ಕರ್ನಾಟಕದ ಜಿಲ್ಲಾಸುದ್ದಿಗಳ ಕ್ವಿಕ್ ಲುಕ್
ತುಮಕೂರು, ಏ. 29 : ತುಮಕೂರು ನಗರದಲ್ಲಿ ಕಳೆದ ಆರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಪತಂಜಲಿ ಯೋಗ ಮಂದಿರ ಲೋಕಾರ್ಪಣಗೊಳ್ಳಲು ಸಜ್ಜಾಗಿದೆ. ಮೇ 1 ಹಾಗೂ 2 ರಂದು ಯೋಗ ಮಂದಿರದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಧಾನ ಸಂಚಾಲಕ ಅ.ರ. ರಾಮಸ್ವಾಮಿ ಹೇಳಿದ್ದಾರೆ.
ತುಮಕೂರಿನ ಹನುಮಂತಪುರದ ಬೈಲಾಂಜನೇಯಸ್ವಾಮಿ ದೇವಾಲಯದ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ಪ್ರದೇಶದಲ್ಲಿ ಯೋಗವುಂದಿರವನ್ನು 1 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಮಿತಿ ವತಿಯಿಂದ ತುಮಕೂರಿನಲ್ಲಿ 14 ಕಡೆ ಮಕ್ಕಳ ಯೋಗ ಶಿಬಿರ ನಡೆಸಲಾಗುತ್ತಿದ್ದು, 90 ಗ್ರಾಮೀಣ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಾಮಸ್ವಾಮಿ ಹೇಳಿದರು.
ಹಣ, ಹೆಸರು, ಪ್ರತಿಷ್ಠೆಗಳನ್ನು ಅಪೇಕ್ಷೆ ಪಡದೆ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಸಮಿತಿಗೆ ಬರುವ ವ್ಯಕ್ತಿಗೆ ಕುಟುಂಬ, ಸಮಾಜ, ಪರಿಸರದೊಡನೆ ಸಂಬಂಧ ಕಲ್ಪಿಸುತ್ತಾ, ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಪತಂಜಲಿ ಯೋಗ ಮಂದಿರ ಉದ್ಘಾಟನೆ
ತುಮಕೂರು ನಗರದಲ್ಲಿ ಕಳೆದ ಆರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಪತಂಜಲಿ ಯೋಗ ಮಂದಿರ ಲೋಕಾರ್ಪಣಗೊಳ್ಳಲು ಸಜ್ಜಾಗಿದ್ದು ಮೇ 1 ಹಾಗೂ 2 ರಂದು ಯೋಗ ಮಂದಿರದ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಜ್ಯ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಧಾನ ಸಂಚಾಲಕ ಅ.ರ. ರಾಮಸ್ವಾಮಿ ಹೇಳಿದ್ದಾರೆ. ತುಮಕೂರಿನ ಹನುಮಂತಪುರದ ಬೈಲಾಂಜನೇಯಸ್ವಾಮಿ ದೇವಾಲಯದ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ಪ್ರದೇಶದಲ್ಲಿ ಯೋಗ ಮಂದಿರವನ್ನು ನಿರ್ಮಿಸಲಾಗಿದೆ.

ಸರ್ಕಾರದ ವಿರುದ್ಧ ಸುಪ್ರೀಂಗೆ ಅರ್ಜಿ
ಕರ್ನಾಟಕ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಹೊಸ ಮರುಳು ನೀತಿ ರಾಜ್ಯದ ಹಲವೆಡೆ ರಾಜಾರೋಷವಾಗಿ ಉಲ್ಲಂಘನೆಯಾಗುತ್ತಿದ್ದು, ಇದನ್ನು ಪ್ರಶ್ನಿಸಿ ಮೇ ತಿಂಗಳಲ್ಲಿ ಹಸಿರು ಪೀಠದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುವುದಾಗಿ ಬಿಜಾಪುರದ ಭೀಮಾ ನದಿ ನೀರು ಸಂರಕ್ಷಣೆ ರೈತ ವರ್ಗ ಸಮಿತಿ ಅಧ್ಯಕ್ಷ ಪಂಚಪ್ಪ ಕಲ್ಬುರ್ಗಿ ಹೇಳಿದ್ದಾರೆ. ನದಿ ಪರಿಸರ ಕೆಡದಂತೆ ಹಸಿರು ನ್ಯಾಯಪೀಠ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮರಳು ನೀತಿಯನ್ನು ಜಾರಿಗೆ ತಂದಿದೆ. ಆದರೆ, ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಆದ್ದರಿಂದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು ಎಂದರು.

ದೇವಾಲಯ ಲೋಕಾರ್ಪಣೆ
ದೇವನಹಳ್ಳಿಯಲ್ಲಿ ನೇಯ್ಗೆ ಸಮಾಜದವರು ಇತರ ಜನಾಂಗದ ಸಹಕಾರದೊಂದಿಗೆ ತಾಲೂಕು ಕಚೇರಿ ರಸ್ತೆಯಲ್ಲಿ ನಿರ್ಮಿಸಿರುವ ಆದಿಶಕ್ತಿ ಚೌಡೇಶ್ವರಿ ಅಮ್ಮನ ದೇವಾಲಯ ಲೋಕಾರ್ಪಣೆಗೆ ಸಜ್ಜಾಗಿದೆ. ಏ.30 ರಿಂದ ಮೇ.2 ರವರೆಗೆ ವಿಶೇಷ ಧಾರ್ಮಿಕ ಪೂಜಾಕಾರ್ಯ, ಅಮ್ಮನವರ ವಿಗ್ರಹ ಪ್ರತಿಷ್ಠಾಪನೆ, ಹೋಮ ಹವನಾದಿ ಕಾರ್ಯಕ್ರಮಗಳು ದೇವಲಾಯ ಲೋಕಾರ್ಪಣೆಗಾಗಿ ನಡೆಯಲಿವೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ
ಶಿವಮೊಗ್ಗ- ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸಂಚಾರಕ್ಕೆ ತಾತ್ಕಾಲಿಕವಾಗಿ ಅಡಚಣೆ ಉಂಟಾಗಿದೆ. ಬೇಗುವಳ್ಳಿ ಸಮೀಪದಲ್ಲಿ ರಸ್ತೆ ಕುಸಿತ ಉಂಟಾಗಿರುವುದರಿಂದ ತಾತ್ಕಾಲಿಕವಾಗಿ ವಾಹನಗಳ ಮಾರ್ಗವನ್ನು ಬದಲಾವಣೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಭಾರಿ ವಾಹನಗಳು ಆಯನೂರು ಮಾರ್ಗವಾಗಿ, ಲಘು ವಾಹನಗಳು ಹಳ್ಳಿ ದಾರಿಯಲ್ಲಿ ಸಂಚರಿಸುವ ಸಂಬಂಧ ಜಿಲ್ಲಾಡಳಿತ ಅಧಿಕೃತ ಆದೇಶವನ್ನು ಬುಧವಾರ ಹೊರಡಿಸುವ ಸಾಧ್ಯತೆ ಇದೆ. ಬೇಗುವಳ್ಳಿ ಸಮೀಪದ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಪಾಯ ತೆಗೆಯಲಾಗಿದ್ದು, ರಸ್ತೆ ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಗಂಧ ಉತ್ಸವ ಮತ್ತು ಉರುಸ್
ಧಾರ್ಮಿಕ ದತ್ತಿ ಇಲಾಖೆ, ಶ್ರೀ ಹಜರತ್ ಸೈಯ್ಯದ್ ಸಾದತ್ ಸ್ವಾಮಿ ದರ್ಗಾ, ಭೂತರಾಯ ಚೌಡೇಶ್ವರಿ ದೇವಸ್ಥಾನ, ಹಣಗೆರೆಕಟ್ಟೆ, ತೀರ್ಥಹಳ್ಳಿ ತಾಲ್ಲೂಕು ಇಲ್ಲಿ ಮೇ 8ರಂದು ಗಂಧ ಉತ್ಸವ ಮತ್ತು ಉರುಸ್ ನಡೆಯಲಿದೆ. ಅಂದು ಮಧ್ಯಾಹ್ನ 3ಗಂಟೆಗೆ ಬಸವನಗದ್ದೆ ದಿ: ಬಿ.ಪಿ. ತಿಮ್ಮಪ್ಪಯ್ಯ ಇವರ ಮನೆಯಿಂದ ಶ್ರೀಗಂಧ ಪ್ರಸಾದ ತಂದ ನಂತರ ಸಂಜೆ 7ಗಂಟೆಗೆ ನಮಾಜ್ ನಂತರ ಗಂಧ ಏರಿಸಲಾಗುತ್ತದೆ. ರಾತ್ರಿ ‘ಕವಾಲಿ' ಕಾರ್ಯಕ್ರಮಗಳು ನಡೆಯಲಿವೆ ಎಂದು ಧಾರ್ಮಿಕ ಇಲಾಖೆ ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿರೂಪಾಕ್ಷ ಸನ್ನಿಧಿಯಲ್ಲಿ ಅನ್ನದಾನ
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ಪ್ರಸಾದ ವಿತರಣೆ ಕಾರ್ಯವನ್ನು ಏ. 27 ರಿಂದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ಇಲಾಖೆಯಿಂದ ಆರಂಭಿಸಲಾಗಿದೆ. ಅನ್ನಸಂರ್ಪಣೆಗಾಗಿ ಹಣ, ಧವಸ-ಧಾನ್ಯ ನೀಡಬಯಸುವ ಭಕ್ತಾದಿಗಳು ದೇವಸ್ಥಾನದ ಕಾರ್ಯಾಲಯದಲ್ಲಿ ಮಾತ್ರ ಸಂದಾಯ ಮಾಡಿ, ಅಧಿಕೃತ ರಸೀದಿ ಪಡೆಯುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶರಾವ್ ಮನವಿ ಮಾಡಿದ್ದಾರೆ.

ಪ್ರಶಸ್ತಿಗೆ ಅರ್ಜಿ ಆಹ್ವಾನ
ಕೋಮು ಸೌಹಾರ್ದ ರಾಷ್ಟ್ರೀಯ ಐಕ್ಯತೆಗಾಗಿ ರಾಷ್ಟ್ರ ಮಟ್ಟದಲ್ಲಿ ನೀಡಲಾಗುವ ರಾಷ್ಟ್ರೀಯ ಕಬೀರ ಪುರಸ್ಕಾರಕ್ಕಾಗಿ ಧಾರವಾಡ ಜಿಲ್ಲೆಯ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಪುರಸ್ಕಾರವನ್ನು ಮೂರು ಹಂತಗಳಲ್ಲಿ ನೀಡಲಾಗುತ್ತಿದ್ದು , ಮೊದಲ ಹಂತದ ಪುರಸ್ಕಾರ 2 ಲಕ್ಷ ರೂ., ಎರಡನೇ ಹಂತಕ್ಕೆ 1 ಲಕ್ಷ ರೂ. ಹಾಗೂ ಮೂರನೇ ಹಂತಕ್ಕೆ 50 ಸಾವಿರ ರೂ. ಬಹುಮಾನದ ಮೊತ್ತ ನಿಗದಿ ಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು ಏ.30ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.












Click it and Unblock the Notifications