆ ಹಿನ್ನಡೆ:

ಸಂತೋಷ್ ಆತ್ಮಹತ್ಯೆ ಪ್ರಕರಣ: ಪೊಲೀಸ್ ತನಿಖೆ ಹಿನ್ನಡೆ:

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು, "ಈ ಪ್ರಕರಣದ ತನಿಖೆ ನಡೆಯುವ ಮುನ್ನವೇ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಅವರು ಕ್ಲೀನ್ ಚಿಟ್ ಕೊಟ್ಟ ನಂತರ ಯಾವ ಪೊಲೀಸ್ ಅಧಿಕಾರಿಗಳು ತಾನೇ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಾರೆ. ಸರ್ಕಾರ ಆರೋಪಿಯನ್ನು ರಕ್ಷಿಸುತ್ತಿದೆ. ಈಶ್ವರಪ್ಪನವರ ವಿರುದ್ಧ ದೂರು ದಾಖಲಾಗಿರುವ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕು. ಸಂತೋಷ್ ಅವರು ಕೇಂದ್ರ ಸಚಿವರು, ಪ್ರಧಾನಿ, ಮುಖ್ಯಮಂತ್ರಿಗಳು ಹಾಗೂ ಯಡಿಯೂರಪ್ಪನವರಿಗೆ ಪತ್ರ ಬರೆದು ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ಅವರು ದೆಹಲಿಯಲ್ಲಿ ಸುದ್ದಿವಾಹಿನಿಗಳಿಗೆ ಸಂದರ್ಶನವನ್ನು ಕೊಟ್ಟಿದ್ದರು. ಅದರಲ್ಲಿ ಅನೇಕ ವಿಚಾರಗಳು ಬಂದಿದ್ದವು" ಎಂದು ಹೇಳಿದರು.

"ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಬದಲು, ಆತನ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಈ 40 % ಕಮಿಷನ್ ಕೇವಲ ಈ ಒಬ್ಬ ಗುತ್ತಿಗೆದಾರನ ಆರೋಪವಲ್ಲ, ರಾಜ್ಯದ 2 ಲಕ್ಷ ಗುತ್ತಿಗೆದಾರರು ಇರುವ ಸರ್ಕಾರಿ ನೋಂದಣಿಯಾಗಿರುವ ಸಂಘದ ಆರೋಪ. ಮೇವು ಪೂರೈಕೆ, ಬಿಬಿಎಂಪಿ ಕಸ, ಮಠಾಧೀಶರ ಅನುದಾನ ಎಲ್ಲ ವಿಚಾರದಲ್ಲೂ 40 % ಕಮಿಷನ್ ಕೇಳಿ ಬರುತ್ತಿದೆ. ಇದು ರಾಜ್ಯದ ಪ್ರತಿ ಹಳ್ಳಿಗೂ ಹಬ್ಬಿದ್ದು, ಈ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದೆ" ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.

 ದಿಂಗಾಲೇಶ್ವರ ಶ್ರೀಗಳಿಗೆ ಬೆಂಬಲ:

ದಿಂಗಾಲೇಶ್ವರ ಶ್ರೀಗಳಿಗೆ ಬೆಂಬಲ:

ದಿಂಗಾಲೇಶ್ವರ ಸ್ವಾಮೀಜಿಗಳು ಮಾಡಿರುವ ಕಮಿಷನ್ ಆರೋಪದ ಹಿಂದೆ ಕಾಂಗ್ರೆಸ್ ಇದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಪ್ರಸ್ತಾಪಿದಾಗ, ‘ಮೊದಲು ಬಿಜೆಪಿಯವರು ತಮ್ಮ ಮೇಲಿರುವ ಆರೋಪದಿಂದ ಹೊರಬರಲಿ. ಸ್ವಾಮೀಜಿ ಅವರು ಬಹಳ ವಿಚಾರವಂತರು, ಪ್ರಜ್ಞಾವಂತರಿದ್ದಾರೆ. ಅಂತಹವರು ಈ ಆರೋಪ ಮಾಡಿದ್ದಾರೆ. ಅವರಿಗಾಗಿರುವ ನೋವು, ಅನುಭವ ಹೇಳಿಕೊಂಡಿದ್ದಾರೆ. ನನ್ನ ಬಳಿಯೂ ಅನೇಕ ಸ್ವಾಮೀಜಿಗಳು ಈ ಬಗ್ಗೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರದ 40 % ಕಮಿಷನ್ ವಿಚಾರ ಈಗ ಜಗಜ್ಜಾಹೀರವಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಾಗಲೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ, ಅವರ ಹಾಗೂ ರಾಜ್ಯದ ಮರ್ಯಾದೆ ಉಳಿಯುತ್ತಿತ್ತು. ಈಗ ಎಲ್ಲರ ಮರ್ಯಾದೆ ಬೀದಿಪಾಲಾಗಿದೆ ಎಂದು ಅವರು ವ್ಯಂಗ್ಯ ಮಾಡಿದರು.

ದಿಂಗಾಲೇಶ್ವರ ಸ್ವಾಮೀಜಿಗಳು ಡಿ.ಕೆ. ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ, ಅವರು ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದ್ದು, ಅವರ ಕುಮ್ಮಕ್ಕಿನಿಂದಲೇ ಇಂತಹ ಹೇಳಿಕೆ ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ ಅವರು, "ನಮ್ಮ ಮನೆಗೆ ಬಂದವರೆಲ್ಲಾ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡುತ್ತಾರೆ. ಈಶ್ವರಪ್ಪನವರಿಗೆ ಒಳ್ಳೆಯದಾಗಲಿ ಎಂದು ಧೈರ್ಯ ತುಂಬಲು ಸ್ವಾಮೀಜಿಗಳು ಅವರ ಮನೆಗೂ ಭೇಟಿ ನೀಡಿದ್ದರು. ಹಾಗೆಂದು ಅವರನ್ನು ಸಿಎಂ ಮಾಡಲು ಹೋಗಿದ್ದರು ಎಂದು ಹೇಳಲು ಸಾಧ್ಯವೇ? ಸುಮ್ಮನೇ ನಿಮ್ಮಷ್ಟಕ್ಕೇ ನೀವೇ ಹೊಸ ವಿಚಾರ ಸೃಷ್ಟಿಸುತ್ತೀರಿ" ಎಂದರು.

 ಮಠಾಧೀಶರ ನೋವು:

ಮಠಾಧೀಶರ ನೋವು:

2023 ರ ಚುನಾವಣೆಯಲ್ಲಿ 50 ಸ್ವಾಮೀಜಿಗಳು ಸ್ಪರ್ಧೆ ಮಾಡುವ ವಿಚಾರವಾಗಿ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, "ವಿವಿಧ ಮಠಗಳ ಸ್ವಾಮೀಜಿಗಳ ಧ್ವನಿ ಹೊರಬರುತ್ತಿವೆ. ಈ ಹಿಂದೆ ಅವರನ್ನು ರಾಜಕೀಯಕ್ಕೆ ಬಳಿಸಿಕೊಂಡು ಈಗ ಅವರಿಗೆ ಬಿಜೆಪಿ ಸರ್ಕಾರ ನೋವುಂಟು ಮಾಡಿದೆ. ಅವರಿಗೆ ನೀಡುವ ಅನುದಾನದಲ್ಲಿ 30% ಕಮಿಷನ್ ಕೇಳಲಾಗುತ್ತಿದೆ. ಹೀಗಾಗಿ ಮಠಾಧೀಶರುಗಳು ನೋವಿನಿಂದ ಈ ರೀತಿ ಧ್ವನಿ ಎತ್ತುತ್ತಿದ್ದಾರೆ. ಇವೆಲ್ಲಕ್ಕೂ ಬಿಜೆಪಿ ನಾಯಕರು ಉತ್ತರಿಸಬೇಕು" ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದರು.

 ದ್ವೇಷದ ಬುಲ್‌ಡೋಜರ್:

ದ್ವೇಷದ ಬುಲ್‌ಡೋಜರ್:

ದೆಹಲಿ, ಉತ್ತರ ಪ್ರದೇಶ ರೀತಿಯಲ್ಲೇ ಬುಲ್ಡೋಜರ್ ಮಾದರಿ ಬೇಕು ಎಂದು ಯತ್ನಾಳ್ ಹಾಗೂ ಸಿ.ಟಿ ರವಿ ಅಭಿಪ್ರಾಯಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ. ಅನೇಕ ವರ್ಷಗಳಿಂದ ವಸತಿ ಇಲ್ಲದ ನಿರಾಶ್ರಿತರು ಸರ್ಕಾರಿ ಜಾಗದಲ್ಲಿ ವಾಸುತ್ತಿದ್ದಾರೆ. ಆದರೆ ಅವರನ್ನು ತೆರವುಗೊಳಿಸಲು ಯಾವ ರೀತಿ ಪರ್ಯಾಯ ವ್ಯವಸ್ಥೆ ಮಾಡಬೇಕು, ಹೇಗೆ ಕ್ರಮ ಕೈಗೊಳ್ಳಬೇಕು ಎಂದು ಕಾನೂನಿದೆ. ಆದರೆ ರಾಜಕೀಯ ಉದ್ದೇಶಕ್ಕೆ, ದ್ವೇಷದಿಂದ ಅವರ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಕೆಡವಿ ಕೆಟ್ಟ ಸಂದೇಶ ರವಾನಿಸಲಾಗುತ್ತಿದೆ. ದೇಶದಲ್ಲಿ ಜನ ಭಯದಿಂದ ಬದುಕುವಂತೆ ಮಾಡಲಾಗುತ್ತಿದೆ. ದೇಶದಲ್ಲಿ ಹಬ್ಬಲಾಗುತ್ತಿರುವ ಕೋಮುದ್ವೇಷ ಖಂಡನೀಯ. ನಾವು ಎಲ್ಲರ ಭಾವನೆಗಳನ್ನು ಗೌರವಿಸಬೇಕು ಎಂದು ನಮ್ಮ ರಾಷ್ಟ್ರೀಯ ನಾಯಕರು ತಿಳಿಸಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯದ ಸೂಚನೆಗಳನ್ನು ಪಾಲಿಸಬೇಕು. ಇನ್ನು ಬೀದಿ ವ್ಯಾಪಾರಿಗಳಿಗೂ ಅವಕಾಶ ನೀಡಬೇಕು ಎಂದು ತೀರ್ಪುಗಳಿವೆ. ಅದರಂತೆ ನಡೆದುಕೊಳ್ಳಬೇಕು" ಎಂದು ತಿಳಿಹೇಳಿದರು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+