ಖಾಸಗಿ ಭೇಟಿ ಬಳಿಕ ಡಿಕೆಶಿ-ಬಿಎಸ್ವೈ ಮಾಧ್ಯಮಗಳಿಗೆ ಹೇಳಿದ್ದೇನು?
ಬೆಂಗಳೂರು, ನವೆಂಬರ್ 28 : ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಅವರು ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಗೆ ಬುಧವಾರ ಹಠಾತ್ತನೆ ಭೇಟಿ ನೀಡಿ ರಾಜ್ಯ ರಾಜಕೀಯದಲ್ಲಿ ಅನುಮಾನದ ಅಲೆ ಏಳುವಂತೆ ಮಾಡಿದ್ದಾರೆ.
ಶಿವಾನಂದ ವೃತ್ತದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಮಗ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ ಸೇರಿ ಒಟ್ಟು ಒಂಬತ್ತು ಮಂದಿ ಶಾಸಕರು, ಸಂಸದರನ್ನು ಬಿ.ಎಸ್. ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಕರೆದುಕೊಂಡು ಹೋಗಿದ್ದರು.
ಈ ದೀಢೀರ್ ಭೇಟಿ ಎಲ್ಲರಲ್ಲೂ ಭಾರಿ ಕುತೂಹಲ ಕೆರಳಿಸಿತ್ತು. ಬಿಎಸ್ವೈ ಆಗಮಿಸುತ್ತಿರುವ ವಿಷಯ ಕೇಳಿ ಡಿ.ಕೆ. ಶಿವಕುಮಾರ್ ಅವರು ಹೈದರಾಬಾದ್ ಹೋಗಬೇಕಾದ ತಮ್ಮ ಕಾರ್ಯಕ್ರಮವನ್ನು ರದ್ದು ಮಾಡಿಕೊಂಡು ಅವರಿಗಾಗಿ ಕಾದರು.
ಯಡಿಯೂರಪ್ಪ ಅವರು ಬಂದಾಗ ತಬ್ಬಿಕೊಂಡು ನಗುಮೊಗದಿಂದ ಡಿ.ಕೆ. ಶಿವಕುಮಾರ್ ಅವರು ಸ್ವಾಗತಿಸಿದರು. ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಇಬ್ಬರೂ ನಾಯಕರು ಮಾತನಾಡಿ ತಮ್ಮ ಸ್ನೇಹದ ಬಗ್ಗೆ ಮತ್ತು ಈ ಭೇಟಿಯ ವಿಷಯದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ನಾವಿಬ್ಬರೂ ಹಳೆಯ ಗೆಳೆಯರು: ಬಿಎಸ್ವೈ
ಡಿಕೆಶಿ ಮತ್ತು ನಾವು ಹಳೆಯ ಗೆಳೆಯರು. ಶಿವಮೊಗ್ಗದ ಜಿಲ್ಲೆಯ ನೀರಾವರಿ ಯೋಜನೆಗಳು ಮತ್ತು ಸಿಗಂಧೂರು ಸೇತುವೆ ಬಗ್ಗೆ ಭೇಟಿ ಸಮಯ ಮಾತನಾಡಿದ್ದೇವೆ. ಡಿ.ಕೆ.ಶಿ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಡಿ.ಕೆ.ಶಿ ಪ್ರತಿಕ್ರಿಯೆ ಏನು?
ಯಡಿಯೂರಪ್ಪ ಅವರು ಏಳು ಬಾರಿ ವಿಧಾನಸಭೆ ಯಲ್ಲಿ ಕೆಲಸ ಮಾಡಿದ್ದಾರೆ. ಲೋಕಸಭೆಯಲ್ಲಿಯೂ ಕೆಲಸ ಮಾಡಿದ್ದಾರೆ. ಅವರಿಗೆ ದೇವರು ಹಲವು ಅವಕಾಶ ಕೊಟ್ಟಿದ್ದಾರೆ. ಈ ಬಾರಿ ನಾವು ಕೆಲಸ ಮಾಡಲೆಂದು ನಮಗೆ ಅವಕಾಶ ಕೊಟ್ಟಿದ್ದಾರೆ. ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗಲೂ ನಮಗೆ ಹಲವು ಕೆಲಸ ಮಾಡಿಕೊಟ್ಟಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಭೇಟಿ ಹಿಂದೆ ರಾಜಕೀಯ ಉದ್ದೇಶವೂ ಇದೆ
ವಿರೋಧ ಪಕ್ಷದ ನಾಯಕರು ಹೀಗೆ ಸಚಿವರ ಮನೆಗೆ ಹೋಗಿ ಸಮಸ್ಯೆಗಳ ಬಗ್ಗೆ ಮಾತನಾಡುವುದು ಅಪರೂಪ. ವಿಧಾಸೌಧದಲ್ಲಿನ ಕಚೇರಿಗೆ ಹೋಗಿಯೋ ಅಥವಾ ಪತ್ರ ಬರೆದೋ ಸಚಿವರ ಗಮನ ಸೆಳೆಯಲಾಗುತ್ತದೆ. ಆದರೆ ಹೀಗೆ ಏಕಾಏಕಿ ಮನೆಗೆ ಹೋಗಿ ಮಾತುಕತೆ ನಡೆಸಿರುವುದರ ಹಿಂದೆ ರಾಜಕೀಯ ಉದ್ದೇಶವೂ ಇದ್ದೇ ಇದೆ ಎಂದು ಸುಲಭಕ್ಕೆ ಊಹಿಸಬಹುದು.

ಬುಕ್ಲೆಟ್ ಕೊಟ್ಟ ಯಡಿಯೂರಪ್ಪ
ಭೇಟಿ ಸಮಯ ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಬುಕ್ಲೆಟ್ ಒಂದನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಇದರಲ್ಲಿ ಇತ್ತೀಚೆಗೆ ಮುಗಿದ ಶಿವಮೊಗ್ಗ ಲೋಕಸಭೆ ಉಪಚುನಾವಣೆಯ ಮತ ವಿಂಗಡಣೆಯ ಲೆಕ್ಕಗಳಿವೆ ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಬಿಜೆಪಿಯವರು ವಿಧಾನಸಭೆ ಕಲಾಪಗಳಲ್ಲಿ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಿದ ರೆಕಾರ್ಡ್ನ ಮಾಹಿತಿಯ ಬುಕ್ಲೆಟ್ ಅದಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.












Click it and Unblock the Notifications