ಬಿಜೆಪಿ ವಿರುದ್ಧ ‘ರೌಡಿಶೀಟರ್’ ಅಸ್ತ್ರ ಪ್ರಯೋಗಿಸಿದ ಡಿಸಿಎಂ!
ಬೆಂಗಳೂರು: ರಾಜ್ಯದಲ್ಲಿ ಶಿವಮೊಗ್ಗ ಘಟನೆ ಕಿಚ್ಚು ಹೊತ್ತಿಸಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಈ ವಿಚಾರಕ್ಕೆ ಕಿತ್ತಾಟ ನಡೆಯುತ್ತಿದೆ. ಇನ್ನು ಬಿಜೆಪಿ ಲೀಡರ್ಸ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೇ ಅಸ್ತ್ರ ಪ್ರಯೋಗಿಸುತ್ತಿದ್ದು, ಗಂಭೀರ ಆರೋಪವನ್ನೂ ಮಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರ ಆರೋಪಗಳಿಗೆ ವಿರುದ್ಧವಾಗಿ ಈಗ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜ್ಯದಲ್ಲಿ ಶಿವಮೊಗ್ಗ ಘಟನೆ ಬಳಿಕ ಕಿರಿಕ್ ಜೋರಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ನ ಕಿತ್ತಾಟ ಕಿಚ್ಚು ಹೊತ್ತಿಸಿದೆ. ಈ ನಡುವೆ ಬೇರೆ ವಿಚಾರಗಳು ಕೂಡ ಎಂಟ್ರಿಯಾಗಿದೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುವ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಡಿಸಿಎಂ, ಬಿಜೆಪಿ ನಾಯಕರಿಗೆ ಮಾಡಲು ಕೆಲಸವಿಲ್ಲ. ತಮ್ಮ ಮನೆ ಹುಳುಕು, ದೋಸೆ ತುತು ಅವರ ಕಣ್ಣಿಗೆ ಕಾಣುತ್ತಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಅಂತಾ ಜನರಿಗೆ ಗೊತ್ತಿಲ್ಲ ಅಂತಾ ಇವರು ತಿಳಿದುಕೊಂಡಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು.

ಎಲ್ಲಿ ಕೂರಿಸಬೇಕೋ ಅಲ್ಲಿಕೂರಿಸಿದ್ದಾರೆ!
ಜನ ಅವರನ್ನ ಎಲ್ಲಿ ಕೂರಿಸಬೇಕೋ ಅಲ್ಲಿಕೂರಿಸಿದ್ದು, ವಿಪಕ್ಷ ನಾಯಕನ ಆಯ್ಕೆ ಮಾಡಲು ಅವರಿಗೆ ಆಗುತ್ತಿಲ್ಲ. ನನಗೆ ಹೇಳುತ್ತಾರಲ್ಲ ಬಿಜೆಪಿ ಸರ್ಕಾರದಲ್ಲಿ ಹಲವು ಕೇಸ್ಗಳನ್ನ ವಾಪಸ್ ಪಡೆದಿದ್ದಾರೆ. ಹಿಂಸಾಚಾರ ಪ್ರಕರಣಗಳನ್ನೂ ವಾಪಸ್ ಪಡೆದಿದ್ದಾರೆ. 2019ರಲ್ಲಿ ಒಟ್ಟು 385 ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಹೀಗೆ ಸಾವಿರಕ್ಕೂ ಹೆಚ್ಚು ಘಟನೆಗಳು ಇವೆ. ಆರಂಭದಲ್ಲಿ 7361 ರೌಡಿ ಶೀಟರ್ಗಳನ್ನ ಬಿಜೆಪಿ ಅಧಿಕಾರವಧಿಯಲ್ಲಿ ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮತ್ತೊಂದು ಗಂಭೀರ ಆರೋಪವನ್ನೂ ಬಿಜೆಪಿ ಪಕ್ಷದ ವಿರುದ್ಧ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ.
ದಾಖಲೆ ಅಸ್ತ್ರ ಪ್ರಯೋಗಿಸಿದ ಡಿಸಿಎಂ!
ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಮಾಧುಸ್ವಾಮಿ, ಅಂಗಾರ ಹಾಗೂ ಅರುಣ್ ಕುಮಾರ್ , ಜಿ ಪಾಟೀಲ್, ಭೋಪಯ್ಯ, ದೊಡ್ಡನಗೌಡರು ಮತ್ತು ವೀರಣ್ಣ ಚರಂತಿಮಠ್, ಎಸ್.ಆರ್. ವಿಶ್ವನಾಥ್, ಬಿ.ಎಸ್. ಪಾಟೀಲ್, ಸುಭಾಸ್ ಗುತ್ತೆದಾರ್ ಸೇರಿ ರಾಜಕುಮಾರ ಪಾಟೀಲ್, ರವೀಂದ್ರನಾಥ್ ಮಾಡಳ್ ವಿರೂಪಾಕ್ಷಪ್ಪ, ಆನಂದ್ ಮಾಮನಿ, ಅರವಿಂದ ಬೆಲ್ಲದ್, ಸವದತ್ತಿ ಪಾಟೀಲ್, ಎಸ್.ಕೆ ಬೆಳ್ಳುಬ್ಬಿ, ಎನ್ ರವಿಕುಮಾರ್ ಇವರೆಲ್ಲ ವಾಪಸ್ ಗೆ ಮನವಿ ಮಾಡಿದ್ರು. ಈ ಬಗ್ಗೆ ದಾಖಲೆಗಳನ್ನ ನಾನು ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಬಿಜೆಪಿ ನಾಯಕರಿಗೆ ಅವಸರ ಇದೆ, ನೀವು ಅವರನ್ನು ತೋರಿಸುತ್ತಿದ್ದೀರಿ. ಪಾಪ ಅವರದ್ದು ಏನೂ ನಮಗೆ ಗೊತ್ತಿಲ್ಲ ಅಂತಾ ತಿಳಿದುಕೊಂಡಿದ್ದಾರೆ. ಅವರು ಬರೆದಿದ್ದು, ಪತ್ರಗಳಿಗೆ ಸಹಿ ಹಾಕಿದ್ದು ಎಲ್ಲಾ ತಂದು ಇಡ್ಲಾ? ಎಂದು ಡಿಸಿಎಂ ಸವಾಲು ಎಸೆದಿದ್ದಾರೆ. ನಾನು ಹೆಸರು ಹೇಳಿದಿನಲ್ಲ, ನಾವು ಬರೆದಿಲ್ಲ ಎಂದು ಹೇಳಲಿ ನಾನು ಮುಂದಿಟ್ಟು ಹೇಳುತ್ತೇನೆ ಎಂದು ಈ ಸಂದರ್ಭದಲ್ಲಿ ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಪ್ರತ್ಯಾರೋಪ ಮಾಡಿದ್ದಾರೆ.
ಜಾತಿ ಗಣತಿ ಬಗ್ಗೆ ಡಿಸಿಎಂ ಹೇಳಿದ್ದೇನು?
ಮತ್ತೊಂದು ಕಡೆ ಜಾತಿ ಗಣತಿ ಬಗ್ಗೆಯೂ ಮಾತನಾಡಿದ ಡಿಸಿಎಂ ನಮ್ಮ ಸರ್ಕಾರ ಇದ್ದಾಗ ಕಾಂತರಾಜ್ ನೇತೃತ್ವದಲ್ಲಿ ಸಮಿತಿ ಮಾಡಿದ್ದೆವು. ಅದು ಪೂರ್ತಿ ಆಗಿರಲಿಲ್ಲ, ಅದರ ಕುರಿತು ಜನರ ಬೇಡಿಕೆಯಿದೆ. ನಮ್ಮ ಪಕ್ಷ ನಿಲುವು ಕೂಡ ಇದೆ ಎಂದಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಕೂಡ ಬಿಹಾರ ರೀತಿ ಜಾತಿ ಗಣತಿ ರಿಲೀಸ್ ಮಾಡುವ ಮುನ್ಸೂಚನೆ ನೀಡಿದ್ದಾರೆ ಡಿಸಿಎಂ. ಒಟ್ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರ ಆರೋಪ ಹಾಗೂ ಅಸ್ತ್ರಗಳಿಗೆ ಉತ್ತರ ನೀಡಿದ್ದಾರೆ. ಇದಕ್ಕೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅಂತಾ ಕಾದು ನೋಡಬೇಕಿದೆ.












Click it and Unblock the Notifications