ಎ ಮತ್ತು ಬಿ ಖಾತಾ ಬಗ್ಗೆ ಅಪ್ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 06: ಎ ಮತ್ತು ಬಿ ಖಾತಾ ವಿಚಾರದಲ್ಲಿ ಕ್ರಾಂತಿಕಾರಿ ಕೆಲಸಗಳು ನಡೆದಿವೆ. ಈ ಮೊದಲು ಹೇಗಿತ್ತು, ಏನಾಗಿದೆ ಎಂದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಪಿಪಿಟಿ ತಯಾರಿಸಿ ಪ್ರತಿಯೊಂದೂ ಮಾಹಿತಿ ನೀಡಲಾಗುವುದು. ಟೀಕೆ ಮಾಡುವವರಿಗೂ ಇದರಿಂದ ಉತ್ತರ ದೊರೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಎಲ್ಲಿಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುತ್ತಿರುವ ಪ್ರಕ್ರಿಯೆ ನಿಂತು ಹೋಗಿದೆ, ಮಾರ್ಷಲ್ ಗಳ ನಿಯೋಜನೆಯಾಗಿಲ್ಲ ಎಂಬ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಈ ಪ್ರಕ್ರಿಯೆ ನಿಂತಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರಿಂದ ₹ 1 ಕೋಟಿ ದಂಡ ಸಂಗ್ರಹ ಮಾಡಲಾಗಿದೆ. ಜೊತೆಗೆ ಕಸ ಸಂಗ್ರಹ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಈ ಮೊದಲು 198 ವಾರ್ಡ್ ಗಳು ಮಾತ್ರ ಇದ್ದವು ಈಗ 300ಕ್ಕೂ ಹೆಚ್ಚು ವಾರ್ಡ್ ಗಳು ಆಗುತ್ತಿರುವುದರಿಂದ ಕಸ ಸಂಗ್ರಹ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗುವುದು. ಅಲ್ಲದೇ ಬೆಂಗಳೂರಿನ ವ್ಯಾಪ್ತಿಗೆ ಸೇರದ ಆದರೆ ಪಕ್ಕ ಪಕ್ಕದ ಪ್ರದೇಶಗಳ ಹಕ್ಕು ಸೂಚನೆ ನೀಡಲಾಗಿದೆ. ಏಕೆಂದರೆ ಅದರಿಂದಲೂ ಬೆಂಗಳೂರಿಗೆ ತೊಂದರೆ ಆಗುತ್ತದೆ ಎಂದರು.

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಹಾಗೂ ರಸ್ತೆ ದುರಸ್ತಿಗಳನ್ನು ಅತ್ಯಂತ ವೇಗವಾಗಿ ಅಧಿಕಾರಿಗಳು ಮಾಡುತ್ತಿದ್ದಾರೆ. ದಸರಾ ರಜೆ ಇದ್ದ ಕಾರಣಕ್ಕೆ ಎಲ್ಲೆಂದರಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ಇದಕ್ಕೂ ಸಹ ಒಂದು ಅಭಿಯಾನ ನಡೆಸಲಾಗುವುದು. ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಹಾಗೂ ಕಸವನ್ನು ಎಸೆಯುವರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಬೆಂಗಳೂರನ್ನು ಸ್ವಚ್ಛವಾಗಿ ಇಡಲು ಎಲ್ಲೆಂದರಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದರು.
ನಗರದಾದ್ಯಂತ ಎಲ್ಲೆಂದರಲ್ಲಿ ಕೇಬಲ್ ಗಳನ್ನು ಎಳೆಯಲಾಗಿದೆ. ಬೆಸ್ಕಾಂಗೆ ಸೇರಿದ ಕಂಬಗಳಲ್ಲಿ ಟಿವಿ ಕೇಬಲ್ ಗಳು ನೇತಾಡುತ್ತಿದ್ದು ನಗರ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಸಮಸ್ಯೆ ಬಗೆಹರಿಸಲು ಸಚಿವರಾದ ಕೆ.ಜೆ.ಜಾರ್ಜ್ ಅವರೊಟ್ಟಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಡೆಕ್ ಒಳಗಡೆ ಕೇಬಲ್ ಗಳನ್ನು ಸಾಗಿಸಲು ಯಾರೂ ಸಹ ಸಹಕಾರ ನೀಡುತ್ತಿಲ್ಲ. ಎಂಟನೇ ತಾರಿಕೀನ ನಂತರ 4 ಲಕ್ಷ ವಿದ್ಯುತ್ ಸಂಪರ್ಕ ನೀಡುವುದರ ಬಗ್ಗೆ ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ. ಇದರ ಜೊತೆಗೆ ಮುಂದಿನ ವಾರ ಎ ಹಾಗೂ ಬಿ ಖಾತಾ ವಿಚಾರವಾಗಿ ಮಾಹಿತಿ ನೀಡಲಾಗುವುದು ಎಂದರು.
ಭೂಗರ್ಭದಲ್ಲಿ ಕೇಬಲ ಅಳವಡಿಕೆ ಯೋಜನೆ ಕಳೆದ 10 ವರ್ಷಗಳಿಂದ ಯಶಸ್ವಿಯಾಗದಿರುವ ಕುರಿತು ಮಾತನಾಡಿ, ನಗರದ ಕೆಲವೊಂದು ಕಡೆ ಈ ಡೆಕ್ ಸೌಲಭ್ಯ ನೀಡಲಾಗಿದೆ. ಅವಕಾಶ ಇರುವ ಕಡೆಯಲ್ಲಿ ಹಾಕಿಕೊಳ್ಳಿ ಎಂದು ತಿಳಿಸಿದ್ದೇವೆ. ಇದಕ್ಕಾಗಿ ಬೆಸ್ಕಾಂ, ಪಾಲಿಕೆಗಳು ಸೇರಿ ಸಭೆ ನಡೆಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಲು ಡಬ್ಬಿಗಳನ್ನು ಇಡುವ ಕುರಿತು ಕೇಳಿದಾಗ, "ಈ ಬಗ್ಗೆ ಪಾಲಿಕೆಗಳ ಆಯುಕ್ತರಿಗೆ ವರದಿ ನೀಡಿ ಎಂದು ಹೇಳಿದ್ದೇನೆ. ಜಿಬಿಎ ಹಾಗೂ ಐದು ಪಾಲಿಕೆಗಳ ಆಯುಕ್ತರು ಸೇರಿ ಇತರೆ ನಗರಗಳಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಂಬುದನ್ನು ತಿಳಿದುಕೊಂಡು ವರದಿ ನೀಡಿ ಎಂದು ತಿಳಿಸಿದ್ದೇನೆ. ಜನರು ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕರು ಸಹ ಇದಕ್ಕೆ ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಅದರ ಫೋಟೋ ತೆಗೆದು ಪಾಲಿಕೆಗಳು ಸೂಚಿಸಿರುವ ದೂರವಾಣಿ ಸಂಖ್ಯೆಗೆ ಕಳುಹಿಸಬೇಕು ಎಂದರು.












Click it and Unblock the Notifications