ಆಗಸ್ಟ್ 9ರ ಕರ್ನಾಟಕದ ಜಿಲ್ಲಾಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಲಭ್ಯ
ಬೆಂಗಳೂರು, ಆಗಸ್ಟ್ 09; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಪರಾಧ, ರಾಜಕೀಯ ಸೇರಿದಂತೆ ವಿವಿಧ ಘಟನೆಗಳು ನಡೆಯುತ್ತವೆ. ಜಿಲ್ಲಾಸುದ್ದಿಗಳನ್ನು ಒಂದೇ ಕ್ಲಿಕ್ನಲ್ಲಿ ನೀಡುವ ಉದ್ದೇಶ ಈ ಪುಟದ್ದು. ವಿವಿಧ ಜಿಲ್ಲೆಗಳ ಸುದ್ದಿಗಳು ಇಲ್ಲಿವೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ನಾಡಿಗೆ ಒಳಿತಾಗುವಂತೆ ಪ್ರಾರ್ಥಿಸಿದರು. ಬಳಿಕ ಸತ್ತೂರು ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಸಂಪುಟ ಸಹೋದ್ಯೋಗಿಗಳೊಂದಿಗೆ ಮಠದಲ್ಲಿ ಭೋಜನ ಸವಿದರು.
ಮೊದಲ ಶ್ರಾವಣ ಸೋಮವಾರವಾದ್ದರಿಂದ ದೇವಾಲಯದಲ್ಲಿ ನೂರಾರು ಭಕ್ತರಿದ್ದರು. ಮುಖ್ಯಮಂತ್ರಿ ಬಂದು ಹೋಗುವವರೆಗೂ ಭಕ್ತರು ಚಾಮುಂಡೇಶ್ವರಿ ದೇಗುಲ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಮುಖ್ಯಮಂತ್ರಿ ಬಂದು ಹೋಗುವವರೆಗೂ ದೂರದ ಊರುಗಳಿಂದ ಬಂದಿದ್ದ ಭಕ್ತರು ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು.

ಸಿಎಂ ಭೇಟಿ ನೀಡಿದ್ದ ವೇಳೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಯಾರೊಬ್ಬರೂ ಸಾಮಾಜಿಕ ಅಂತರ ಪಾಲಿಸಲಿಲ್ಲ. ಕೆಲವರು ಮಾಸ್ಕ್ ಹಾಕಿದ್ರೆ, ಕೆಲವರು ರಾಜಾರೋಷವಾಗಿ ಓಡಾಡುತ್ತಿದ್ದರು. ಪೊಲೀಸರು ಅಸಹಾಯಕತೆಯಿಂದ ನಿಂತಿದ್ದರು.
ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಅರ್ಹರು; "ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ" ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಸೋಮವಾರ ಮೈಸೂರಿನ ಸುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಅವರು, "ಮುಂಬರುವ ದಿನದಲ್ಲಿ ರೇಣುಕಚಾರ್ಯ ಸೇರಿದಂತೆ ಉಳಿದವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ" ಎಂದರು.
"ಖಾತೆ ಹಂಚಿಕೆಯಲ್ಲಿ ವಿಭಾಗವಾರು ಏರುಪೇರಾಗಿದೆ. ಮುಂದೆ ಇದು ಸರಿಯಾಗುತ್ತದೆ. ನನಗೆ ಕೊಟ್ಟಿರುವ ಖಾತೆ ಬಗ್ಗೆ ಅಸಮಾಧಾನ ಇಲ್ಲ. ನನ್ನ ಮನಸಿನಲ್ಲಿರುವ ಖಾತೆಯನ್ನು ಸಿಎಂ ಕೊಟ್ಟಿದ್ದಾರೆ. ಸ್ವತಃ ನಾನು ಕೈಗಾರಿಕೋದ್ಯಮಿ, ಹೀಗಾಗಿ ಕೈಗಾರಿಕೋದ್ಯಮದ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ರೂಪಿಸುತ್ತೇನೆ" ಎಂದು ಸಚಿವರು ತಿಳಿಸಿದರು.
ನಾನು ದೆಹಲಿಗೆ ಹೋಗುತ್ತೇನೆ; ಮೈಸೂರಿನಲ್ಲಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮಾತನಾಡಿದ್ದು, "ಅಗತ್ಯ ಬಿದ್ದರೆ ನಾನು ದೆಹಲಿಗೆ ಹೋಗುತ್ತೇನೆ. ನನ್ನ ಕ್ಷೇತ್ರದ ಕೆಲಸಕ್ಕಾಗಿ ಹೋಗುತ್ತೇನೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ. ರಾಜಕೀಯದಲ್ಲಿ ಅಪೇಕ್ಷೆ ಇರುತ್ತದೆ. ಅಪೇಕ್ಷೆ ಪಡುವುದರಲ್ಲಿ ತಪ್ಪಿಲ್ಲ. ನಾನು ವೈರಸ್ ಜೊತೆ ಬದುಕಿದ್ದೆ.
ಈ ಕೆಲಸದ ಬಗ್ಗೆ ಕೇಂದ್ರ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂದೊಂದು ದಿನ ತಮಗೂ ಸಚಿವ ಸ್ಥಾನ ಸಿಗಲಿದೆ" ಎಂದು ಭರವಸೆ ವ್ಯಕ್ತಪಡಿಸಿದರು.
ಶೂಟಿಂಗ್ ವೇಳೆ ಫೈಟರ್ ಸಾವು; 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಓರ್ವ ಫೈಟರ್ ಸಾವನ್ನಪ್ಪಿ ಮೊತ್ತೊರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ಜೋಗರಪಾಳ್ಯ ಗ್ರಾಮದಲ್ಲಿ ನಡೆದಿದೆ.
ಫೈಟರ್ ವಿವೇಕ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಲಾವಿದ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ದೇಶಕ ಶಂಕರ್ ರಾಜ್, ಸಾಹಸ ನಿರ್ದೇಶಕ ವಿನೋದ್, ನಿರ್ಮಾಪಕ ಗುರುದೇಶಪಾಂಡೆಯನ್ನು ಬಿಡದಿ ಪೊಲೀಸರು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅಜಯ್ ರಾವ್, ರಚಿತಾ ರಾಮ್ ಚಿತ್ರದ ಪ್ರಮುಖ ಕಲಾವಿದರಾಗಿದ್ದಾರೆ.
ಶಿವಮೊಗ್ಗದಲ್ಲಿ ಯುವಕನ ಕೊಲೆ; ಕ್ಷುಲಕ ವಿಚಾರಕ್ಕೆ ಯುವಕನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ಸೋಮವಾರ ನಡೆದಿದೆ. ರಾಹಿಲ್ (25) ಕೊಲೆಯಾದ ದುರ್ದೈವಿ. ಅಪಘಾತ ಪ್ರಕರಣ ಸಂಬಂಧ ನಡೆದ ಗಲಾಟೆ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ನಾನು ಪ್ರತಿಕ್ರಿಯೆ ನೀಡುವುದಿಲ್ಲ; "ಯಾರೋ ಮಾತನಾಡುವುದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ, ಅದೆಲ್ಲವೂ ಅನಾವಶ್ಯಕ, ಅದರ ಬಗ್ಗೆ ಮಾತಾನಾಡುವ ಅವಶ್ಯಕತೆ ಇಲ್ಲಾ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆಗೆ ಬಿಡದಿಯ ತೋಟದ ಮನೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ಕೇಂದ್ರ ಸರಕಾರ ಏನು ನನ್ನ ಕೈಯಲ್ಲಿದೆಯೇ?. ಇಡಿ ಹಾಗೂ ಐಟಿ ನನ್ನ ಕೈಯಲ್ಲಿ ಇಲ್ಲಾ, ಅವರಿಗೆ ನನ್ನ ಮೇಲೆ ಪ್ರೀತಿ ಅದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಾರೆ" ಎಂದು ಜಮೀರ್ಗೆ ಟಾಂಗ್ ನೀಡಿದರು.












Click it and Unblock the Notifications